ಕರ್ನಾಟಕ

karnataka

By

Published : Jun 14, 2023, 12:37 PM IST

ETV Bharat / state

ಬೆಣ್ಣೆ ನಗರಿಯಲ್ಲಿ ದೊಡ್ಡಮ್ಮ ದೇವಿ ಜಾತ್ರಾ ಮಹೋತ್ಸವ.. ದೇಹದಂಡನೆ, ಭಕ್ತಿಯ ಪರಾಕಾಷ್ಠೆ

ದಾವಣಗೆರೆಯ ದೊಡ್ಡಮ್ಮ ದೇವಿ ಜಾತ್ರೆ ಮಂಗಳವಾರ ವೈಭವದಿಂದ ನಡೆಯಿತು. ಭಕ್ತರು ದೇಹದಂಡನೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು.

Doddamma Devi Jatra Mahotsava
ದೊಡ್ಡಮ್ಮ ದೇವಿ ಜಾತ್ರಾ ಮಹೋತ್ಸವ

ಬೆಣ್ಣೆ ನಗರಿಯಲ್ಲಿ ದೊಡ್ಡಮ್ಮ ದೇವಿ ಜಾತ್ರಾ ಮಹೋತ್ಸವ..

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ದೊಡ್ಡಮ್ಮ ದೇವಿ ಕರಗ ಜರುಗಿತು. ಈ ಜಾತ್ರೆಯಲ್ಲಿ ಭಕ್ತ ಗಣ ಕಟ್ಟಿಕೊಂಡ ಹರಕೆಗಳನ್ನು ತೀರಿಸುವುದು ಅಚ್ಚರಿ. ಇಷ್ಟಾರ್ಥಗಳು ಈಡೇರಿದರೆ ಭಕ್ತರು ದೊಡ್ಡಮ್ಮ ದೇವಿಗೆ ವಿಶೇಷವಾಗಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ದೇವಿಯ ಪವಾಡದಿಂದ ಸಾಕಷ್ಟು ಮಂದಿಗೆ ಒಳ್ಳೆಯದಾಗಿದೆ. ಸಮಸ್ಯೆ, ಸಂಕಷ್ಟಗಳು ದೂರ ಮಾಡುತ್ತಾ ಜನರನ್ನು ಕಾಯುತ್ತಿದ್ದಾಳೆ ಎಂಬುದು ಜನರ ನಂಬಿಕೆ.

ದಾವಣಗೆರೆ ನಗರ ದೇವತೆ ದುರ್ಗಾಂಬಿಕ ದೇವಿ ಹೇಗೋ ಹಾಗೆ ಈ‌ ದೊಡ್ಡಮ್ಮ ದೇವಿ ಕೂಡ ಪವಾಡ ಪ್ರಸಿದ್ಧಿ. ನಗರದ ಭರತ್ ಕಾಲೋನಿಯಲ್ಲಿ ನೆಲೆಸಿರುವ ದೊಡ್ಡಮ್ಮ ದೇವಿ ಕಷ್ಟ ಅಂತಾ ಬರುವ ಭಕ್ತರನ್ನು ಕೈ ಹಿಡಿದು ಕಾಪಾಡುತ್ತಾಳೆ. ಜನರ ಸಮಸ್ಯೆಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ದಾವಣಗೆರೆ ನಗರದ ಭರತ್ ಕಾಲೋನಿ ಹಾಗೂ ಚಿಕ್ಕನಹಳ್ಳಿಯಲ್ಲಿ ವರ್ಷಕ್ಕೊಮ್ಮೆ ಈ ಜಾತ್ರೆ ಜರುಗುತ್ತದೆ. ಸುಮಾರು 70 ರಿಂದ‌ 80 ವರ್ಷಗಳಿಂದ ಈ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ದೇವಿಯ ಪವಾಡ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಹೆಸರುವಾಸಿ.

ದೇಹದಂಡನೆಯೊಂದಿಗೆ ಭಕ್ತಿಯ ಪರಾಕಾಷ್ಠೆ:ದೊಡ್ಡಮ್ಮ ದೇವಿ ಬಳಿ ಕಷ್ಟ ಅಂತಾ ಬಂದು ಹರಕೆ ಕಟ್ಟಿಕೊಂಡರೆ, ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರ‌ಲ್ಲಿ ಮನೆ ಮಾಡಿದೆ. ತಮ್ಮ ಇಷ್ಟಾರ್ಥಗಳು ಈಡೇರಿದರೆ ಬೆನ್ನಿಗೆ ಹುಕ್ ಹಾಕಿಕೊಂಡು ದೇವಿ ಫೋಟೋ ಇರುವ ಚಕ್ಕಡಿ ಎಳೆಯುವುದು, ಕಾರು ಎಳೆಯುವುದು, ಬಾಯಿಗೆ, ನಾಲಿಗೆಗೆ ತ್ರಿಶೂಲ ಚುಚ್ಚಿಕೊಳ್ಳುವುದು, ಮೈ, ಕೈ, ಹೊಟ್ಟೆ ಭಾಗಕ್ಕೆ ತ್ರಿಶೂಲ ಚುಚ್ಚಿಕೊಳ್ಳುವ ಮೂಲಕ ಭಕ್ತರು ಹರಕೆಯನ್ನು ತೀರಿಸುತ್ತಾರೆ.

"ಈ ಜಾತ್ರೆಯನ್ನು ಕಳೆದ 80 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅಹಿತಕರ ಘಟನೆ ನಡೆದಿರುವ ಉದಾಹರಣೆ ಇಲ್ಲ. ತ್ರಿಶೂಲದಿಂದ ಚುಚ್ಚಿಕೊಂಡರು ಕೂಡ ಒಂದು ಹನಿ ರಕ್ತ ಬರುವುದಿಲ್ಲ. ಹರಕೆ ಕಟ್ಟಿಕೊಂಡ ಜನರು ತಮ್ಮ ಇಷ್ಟಾರ್ಥಗಳು ಈಡೇರಿದ ತಕ್ಷಣ ಬಂದು ಹರಕೆ ತೀರಿಸುತ್ತಾರೆ. ಇಲ್ಲಿಗೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರ, ಮುಂಬೈ ಸೇರಿದಂತೆ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ"- ದೇವಾಲಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಸುರೇಶ್.

ಸಂಕಷ್ಟಗಳಿಗೆ ಪರಿಹಾರ:ದಾವಣಗೆರೆ ನಗರದ ಚಿಕ್ಕನಹಳ್ಳಿಯಿಂದ ಆರಂಭವಾಗುವ ಜಾತ್ರಾ ಮೆರವಣಿಗೆ ಎಪಿಎಂಸಿ ಮಾರುಕಟ್ಟೆಯಿಂದ‌ ಸಾಗಿ ಭರತ್ ಕಾಲೋನಿ ತಲುಪಿ ಕೊನೆಗೊಳ್ಳುತ್ತದೆ. ಈ ಜಾತ್ರೆಯಲ್ಲಿ ಈ‌ ಬಾರಿ 40 ರಿಂದ‌ 50 ಜನರು ತ್ರಿಶೂಲ ಚುಚ್ಚಿಕೊಂಡು ದೇವಿಯ ಹರಕೆ ತೀರಿಸಿದರು. ಆರೋಗ್ಯದ ಸಮಸ್ಯೆ, ಮನೆ ಕಷ್ಟ, ಮಕ್ಕಳಾಗದೆ ಇರುವುದು, ಪೀಡೆ-ಪಿಶಾಚಿ ಕಾಟ ಹೀಗೆ ಅನೇಕ ಸಮಸ್ಯೆಗಳನ್ನು ದೂರ ಮಾಡಿರುವ ಉದಾಹರಣೆಗಳಿವೆಯಂತೆ.

ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರು: ವರ್ಷಕ್ಕೊಮ್ಮೆ ಜರುಗುವ ಈ ಪವಾಡಮಯ ಜಾತ್ರೆಯನ್ನು ವೀಕ್ಷಿಸಲು ಹಾಗೂ ಹರಕೆ ತೀರಿಸಲು ಭಕ್ತರು ಮುಂಬೈ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಾರೆ‌.

"ದೊಡ್ಡಮ್ಮ ದೇವಿ ಅಮ್ಮ ಏನ್ ಕೇಳಿದರೂ ಕೂಡ ಈಡೇರಿಸುತ್ತಾಳೆ. ನಾವು ಅಂದುಕೊಂಡಿದ್ದು ನೆರವೇರುತ್ತದೆ. ಇಲ್ಲಿಗೆ ಮುಂಬೈ, ತಮಿಳುನಾಡಿನಿಂದಲೂ ಜನ ಬರ್ತಾರೆ. ನನ್ನ ಆರೋಗ್ಯ ಸರಿ ಇರದ ಕಾರಣ ನನ್ನ ಮಗ ಹರಕೆ ಕಟ್ಟಿಕೊಂಡಿದ್ದ. ಈಗ ಬಾಯಿಗೆ ತ್ರಿಶೂಲ ಹಾಕಿಕೊಂಡು ಹರಕೆ ತೀರಿಸಿದ್ದಾನೆ. ದೇವಿ ಎಲ್ಲಾ ಭಕ್ತರಿಗೆ ಒಳಿತು ಮಾಡುತ್ತಾಳೆ"-ಭಕ್ತರು

ಇದನ್ನೂ ಓದಿ:ಕಟ್ನೂರು ಗ್ರಾಮ ದೇವತೆ ಜಾತ್ರಾ ಮಹೋತ್ಸವ : ಹೊನ್ನಾಟದಲ್ಲಿ ಮಿಂದೆದ್ದ ಭಕ್ತರು

ABOUT THE AUTHOR

...view details