ದಾವಣಗೆರೆ :ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಭೇಟಿಯಾಗಿರೋದು ನಿಜ. ಎರಡು ಬಾರಿ ಮಠಕ್ಕೆ ಬಂದಿದ್ದರು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಪಂಚಮಸಾಲಿ ಸಮಾಜದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಹರಿಹರ ತಾಲೂಕಿನ ಹನಗವಾಡಿಯ ಪಂಚಮಸಾಲಿ ಮಠದಲ್ಲಿ ಮಾತನಾಡಿದ ಅವರು, ಒಂದು ಗಂಟೆ ಕಾಲ ಡಿಸಿಎಂ ಜೊತೆ ಮಾತನಾಡಿದ್ದು ಸತ್ಯ. ಸಚಿವ ಸಂಪುಟ ವಿಸ್ತರಣೆ ವೇಳೆ ಪಂಚಮಸಾಲಿ ಸಮಾಜಕ್ಕೆ ಆದ್ಯತೆ ವಿಚಾರದ ಬಗ್ಗೆ ಮುಂಬರುವ ದಿನಗಳಲ್ಲಿ ಮಾತನಾಡುತ್ತೇನೆ. ಇದು ಸೂಕ್ತ ವೇದಿಕೆ ಅಲ್ಲ. ಈ ಬಗ್ಗೆ ಹೆಚ್ಚು ಈಗ ಮಾತನಾಡಲ್ಲ ಎಂದರು.
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಆ ರೀತಿಯ ವಾತಾವರಣ ಈಗ ನಿರ್ಮಾಣ ಆಗಿಲ್ಲ. ಯೋಗ, ಆಧ್ಯಾತ್ಮದ ಬಗ್ಗೆ ಅಶ್ವತ್ಥ್ ನಾರಾಯಣ್ ಜೊತೆ ಮಾತುಕತೆ ನಡೆಸಿದ್ದೇನೆ. ನಿನ್ನೆ ಬೆಳಗ್ಗೆ ಇಬ್ಬರು ಡಿಸಿಎಂ, ಸಚಿವ ಬೈರತಿ ಬಸವರಾಜ್, ಸಂಸದ ಜಿ ಎಂ ಸಿದ್ದೇಶ್ವರ್, ಪ್ರೊ.ಲಿಂಗಣ್ಣ ಬಂದಿದ್ದರು. ಐದರಿಂದ ಹತ್ತು ನಿಮಿಷ ಇದ್ದು ಮಠದ ಸುತ್ತಮುತ್ತ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಈ ಭಾಗದಿಂದ ಹೊನ್ನಾಳಿಗೆ ಹೋಗ್ತಿದ್ದ ಕಾರಣದಿಂದ ಮಠಕ್ಕೆ ಈವರೆಗೆ ಭೇಟಿ ನೀಡದಿದ್ದ ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಪ್ರೊ. ಲಿಂಗಣ್ಣ ಬಂದಿದ್ದರು. ಡಿಸಿಎಂ ಅಶ್ವತ್ಥ್ ನಾರಾಯಣ್ ಸಹ ಬಂದಿದ್ದರು. ಹೊನ್ನಾಳಿ ಕಾರ್ಯಕ್ರಮ ನಿಮಿತ್ತ ಅರ್ಜೆಂಟಾಗಿ ತೆರಳಿದರು. ಸಂಜೆ ನಾಲ್ಕು ಗಂಟೆಗೆ ಅಶ್ವತ್ಥ್ ನಾರಾಯಣ್ ಮತ್ತೆ ಬಂದಿದ್ದರು. ಸಂಜೆ ಆರೂವರೆ ಗಂಟೆಗೆ ಇಲ್ಲಿಂದ ತೆರಳಿದರು ಎಂದರು.
ಅಶ್ವತ್ಥ್ ನಾರಾಯಣ್ ಡೈನಾಮಿಕ್ ವ್ಯಕ್ತಿ. ಕೋವಿಡ್, ಧ್ಯಾನ, ಮಾನಸಿಕ ಒತ್ತಡದ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜಕಾರಣದ ಬಗ್ಗೆ ನಾವು ಮಾತನಾಡಿಲ್ಲ. ಮೊದಲಿನಿಂದಲೂ ಪರಿಚಯ. ಬೆಂಗಳೂರು, ಅಮೆರಿಕಾ ಸೇರಿ ಎಲ್ಲಿಗೆ ಹೋದಾಗಲೂ ಅವರೂ ಬಂದಿದ್ದರೆ ಭೇಟಿ ಮಾಡುತ್ತಾರೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ದೆಹಲಿ ಪ್ರವಾಸ, ಮಠಕ್ಕೆ ಬಿಜೆಪಿ ಸಚಿವರು, ಶಾಸಕರ ಭೇಟಿ ವಿಚಾರದ ಬಗ್ಗೆ ನಗು ಮೂಲಕವೇ ಈಗ ಎಲ್ಲವನ್ನೂ ಮಾತನಾಡಲ್ಲ ಎಂದ ಶ್ರೀಗಳು, ಗಾಸಿಪ್ಗಳಿಗೆ ಹೆಚ್ಚು ಆಹಾರ ಆಗಲು ಇಷ್ಟ ಇಲ್ಲ. ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಲ್ಲ ಎಂದರು.