ಬೆಳ್ತಂಗಡಿ: ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ಫೆ.25ರಂದು ಹೊರಡಿಸಲಾದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳ ಗ್ರಾಮದ ನಾರ್ಯದ ಯುವತಿ ಚೇತನಾ ಆಯ್ಕೆಯಾಗಿದ್ದಾರೆ.
ಧರ್ಮಸ್ಥಳ ಗ್ರಾಮದ ನಾರ್ಯ ಎಂಬ ಪುಟ್ಟ ಹಳ್ಳಿಯಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಚೇತನಾ ಅಸಾಮಾನ್ಯ ಸಾಧನೆ ಮಾಡಿದ್ದಾರೆ. 1 ರಿಂದ 6ನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪೆರ್ನೆ ಕನ್ನಡ ಮಾಧ್ಯಮ ಶಾಲೆ, ಏಳನೇ ತರಗತಿ ವಿದ್ಯಾಭ್ಯಾಸವನ್ನು ತಮ್ಮ ಊರಾದ ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ ಶ್ರೀ. ಧ.ಮಂ. ಸೆಕೆಂಡರಿ ಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2016ರಲ್ಲಿ ತಮ್ಮ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿ, ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲು ಅವರ ಕಚೇರಿಯಲ್ಲಿ ವಕೀಲ ವೃತ್ತಿ ಅರಂಭಿಸಿದರು. ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಕ್ಲಾರ್ಕ್ ರಿಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು. ಇದೀಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ನ್ಯಾಯಾಧೀಶೆಯಾಗಲು ಅಡ್ಡಿಯಾಗಲಿಲ್ಲ ಬಡತನ ನ್ಯಾಯಾಧೀಶೆಯಾಗಲು ಅಡ್ಡಿಯಾಗಲಿಲ್ಲ ಬಡತನ
ಮನೆಯಲ್ಲಿ ಆರ್ಥಿಕ ಬಡತನ. ಒಂದು ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದರು. ತಾನು ಹಸಿದ ಹೊಟ್ಟೆಯಲ್ಲಿ ಕೂತು ತನ್ನ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಎಲ್ಲರೂ ತಲೆ ಎತ್ತಿ ನೋಡುವಂತಾಗಬೇಕು ಎಂದುಕೊಂಡಿದ್ದರು ಆಕೆಯ ತಾಯಿ. ಪಣ ತೊಟ್ಟು ವಿದ್ಯೆಯ ಹಸಿವನ್ನು ನೀಗಿಸಿದ ತನ್ನ ಹೆತ್ತಬ್ಬೆಯ ಕನಸನ್ನು ನನಸಾಗಿಸಿದ ಯುವತಿಯೇ ಚೇತನಾ ನಾರ್ಯ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಸಮೀಪದ ನಾರ್ಯದ ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ಪುತ್ರಿ ಚೇತನಾ. ಇದೀಗ ಸಿವಿಲ್ ನ್ಯಾಯಾಧೀಶೆ ಪರೀಕ್ಷೆ ಬರೆದು ಉತ್ತೀರ್ಣರಾದ ಚೇತನಾ ನಾರ್ಯ ಅವರ ಸಾಧನೆಯೇ ಎಲ್ಲರಿಗೂ ಮಾದರಿ.
ರಾಮಣ್ಣ ಪೂಜಾರಿ, ಸೀತಾ ದಂಪತಿಗೆ ನಾಲ್ಕು ಮಕ್ಕಳಲ್ಲಿ ಮೂವರು ಗಂಡುಮಕ್ಕಳು ಹಾಗೂ ಓರ್ವ ಹೆಣ್ಣುಮಗಳು. 4 ಮಕ್ಕಳಲ್ಲಿ ದೊಡ್ಡವ ರೂಪೇಶ್ ವಿಶೇಷ ಚೇತನನಾಗಿದ್ದು, 14 ವರ್ಷ ಬಳಿಕ ನಡೆದಾಡಿದ್ದಾರೆ. ತಂದೆ ಕೂಲಿ, ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ನಾರ್ಯದಲ್ಲಿ ಸಿಮೆಂಟ್ ಸೀಟಿನ ಚಿಕ್ಕ ಮನೆಯಲ್ಲಿ ಇವರ ಬದುಕು. ಅದರೂ ಚೇತನಾ ತಾಯಿ ಮಾತ್ರ ಯಾವುದಕ್ಕೂ ಎದೆಗುಂದದೇ ತಮ್ಮ ಮಕ್ಕಳು ನಮ್ಮಂತೆ ಅವಿದ್ಯಾವಂತರಾಗದೇ ವಿದ್ಯೆಯನ್ನು ಕಲಿತು ಸಮಾಜದಲ್ಲಿ ಎಲ್ಲರೂ ಗುರುತಿಸುವಂತಾಗಬೇಕು ಎಂದು ಪಣ ತೊಟ್ಟಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕೆ ರಾತ್ರಿ ಹಗಲು ನಿದ್ದೆಗೆಟ್ಟು ಬೀಡಿ ಕಟ್ಟಿ ಅವರ ಇಚ್ಛೆಯಂತೆ ಶಿಕ್ಷಣ ನೀಡಿದ್ದಾರೆ. ಮಕ್ಕಳನ್ನು ಸುಸಂಸ್ಕೃತ ವಿದ್ಯಾವಂತರನ್ನಾಗಿ ಮಾಡಿದ್ದಾರೆ.
ಆರ್ಥಿಕ ಸಮಸ್ಯೆಯಿಂದ ಪಿಯುಸಿ ಬಳಿಕ ವಿದ್ಯಾಭ್ಯಾಸ ಮೊಟಕುಗೊಳಿಸಿ, ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ್ದ ಚೇತನಾಗೆ ಮತ್ತೆ ಶಿಕ್ಷಣ ಮುಂದುವರಿಸುವಂತೆ ತಾಯಿಯೇ ಒತ್ತಾಯ ಮಾಡಿದ್ದರು. ಪರಿಚಯವಿಲ್ಲದ ಮಂಗಳೂರಿಗೆ ತಾಯಿ-ಮಗಳು ಹೋಗಿ ಮಗಳ ಇಷ್ಟವಾದ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಶಿಕ್ಷಣಕ್ಕೆ ಸೇರಿಸಿದ್ದಾರೆ. ದೊಡ್ಡ ಮಗ ರೂಪೇಶನಿಗೂ ಆತನ ಬಯಕೆಯಂತೆ ಐದು ವರ್ಷದ ಚಿತ್ರಕಲಾ ಪದವಿ ಮಾಡಿಸಿದ್ದಾರೆ. ಮೂರನೇ ಮಗ ಪುರಂದರ ಡಿಪ್ಲೋಮೋ ಮಾಡಿ ತಲಪಾಡಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ, ಕೊನೆಯ ಮಗ ಭಾಗ್ಯೇಶ್ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ದ್ವಿತೀಯ ಪದವಿ ಕಲಿಯುತ್ತಿದ್ದಾನೆ.
ಚಿಕ್ಕ ವಯಸ್ಸಿನಲ್ಲಿ ನ್ಯಾಯಾಧೀಶೆಯಾಗಲು ಅಡ್ಡಿಯಾಗಲಿಲ್ಲ ಬಡತನ ಮಕ್ಕಳ ಆಸಕ್ತಿಗನುಸಾರ ಶಿಕ್ಷಣ ನೀಡಿ...
ಈ ಬಗ್ಗೆ ಚೇತನಾ ಅವರ ತಾಯಿ ಸೀತಾ ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಮಕ್ಕಳ ಆಸಕ್ತಿಗನುಸಾರ ಶಿಕ್ಷಣ ಕೊಡಿಸಿ. ಒತ್ತಡ ಹಾಕದೆ ಶಿಕ್ಷಣ ಕೊಡಿಸಿದಲ್ಲಿ ಮಕ್ಕಳಿಂದ ಸಾಧನೆ ಮಾಡಲು ಸಾಧ್ಯ. ನಾನು ಒಂದನೇ ತರಗತಿ ತನಕ ಮಾತ್ರ ವಿದ್ಯಾಭ್ಯಾಸ ಮಾಡಿದ್ದು. ಮಕ್ಕಳು ಅನಕ್ಷರಸ್ಥರಾಗಬಾರದು. ಅವರಿಗೆ ಶಿಕ್ಷಣದ ಜತೆಗೆ ಸುಸಂಸ್ಕೃತ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಅಂತ ಕಷ್ಟ ಪಟ್ಟು ದುಡಿದು ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕೆ ಸಾರ್ಥಕವಾಯಿತು. ಮಗಳ ಸಾಧನೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಅವಳು ಕಷ್ಟ ಪಟ್ಟಿದ್ದಾಳೆ. ಗುರಿ ಸಾಧಿಸಿದ್ದಾಳೆ ಎಂಬ ಸಂತೋಷ, ಹೆಮ್ಮೆ ನನಗಿದೆ ಎಂದರು.
ಪೋಷಕರ ಕಷ್ಟಗಳನ್ನು ಅರಿತು ಸಾಧನೆ
ಈ ಬಗ್ಗೆ 'ಈಟಿವಿ ಭಾರತ' ನ್ಯಾಯಾಧೀಶೆ ಚೇತನಾ ಅವರಲ್ಲಿ ಫೋನ್ ಮುಖಾಂತರ ಮಾತನಾಡಿಸಿದಾಗ, ಅಪ್ಪ- ಅಮ್ಮ ಕಷ್ಟ ಪಟ್ಟು ನಮಗೆ ಶಿಕ್ಷಣ ಕೊಡಿಸಿದ್ದಾರೆ. ಆರ್ಥಿಕ ಸಮಸ್ಯೆ ಇದ್ದರೂ ಪೋಷಕರು ನಮ್ಮ ಆಸಕ್ತಿಗೆ, ಬೇಡಿಕೆಗೆ ಸ್ಪಂದಿಸಿದ್ದಾರೆ. ಒಳ್ಳೆಯ ದಿನ ಬಂದೇ ಬರುತ್ತದೆ. ಬೇಸರ ಮಾಡಿಕೊಳ್ಳಬೇಡ ಎಂದು ಅಮ್ಮ ಹೇಳ್ತಾ ಇದ್ರು. ಅವರ ಆಸೆ ನೆರವೇರಿದೆ. ಇದರಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು.
ಎಲ್ಎಲ್ಬಿ ಶಿಕ್ಷಣ ಮಾಡುವಾಗ ಹಾಸ್ಟೆಲ್ ಸಿಗದೇ ನಾಲ್ಕು ವರ್ಷ ಮನೆಯಿಂದಲೇ ಹೋಗಿ ಬರುತ್ತಿದ್ದೆ. ಆರ್ಥಿಕ ಸಮಸ್ಯೆಯಿಂದಾಗಿ ಖಾಸಗಿ ಹಾಸ್ಟೆಲ್ನಲ್ಲಿ ನಿಲ್ಲಲು ಸಾಧ್ಯವಾಗಿಲ್ಲ. ಗುರಿ ಇಟ್ಟುಕೊಂಡು, ಪೋಷಕರ ಕಷ್ಟಗಳನ್ನು ಅರಿತು ಸಾಧನೆ ಮಾಡಬೇಕು. ಪೋಷಕರ ಹೆಸರು ಉಳಿಸಬೇಕು ಎಂಬ ಸಂದೇಶವನ್ನು ಚೇತನಾ ನೀಡಿದ್ದಾರೆ.