ಕರ್ನಾಟಕ

karnataka

ETV Bharat / state

ಸ್ಪರ್ಧಿಸ್ತೇನೆ.. ಆದರೆ, ಕೆಲ ಕಂಡೀಷನ್ಸ್ ಅಪ್ಲೈ ಅಂದರು ಎಸ್‌.ಎಸ್‌ ಮಲ್ಲಿಕಾರ್ಜುನ್‌

ಶಾಮನೂರು ಶಿವಶಂಕರಪ್ಪನವರು ಸಚಿವ ಸ್ಥಾನ ನೀಡದ ಬೇಸರಕ್ಕೆ ಈ 88 ರ ಹರೆಯದ ವಯಸ್ಸಿನಲ್ಲಿ, ಬಿರು ಬೇಸಿಗೆಯಲ್ಲಿ ಓಡಾಡಿ ಚುನಾವಣೆ ಪ್ರಚಾರ ಮಾಡುವುದು ಕಷ್ಟವೆಂದು ಖಡಕ್ಕಾಗಿ ತಮಗೆ ನೀಡಿರುವ ಟಿಕೆಟ್ ಬೇರೆಯವರಿಗೆ ಕೊಡಿ ಎಂದು ಹೇಳಿದ್ದರು.

By

Published : Mar 30, 2019, 7:54 AM IST

ಎಸ್ ಎಸ್ ಮಲ್ಲಿಕಾರ್ಜುನ್

ದಾವಣಗೆರೆ :ಬಹಳಷ್ಟು ಹಗ್ಗಜಗ್ಗಾಟ, ಮನವೊಲಿಕೆ ನಂತರ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಯೆಸ್.. ಯೆಸ್ ಎಂದು ಹೇಳಲು ಕೆಲವು ಷರತ್ತುಗಳನ್ನು ಹಾಕಿದ್ದಾರೆ.

ಶಾಮನೂರು ಶಿವಶಂಕರಪ್ಪನವರು ಸಚಿವ ಸ್ಥಾನ ನೀಡದ ಬೇಸರಕ್ಕೆ ಈ 88 ರ ಹರೆಯದ ವಯಸ್ಸಿನಲ್ಲಿ, ಬಿರು ಬೇಸಿಗೆಯಲ್ಲಿ ಓಡಾಡಿ ಚುನಾವಣೆ ಪ್ರಚಾರ ಮಾಡುವುದು ಕಷ್ಟವೆಂದು ಖಡಕ್ಕಾಗಿ ತಮಗೆ ನೀಡಿರುವ ಟಿಕೆಟ್ ಬೇರೆಯವರಿಗೆ ಕೊಡಿ ಎಂದು ಹೇಳಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಕಾಂಗ್ರೆಸ್ ನಾಯಕರು ಒಲ್ಲದ ಮನಸ್ಸಿನಿಂದ ಬೇರೆ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತೊಮ್ಮೆ ಮನವೊಲಿಸಿ ರಾಜ್ಯ ಕಾಂಗ್ರೆಸ್ಸಿನ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬಳಿ ಶಾಮನೂರು ಪುತ್ರ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿಸಿ ಸ್ಪರ್ಧೆಗೆ ಒತ್ತಾಯಿಸಿದಾಗ, ಅವರು ಪಕ್ಷದ ಬಗ್ಗೆ ಇರುವ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಂತರ ಅಂತಿಮವಾಗಿ ತಂದೆ ಬದಲು ತಾವೇ ಸ್ಪರ್ಧಿಸಬೇಕೆಂದು ಹೇಳಿದಾಗ ಮಲ್ಲಿಕಾರ್ಜುನ್ ಕೆಲವು ಷರತ್ತುಗಳನ್ನು ಈಡೇರಿಸುವುದಾದರೆ ನಿಲ್ಲುವುದಾಗಿ ಹೇಳಿದ್ದಾರೆ.

ಮೊದಲನೆ ಷರತ್ತು: ಲೋಕಸಭಾ ಚುನಾವಣೆ ಬಳಿಕ ತಮಗಾಗಲಿ ಅಥವಾ ತಮ್ಮ ತಂದೆಗಾಗಲಿ ದೋಸ್ತಿ ಸರಕಾರದಲ್ಲಿ ಸಚಿವ ಸ್ಥಾನ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಒಂದೊಮ್ಮೆ ಸೋತರೂ ನಮ್ಮ ಕುಟುಂಬಕ್ಕೆ ಮಂತ್ರಿ ಪದವಿ ನೀಡಬೇಕು. ಮಾತು ತಪ್ಪಬಾರದು ಎಂದಿದ್ದಾರೆ ಎನ್ನಲಾಗುತ್ತಿದೆ.

ಈ ಷರತ್ತಿಗೆ ತಲೆದೂಗಿದ ಮುಖಂಡರು ಚುನಾವಣೆ ಬಳಿಕ ಹೈಕಮಾಂಡ್ ಬಳಿ ಚರ್ಚಿಸಿ ಸಚಿವ ಹುದ್ದೆ ನೀಡಲು ಪ್ರಯತ್ನಿಸಲಾಗುವುದೆಂದು ಕೆ. ಸಿ ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಭರವಸೆ ಕೊಟ್ಟಿದ್ದಾರೆನ್ನಲಾಗಿದೆ.

ಎರಡನೇ ಷರತ್ತು :ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಗೂ " ಪಾರ್ಟಿಯಿಂದ ಎಲೆಕ್ಷನ್ ಫಂಡ್ " ನೀಡಬೇಕು. ಈವರೆಗೂ ಕಾಂಗ್ರೆಸ್ ಪಕ್ಷದಿಂದ ಯಾವ ಚುನಾವಣೆಯಲ್ಲೂ ಸ್ವಲ್ಪವೂ ಪಾರ್ಟಿ ಫಂಡ್ ಕೊಡಲಾಗಿಲ್ಲ. ಈ ಬಾರಿ ಚುನಾವಣೆ ವೆಚ್ಚಕ್ಕೆ ಎಲ್ಲ ಕ್ಷೇತ್ರಗಳಿಗೆ ನೀಡಿದ ಹಾಗೆ ದಾವಣಗೆರೆ ಕ್ಷೇತ್ರಕ್ಕೂ ಕೊಡಬೇಕು ಎಂದು ಮಲ್ಲಿಕಾರ್ಜುನ್ ಕೇಳಿದ್ದಾರೆ ಎನ್ನಲಾಗಿದೆ.

ಚುನಾವಣೆ ವೆಚ್ಚಕ್ಕೆ ಪಕ್ಷದಿಂದ ಆರ್ಥಿಕ ನೆರವು ನೀಡಲಾಗುವುದೆನ್ನುವ ಸ್ಪಷ್ಟ ಭರವಸೆ ನೀಡಿದ ನಂತರ ಸಮಾಧಾನಗೊಂಡ ಮಲ್ಲಿಕಾರ್ಜುನ್ ಅವರು ಚುನಾವಣೆಗೆ ತಂದೆ ಬದಲು ತಾವೇ ಸ್ಪರ್ಧಿಸಲು ಯೆಸ್ ಎಂದಿದ್ದಾರೆ.

ಷರತ್ತುಗಳಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದರಿಂದ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿಯಲು ಶಾಮನೂರು ಕುಟುಂಬ ಅಂತಿಮವಾಗಿ ಹಸಿರು ನಿಶಾನೆ ತೋರಿಸಿದೆ. ಅಧಿಕಾರ ನೀಡಲು ನಿರ್ಲಕ್ಷ್ಯ ತೋರಿಸಿದ್ದ ಪಕ್ಷಕ್ಕೆ ಬಿಸಿಯನ್ನೂ ಮುಟ್ಟಿಸಿದೆ.

ಮಲ್ಲಿಕಾರ್ಜುನ ಅವರ ಸ್ಪರ್ಧೆಯಿಂದ ದಾವಣಗೆರೆ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಕಣ ಬಹಳಷ್ಟು ರಂಗೇರಲಿದೆ. ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ವಿರುದ್ಧ ಶಾಮನೂರು ಕುಟುಂಬ ಈ ಬಾರಿಯಾದರೂ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಎನ್ನುವುದಕ್ಕೆ ಮತದಾರ ಇವಿಎಂನಲ್ಲಿ ಉತ್ತರ ನೀಡಲಿದ್ದಾನೆ.

ABOUT THE AUTHOR

...view details