ಚಿಕ್ಕಮಗಳೂರು: ಮದುವೆಗೂ ಮುನ್ನ ಯುವಜೋಡಿಯೊಂದು ತಮ್ಮ ನಿಶ್ಚಿತಾರ್ಥದ ದಿನ ವಿಶಿಷ್ಟವಾಗಿ ಸಂಭ್ರಮಿಸಿದೆ. ಯುವಕ-ಯುವತಿ ಸಸಿ ನೆಟ್ಟು, ಪರಿಸರ ಪ್ರೇಮ ಮೆರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ನಿಶ್ಚಿತಾರ್ಥದ ದಿನವೇ ಸಸಿ ನೆಟ್ಟು ಪರಿಸರ ಪ್ರೇಮ... ಮದುವೆವರೆಗೂ ಪೋಷಣೆಯ ಹೊಣೆ ಹೊತ್ತ ಜೋಡಿ
ನಿಶ್ಚಿತಾರ್ಥ ಮತ್ತು ಮದುವೆಯ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ನೆಂಟರು, ಸಂಬಂಧಿಗಳೊಂದಿಗೆ ಸಂಭ್ರಮದ ಖುಷಿಯಲ್ಲಿರುತ್ತಾರೆ. ಆದ್ರೆ ಯುವಜೋಡಿಯೊಂದು ನಿಶ್ಚಿತಾರ್ಥದ ದಿನವೇ ವಿಶಿಷ್ಟತೆ ಮೆರೆದಿದೆ. ಸಸಿ ನೆಟ್ಟು, ಪರಿಸರ ಪ್ರೇಮ ವ್ಯಕ್ತಪಡಿಸುವ ಮೂಲಕ ನಿಶ್ಚಿತಾರ್ಥವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿದ್ದಾರೆ.
ಇಂದು ನಗರದ ರಾಮನಹಳ್ಳಿಯಲ್ಲಿ ಮಂಗಳೂರು ಮೂಲದ ರಂಜು ಹಾಗೂ ರಾಮನಹಳ್ಳಿಯ ಕಾವ್ಯ ಜೊತೆ ನಿಶ್ಚಿತಾರ್ಥ ನೆರವೇರಿತು. ಒಬ್ಬರಿಗೊಬ್ಬರು ಉಂಗುರವನ್ನು ಬದಾಲವಣೆ ಮಾಡಿಕೊಂಡ ನಂತರ ಈ ಜೋಡಿ ಒಟ್ಟಿಗೆ ನಗರದ ಕೋರ್ಟ್ ಆವರಣದ ಪಕ್ಕ ಇರುವ ಗಾಂಧೀ ಪಾರ್ಕ್ನಲ್ಲಿ ಸಸಿ ನೆಟ್ಟರು. ಅಲ್ಲದೆ ತಮ್ಮ ಮದುವೆ ಆಗುವವರೆಗೂ ಇದರ ಪಾಲನೆ ಪೋಷಣೆ ಮಾಡಿ ಈ ಗಿಡವನ್ನು ಬೆಳೆಸುತ್ತೇವೆ ಎಂದು ವಾಗ್ದಾನ ಮಾಡಿದರು. ಅಲ್ಲದೆ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದಕ್ಕೆ ಮಣ್ಣು ಹಾಕಿ ನೀರನ್ನು ಹಾಕಿ, ಅತ್ಯಂತ ಮಹತ್ವದ ಕಾರ್ಯ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಗಿಡ ನೆಟ್ಟು ಪರಿಸರ ಉಳಿಸಿ ಅದನ್ನು ಬೆಳೆಸಿ ಎಂಬ ಸಂದೇಶವನ್ನು ಸಮಾಜಕ್ಕೆ ಈ ನೂತನ ವಧು -ವರ ನೀಡಿದ್ದಾರೆ.