ಮಂಗಳೂರು: ಮಂಗಳೂರಿನ ಖಾಸಗಿ ಸಂಸ್ಥೆಯೊಂದು ಸುಮಾರು 35 ಮಂದಿ ಯುವಕರನ್ನು ವಿದೇಶಕ್ಕೆ ಕರೆದೊಯ್ದು ಸೂಕ್ತ ಉದ್ಯೋಗ ಕಲ್ಪಿಸದೆ ವಂಚಿಸಿದೆ. ಈ ಹಿನ್ನಲೆ ಮೋಸಹೋದ ಯುವಕರು ಮಂಗಳೂರಿನ ಶಾಸಕನಲ್ಲಿ ರಕ್ಷಣೆ ಕೋರಿ ಮಾಡಿರುವ ವಿಡಿಯೋ ಸಂದೇಶ ವೈರಲ್ ಆಗಿದ್ದು, ಇದಕ್ಕೆ ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ ರಕ್ಷಿಸುವ ಅಭಯ ನೀಡಿದ್ದಾರೆ.
ಸಂಸ್ಥೆಯು ಉದ್ಯೋಗ ನೀಡುವುದಾಗಿ 6 ತಿಂಗಳ ಹಿಂದೆ ಯುವಕರಿಂದ 65 ಸಾವಿರ ರೂ. ಪಡೆದು ಕುವೈತ್ಗೆ ಕರೆದೊಯ್ದಿತ್ತು.ಆದರೆ, ಅಲ್ಲಿ ಮೊದಲು ಹೇಳಿದ ಕಂಪೆನಿಯಲ್ಲಿ ಉದ್ಯೋಗ ನೀಡದೆ ಬೇರೆ ಕಡೆ ಉದ್ಯೋಗ ನೀಡಲಾಗಿದೆ. ಅಷ್ಟೇ ಅಲ್ಲದೇ ಅಲ್ಲಿ ಮಾಡಿದ ಕೆಲಸಕ್ಕೆ ವೇತನವೂ ಇಲ್ಲದೆ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಹೋದವರೆಲ್ಲರೂ ಬಡ ಕುಟುಂಬದಿಂದ ಬಂದವರೇ ಆಗಿದ್ದು, ಅಸಹಾಯಕರಾಗಿರುವ ನಮ್ಮನ್ನು ರಕ್ಷಿಸಿ ಎಂದು ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ರಲ್ಲಿ ವಿನಂತಿ ಮಾಡಿದ್ದಾರೆ. ಜೊತೆಗೆ ಈ ವಂಚನೆಗೆ ಹಲವು ಭಾರತೀಯರು ಬಲಿಯಾಗಿದ್ದು, ಈ ಪೈಕಿ 35 ಮಂದಿ ಮಂಗಳೂರಿನವರಿದ್ದಾರೆ ಎಂದು ಯುವಕರು ವೀಡಿಯೋ ಮೂಲಕ ತಿಳಿಸಿದ್ದಾರೆ.
ಯುವಕರ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಶಾಸಕ ವೇದವ್ಯಾಸ ಕಾಮತ್ ಯುವಕರಿಗೆ ರಕ್ಷಣೆಯ ಭರವಸೆ ನೀಡಿದ್ದಾರೆ. ತನ್ನ ಗೆಳೆಯ ರಾಜ್ ಭಂಡಾರಿ ಎಂಬವರು ಕುವೈತ್ನಲ್ಲಿದ್ದು, ಅವರ ಮೂಲಕ ಯುವಕರನ್ನು ಸಂಪರ್ಕಿಸಲಾಗಿದೆ. ಅಲ್ಲದೆ, ಯುವಕರಿಗೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ಯುವಕರ ಪಾಸ್ ಪೋರ್ಟ್ ಪ್ರತಿ ನಾಳೆಯೊಳಗೆ ವಾಟ್ಸಪ್ನಲ್ಲಿ ತಲುಪಿಸುವಂತೆ ಸೂಚಿಸಿದ್ದೇನೆ. ಅದನ್ನು ಸ್ವೀಕರಿಸಿದ ಕೂಡಲೇ ಭಾರತ ಸರ್ಕಾರದ ಮೂಲಕ ರಾಯಭಾರ ಕಚೇರಿ ಸಂಪರ್ಕಿಸಿ ಯುವಕರನ್ನು ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.