ಕರ್ನಾಟಕ

karnataka

By

Published : Jan 13, 2023, 7:12 PM IST

ETV Bharat / state

ಚಿತ್ರದುರ್ಗ: ವೇದಾವತಿ ನದಿಯಲ್ಲಿ ಪುರಾತನ ಶ್ರೀರಾಮನ ವಿಗ್ರಹ ಪತ್ತೆ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕೂಡ್ಲಹಳ್ಳಿ ಗ್ರಾಮದ ವೇದಾವತಿ ನದಿಯಲ್ಲಿ ನೂರಾರು ವರ್ಷದ ಹಿಂದಿನ ಶ್ರೀರಾಮನ ವಿಗ್ರಹ ಪತ್ತೆ.

ಶ್ರೀರಾಮನ ವಿಗ್ರಹ ಪತ್ತೆ
ಶ್ರೀರಾಮನ ವಿಗ್ರಹ ಪತ್ತೆ

ಹಿರಿಯೂರು:ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಶ್ರೀರಾಮನ ದೇವಸ್ಥಾನ ಧ್ವಂಸಗೊಳಿಸಿ, ಬೇರೆಡೆಗೆ ಎಸೆಯಲಾಗಿದ್ದ ವಿಗ್ರಹವೀಗ ವೇದಾವತಿ ನದಿಯಲ್ಲಿ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕೂಡ್ಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ ನೂರಾರು ವರ್ಷದ ಶ್ರೀರಾಮನ ದೇವಸ್ಥಾನವಿತ್ತು. ಈ ಜಮೀನನ್ನು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಖರೀದಿಸಿದ್ದರು.

ಆದರೆ, ಜಮೀನು ಮಾಲೀಕ ಕಳೆದ ನವೆಂಬರ್ 17 ರಂದು ದೇವಸ್ಥಾನವನ್ನು ನೆಲಸಮ ಮಾಡಿ, ದೇವರ ವಿಗ್ರಹವನ್ನು ವೇದಾವತಿ ನದಿಯಲ್ಲಿ ಬಿಸಾಡಿದ್ದ ಘಟನೆ ನಡೆದಿತ್ತು. ಈ ಘಟನೆಗೆ ಜಮೀನು ಮಾಲೀಕನ ವಿರುದ್ಧ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇನ್ನು ಬೆಂಗಳೂರಿನ ವಿಮಲ್ ರಾಜನ್ ಎಂಬುವ ವ್ಯಕ್ತಿ ರಾತ್ರೋರಾತ್ರಿ ದೇವಸ್ಥಾನವನ್ನು ಕೆಡವಿ ವಿಗ್ರಹವನ್ನು ವೇದಾವತಿ ನದಿಯಲ್ಲಿ ಬಿಸಾಡಿದ್ದರು ಎಂದು ಹೇಳಲಾಗಿತ್ತು.

ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದರು. ಪ್ರಕರಣವನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ತನಿಖೆಗೆ ಒಳಪಡಿಸಿ ಕೊನೆಗೂ ವಿಗ್ರಹವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ವೇದಾವತಿ ನದಿಯಲ್ಲಿ ವಿಗ್ರಹ ಇರುವುದು ಪತ್ತೆಯಾದ ಹಿನ್ನೆಲೆ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಆನಂದ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಶ್ರೀರಾಮನ ವಿಗ್ರಹವನ್ನು ನದಿಯಿಂದ ಮೇಲೆ ತೆಗೆದು ಪೊಲೀಸ್ ಠಾಣೆಗೆ ತಂದಿಡಲಾಗಿದೆ. ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಾಚೀನ ಕಾಲದ ಗಣೇಶನ ವಿಗ್ರಹ ಪತ್ತೆ( ಶಿವಮೊಗ್ಗ): ಜಿಲ್ಲೆಯ ಸೀಗೆಹಟ್ಟಿಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವ ಉದ್ದೇಶದಿಂದ ಸ್ಥಳದಲ್ಲಿದ್ದ ಅರಳಿಮರವನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ವೇಳೆ ಭೂಮಿಯ ಅಡಿ ಪ್ರಾಚೀನ ಕಾಲದ ಗಣೇಶನ ವಿಗ್ರಹ ಪತ್ತೆಯಾಗಿತ್ತು.

ಇದರ ಪಕ್ಕದಲ್ಲಿ ಅಂತರಘಟ್ಟಮ್ಮ ದೇವಾಲಯವಿದ್ದು, ಇದಕ್ಕೆ ಸಂಬಂಧಿಸಿದ ನಾಗದೇವರ ವಿಗ್ರಹ ಕೂಡ ಇದೇ ಸ್ಥಳದಲ್ಲಿ ಪತ್ತೆಯಾಗಿತ್ತು ಎಂದು ಹಿರಿಯರು ತಿಳಿಸಿದ್ದರು. ಅಲ್ಲದೇ, ವಿಗ್ರಹ ಪತ್ತೆಯಾಗಿರುವ ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು. ಇನ್ನಷ್ಟು ಪುರಾವೆಗಳು ಅಲ್ಲಿ ಲಭ್ಯವಾಗಬಹುದು ಎಂಬ ವಾದ ಮುಂದಿಡಲಾಗಿತ್ತು. ವಿಗ್ರಹ ಪತ್ತೆಯಾಗಿರುವ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಆ ಸ್ಥಳದಲ್ಲಿ ದೇವಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಹಾಗೂ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ ವಿಗ್ರಹವನ್ನು ಸಂರಕ್ಷಿಸಲಾಗಿತ್ತು. ಇನ್ನು ಸ್ಥಳೀಯರು ಆ ಸ್ಥಳದಲ್ಲಿ ಭಗವಾಧ್ವಜ ನೆಟ್ಟು ಪೂಜೆ ಕೂಡ ಸಲ್ಲಿಸಿದ್ದರು.

ಓದಿ:ಶಿವಮೊಗ್ಗದಲ್ಲಿ ಪುರಾತನ ಕಾಲದ ಗಣೇಶನ ವಿಗ್ರಹ ಪತ್ತೆ

ABOUT THE AUTHOR

...view details