ದಾವಣಗೆರೆ :ಚನ್ನಗಿರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ನಿವಾಸಿ ಚಿಕ್ಕಪ್ಪ ಅಲಿಯಾಸ್ ಪಿಳ್ಳಂಗಿರಿ ಚಿಕ್ಕಣ್ಣ, ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ಗ್ರಾಮದ ನಿಂಗಪ್ಪ ಹಾಗೂ ಚನ್ನಗಿರಿ ತಾಲೂಕಿನ ಎರೆಹಳ್ಳಿ ಗ್ರಾಮದ ಮಂಜಪ್ಪ ಎಂದು ಗುರುತಿಸಲಾಗಿದೆ.
ಈ ಮೂವರನ್ನು ರಾಷ್ಟ್ರೀಯ ಹೆದ್ದಾರಿ 13ರ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ - ಸುಣಗೆರೆ ಮಧ್ಯೆಯ ನೀಲಗಿರಿ ತೋಪಿನ ಬಳಿ ಬಂಧಿಸಲಾಗಿದೆ. ಆರೋಪಿಗಳಿಂದ 5.5 ಲಕ್ಷ ರೂಪಾಯಿ ಮೌಲ್ಯದ 79 ಕೆ ಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಬೈಕ್ ನಲ್ಲಿ ಬಂದು ಅಡ್ಡಗಟ್ಟುತ್ತಿದ್ದರು. ಈ ತಂಡದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದಾಳಿ ನಡೆಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಈ ವೇಳೆ ಪೊಲೀಸರನ್ನು ಕಂಡು ನಾಲ್ವರು ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾರೆ, ಸಿಕ್ಕಿಬಿದ್ದ ಮೂವರು ಆರೋಪಿಗಳಿಂದ 2 ಬೈಕ್ , ಚಾಕು, ಖಾರದಪುಡಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಗಳನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಚನ್ನಗಿರಿ ತಾಲೂಕಿನ ಮಾಡಾಳ್ ಮತ್ತು ಮಾವಿನಕಟ್ಟೆ ಗ್ರಾಮಗಳಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಚನ್ನಗಿರಿ ವೃತ್ತ ನಿರೀಕ್ಷಕ ಆರ್. ಆರ್. ಪಾಟೀಲ್, ಪಿಎಸ್ಐ ಶಿವರುದ್ರಪ್ಪ, ಎಸ್. ಮೇಟಿ ಮತ್ತವರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.