ಮಂಗಳೂರು: ಪಿಎಫ್ಐ ಹಾಗೂ ಎಸ್ಡಿಪಿಐ ಪಕ್ಷಗಳ ಬೆಳವಣಿಗೆಗೆ ಮೂಲ ಕಾರಣಕರ್ತರಾಗಿರುವ ಕಾಂಗ್ರೆಸ್ ಪಕ್ಷವೇ ಈ ಎರಡು ಪಕ್ಷಗಳ ಬಿ ಟೀಂ. ಅದರಲ್ಲೂ ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪಿಎಫ್ಐ, ಎಸ್ಡಿಪಿಐ ಪಕ್ಷಗಳ ಎಲ್ಲಾ ಪ್ರಕರಣಗಳನ್ನು ಕೈಬಿಡಲಾಗಿತ್ತು. ಈ ಮೂಲಕ ಅವರ ಬೆಳವಣಿಗೆಗೆ ಪೂರಕವಾಗಿ ಕಾಂಗ್ರೆಸ್ ಸರ್ಕಾರ ಸಹಕಾರ ನೀಡಿತ್ತು ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದರು.
ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ನವರು ಸುಳ್ಳು ಹೇಳುವುದರಲ್ಲಿ ನಿಪುಣರು. ಅಲ್ಲದೆ ಎಂದೂ ಅವರಿಗೆ ಸಮಾಜದ ಬಗ್ಗೆ ಕಾಳಜಿ ಇಲ್ಲ. ಓಲೈಕೆಯ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ಹಾಗಾಗಿಯೇ ಇಡೀ ಸಮಾಜ ಅವರನ್ನು ತಿರಸ್ಕರಿಸಿದೆ. ಆದರೆ ಎಷ್ಟು ಬಾರಿ ಅವರನ್ನು ತಿರಸ್ಕಾರ ಮಾಡಿದರೂ ಅವರು ಬುದ್ಧಿ ಮಾತ್ರ ಕಲಿಯೋದಿಲ್ಲ. ಏನೇ ಕಾರ್ಯ ಮಾಡಿದರೂ ಜನಪರವಾಗಿ ಮಾಡಬೇಕು. ಆದರೆ ಇವರು ಅದಾವುದನ್ನೂ ಮಾಡದೆ ಜನವಿರೋಧಿ ಕೆಲಸಗಳಲ್ಲಿ ತೊಡಗಿದ್ದಾರೆ ಎಂದರು.
ಪಿಎಫ್ಐ ಹಾಗೂ ಎಸ್ಡಿಪಿಐ ಪಕ್ಷಗಳನ್ನು ಬ್ಯಾನ್ ಮಾಡಲು ಬೇಕಾಗಿರುವ ದಾಖಲೆಗಳು, ಹೆಚ್ಚಿನ ಮಾಹಿತಿ ಇಲ್ಲದಂತೆ ಮಾಡಲಾಗಿದೆ. ಇದೀಗ ತನಿಖೆ ಮೂಲಕ ಎಲ್ಲಾ ಸತ್ಯಗಳು ಬಯಲಾದಲ್ಲಿ ಆ ದಾಖಲೆಗಳ ಆಧಾರದಲ್ಲಿ ಈ ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಲಾಗುತ್ತದೆ. ಅದಕ್ಕಾಗಿ ಆಧಾರಗಳನ್ನು ಕಲೆಹಾಕಲಾಗುತ್ತಿದೆ. ಆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು.
ಓದಿ:ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಮಂಗಳೂರು ಸರ್ವೇಯರ್
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಆಯಾ ಪಕ್ಷಕ್ಕೆ ಬಿಟ್ಟ ವಿಚಾರ. ಒಂದು ವೇಳೆ ಹಾಗಾದಲ್ಲಿ ಒಳ್ಳೆಯದೇ, ನಮಗೇನು ಇದರಿಂದ ಸಮಸ್ಯೆಯಿಲ್ಲ. ಆಯಾ ಪಕ್ಷಗಳ ನಿಲುವುಗಳೇನು ಎಂದು ಅವರು ಅರ್ಥ ಮಾಡಿಕೊಳ್ಳಲಿ. ಜೆಡಿಎಸ್ ಮತ್ತೆ ಬಿಜೆಪಿ ಜೊತೆ ಮೈತ್ರಿ ಎಂಬುವುದೇನು ಇಲ್ಲ. ಜೆಡಿಎಸ್ ಪಕ್ಷದ ನಿಯಮವನ್ನು ಕುಮಾರಸ್ವಾಮಿಯವರು ಹಾಗೂ ಆ ಪಕ್ಷದ ವರಿಷ್ಠರು ನಿಶ್ಚಯಿಸಬೇಕು. ನಾನು ಆ ಪಕ್ಷದ ಪರವಾಗಿ ಮಾತನಾಡಲ್ಲ. ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡಿದಾಗ ಏನು ಆಗಿದೆ ಎಂಬ ವಿಚಾರ ಕುಮಾರಸ್ವಾಮಿಯವರಿಗೆ ತಿಳಿದಿದೆ ಎಂದು ಹೇಳಿದರು.