ಚಿಕ್ಕಮಗಳೂರು:ಮಹಾತ್ಮ ಗಾಂಧಿಯನ್ನ ಕೊಂದಿದ್ದು ಆರ್ಎಸ್ಎಸ್ ಮತ್ತು ಹಿಂದೂ ಮಹಾಸಭಾದವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಗಾಂಧಿ ಕೊಂದಿದ್ದು ಆರ್ಎಸ್ಎಸ್ ಮತ್ತು ಹಿಂದು ಮಹಾಸಭಾದವರು: ಮಾಜಿ ಸಿಎಂ ಸಿದ್ದರಾಮಯ್ಯ ಮಹಾತ್ಮ ಗಾಂಧೀಜಿಯವರು ಹಿಂದೂ ವಿರೋಧಿಯಾಗಿರಲಿಲ್ಲ, ಸಂವಿಧಾನ ವಿರೋಧಿಯಾಗಿರಲಿಲ್ಲ. ದೇಶದಲ್ಲಿ ಸೌಹಾರ್ದಕ್ಕಾಗಿ ಹೋರಾಟ ಮಾಡಿದ್ದರು. ಅಂತವರನ್ನೇ ಕೊಂದು ಹಾಕಿದ್ರು ಈ ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾದವರು. ಗಾಂಧೀಜಿ ಕೊಲ್ಲೋಕೆ ಆರು ಬಾರಿ ಪ್ರಯತ್ನ ಮಾಡಿ ಕೊನೆಗೆ ಕೊಂದೇ ಹಾಕಿದರು. ದೆಹಲಿಯಲ್ಲಿ ಪ್ರತಿಭಟನಾಕಾರ ಮೇಲೆ ಗುಂಡು ಹಾರಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳು ರಾಜ್ ಕೋಟ್ಗೆ ಹೋಗುತ್ತಿದ್ದರು. ಅವನ್ಯಾರೋ ವ್ಯಕ್ತಿ ಸ್ವಾತಂತ್ರ್ಯ ಬೇಕಾ ಅಂತಾ ಗುಂಡು ಹೊಡೆಯುತ್ತಾನೆ. ಆದ್ರೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ದೇಶದಲ್ಲಿ ಭದ್ರತೆ ಎಲ್ಲಿದೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಕೇಂದ್ರ ಸಚಿವ ಅರುಣ್ ಠಾಕೂರ್ ಹೇಳಿಕೆ ಬಗ್ಗೆ ಪ್ರಸ್ತಾಪ ಮಾಡಿ, ಇವರಿಗೂ ಹಿಟ್ಲರ್ಗೂ ವ್ಯತ್ಯಾಸ ಏನು? ಸಿಎಎ ವಿರೋಧ ಮಾಡಿದರೆ ದೇಶದ್ರೋಹಿಗಳು ಅಂತಾರೆ. ಇವರು ಕೊಡುವ ಹೇಳಿಕೆಗೆ ಏನು ಅಂತಾ ಕರೆಯಬೇಕು. ದೇಶಭಕ್ತ ಹೇಳಿಕೆ ಅಂತಾ ಕರೆಯಬೇಕಾ, ದೇಶದ್ರೋಹಿ ಹೇಳಿಕೆ ಅಂತಾ ಕರೆಯಬೇಕಾ? ಸಿಎಎ ವಿರೋಧ ಮಾಡುವವರು ದೇಶದ್ರೋಹಿಗಳಲ್ಲ. ದ್ವೇಷದ ಬೀಜವನ್ನ ಬಿತ್ತುತ್ತಿರುವವರು ದೇಶದ್ರೋಹಿಗಳು. ಸಮಾಜ ಒಡೆಯುವ ಕೆಲಸ ಮಾಡಿದವರು ದೇಶದ್ರೋಹಿಗಳು. ಮೋದಿ, ಅಮಿತ್ ಶಾ ಪ್ರಚೋದನೆಯಿಂದಲೇ ಗುಂಡು ಹಾರಿಸುವ ಮಟ್ಟಕ್ಕೆ ಬಂದಿರೋದು ಎಂದು ಕೆಂಡಾಮಂಡಲರಾದರು.
ಮೋದಿ ಕಳೆದ ಬಾರಿ ಬಜೆಟ್ಗೆ 27 ಲಕ್ಷ ಕೋಟಿ ಖರ್ಚು ಮಾಡುತ್ತೇನೆ ಎಂದಿದ್ದರು. ಅದು ನಾಳೆ ಗೊತ್ತಾಗುತ್ತೆ. ಸ್ವರ್ಗ ಸೃಷ್ಟಿ ಮಾಡುತ್ತೇನೆ ಅಂದಿದ್ರು, ಅದ್ರೆ ಈಗ ನರಕವಾಗಿದೆ. ಜಿಡಿಪಿ ಅವರ ಪ್ರಕಾರ 4.5%, ನನ್ನ ಪ್ರಕಾರ 2.5% ಆಗಿದೆ. 10 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇವೆ ಅಂದಿದ್ರು, ಈಗ ಲಕ್ಷಾಂತರ ಉದ್ಯೋಗ ಕಡಿತವಾಗಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಇದನ್ನು ಮುಚ್ಚಿಹಾಕಲು ಸಿಎಎ, ಎನ್ಆರ್ಸಿ ಮೂಲಕ ಬೇರೆ ಕಡೆ ಗಮನ ಸೆಳೆಯಲು ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅಭಿವೃದ್ಧಿ ವಿಚಾರವಾಗಿ ಸಿ.ಟಿ.ರವಿ ಸವಾಲು ಹಾಕಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಸಿ.ಟಿ.ರವಿಗೆ ಸತ್ಯ ಹೇಳಿ ಗೊತ್ತಿಲ್ಲ. ಪಾಪ, ಸುಳ್ಳು ಹೇಳೋದನ್ನ ಮೈಗೂಡಿಸಿಕೊಂಡಿದ್ದಾರೆ. 5 ವರ್ಷ ವಿರೋಧ ಪಕ್ಷದಲ್ಲಿ ಕ್ಷೇತ್ರದ ಕಡೆ ಎಷ್ಟು ಗಮನ ಹರಿಸಿದರು. ಈಗ ಮಂತ್ರಿಯಾಗಿದ್ದಾರೆ, ಹಿಂದೆಯೂ ಮಂತ್ರಿಯಾಗಿದ್ದರು. ಹಳ್ಳಿಗೆ ಹೋಗಿ ಜನರನ್ನ ಕೇಳೋಣ. ಆಮೇಲೆ ತೀರ್ಮಾನ ಮಾಡೋಣ. ಅವರ ಅಭಿವೃದ್ಧಿಯಾಗಿದೆ ಅಷ್ಟೇ ಅಂತಾರೆ ಸ್ಥಳಿಯರು, ಕಾರ್ಯಕರ್ತರು. ರವಿ ಬಗ್ಗೆ ನನಗಿಂತ ಚೆನ್ನಾಗಿ ನಿಮಗೆ ಗೊತ್ತು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.