ಕರ್ನಾಟಕ

karnataka

By

Published : Aug 21, 2023, 6:36 AM IST

Updated : Aug 21, 2023, 10:34 PM IST

ETV Bharat / state

ಚಿಕ್ಕಮಗಳೂರು: ಕೊನೆಗೂ ಕಾರ್ಲೆ, ಜೇಡಿಕೊಂಡ ಗ್ರಾಮಗಳಿಗೆ ಭೇಟಿ ಕೊಟ್ಟ ಅಧಿಕಾರಿಗಳು

ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬರುವಂತಹ ಕಾರ್ಲೆ ಹಾಗೂ ಜೇಡಿಕೊಂಡ ಗ್ರಾಮಗಳಿಗೆ ಅಧಿಕಾರಿ ಮೂಲ ಸೌಕರ್ಯಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಕಾರ್ಲೆ ಹಾಗೂ ಜೆಡಿಕೊಂಡ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು
ಕಾರ್ಲೆ ಹಾಗೂ ಜೆಡಿಕೊಂಡ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು

ಕೊನೆಗೂ ಕಾರ್ಲೆ ಹಾಗೂ ಜೆಡಿಕೊಂಡ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು

ಚಿಕ್ಕಮಗಳೂರು : ಕಳೆದ ಎರಡು ದಿನಗಳಿಂದ ಈ ಟಿವಿ ಭಾರತ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾರ್ಲೆ ಹಾಗೂ ಜೇಡಿಕೊಂಡ ಎಂಬ ಕುಗ್ರಾಮಗಳಲ್ಲಿ ಯಾವುದೇ ರೀತಿಯ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ಪರದಾಟ ನಡೆಸುತ್ತಿದ್ದ ಸುದ್ದಿಯೊಂದನ್ನು ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೊನೆಗೂ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲ ಮೂಲ ಸೌಕರ್ಯ ನೀಡುವ ಭರವಸೆ ನೀಡಿದ್ದಾರೆ.

ಪಟ್ಟಣದಿಂದ ತುಂಬಾ ದೂರ ಇರುವಂತಹ ಕಾಡಂಚಿನ ಗ್ರಾಮದ ಜನರು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡು ಯಾವುದೇ ಮೂಲ ಸೌಕರ್ಯದ ವ್ಯವಸ್ಥೆ ಇಲ್ಲದೇ ನಿತ್ಯ ಕಾಡು ಪ್ರಾಣಿಗಳಂತೆ ಜೀವನ ನಡೆಸುತ್ತಿದ್ದರು. ಮೂಲ ಸೌಕರ್ಯಕ್ಕಾಗಿ ಸರ್ಕಾರಿ ಕಚೇರಿಗಳು ಹಾಗೂ ಜನಪ್ರತಿನಿಧಿಗಳ ಮನೆಗಳ ಬಾಗಿಲು ಅಲೆದು ಸುಸ್ತಾಗಿ ಹೋಗಿದ್ದರು. ಪ್ರಮುಖವಾಗಿ ವಿದ್ಯುತ್, ಚರಂಡಿ, ರಸ್ತೆ, ಹಾಗೂ ಮನೆಗಾಗಿ ಹೋರಾಟ ಮಾಡಿದ್ದ ಇವರು ನಮ್ಮನ್ನು ಮನುಷ್ಯರಂತೆ ನೋಡಿ ಎಂದು ಹಲವು ಬಾರಿ ಮನವಿ ಮಾಡಿದ್ದರು. ಹೀಗಾಗಿ ಕೊನೆಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಎಲ್ಲ ರೀತಿ ಮೂಲ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ಗ್ರಾಮಸ್ಥರಿಗೆ ಕೊಟ್ಟಿದ್ದಾರೆ.

ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರ ಆದೇಶದ ಮೇರೆಗೆ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚಾರ ಮಾಡಲು ಆಗದೇ ವಾಪಸ್ ತೆರಳು ತೆರಳಿದ್ದು, ಇನ್ನು ಕೆಲ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ. ಗ್ರಾಮದಲ್ಲಿನ ವ್ಯವಸ್ಥೆ ಹಾಗೂ ಗ್ರಾಮದ ಜನರು ಬದುಕುವ ರೀತಿಯನ್ನು ನೋಡಿ ಅಧಿಕಾರಿಗಳೇ ಕಣ್ಣೀರು ಹಾಕಿದ್ದಾರೆ. ಪ್ರತಿಯೊಬ್ಬ ಗ್ರಾಮಸ್ಥನ ಬಳಿ ಹೋಗಿ ಅಧಿಕಾರಿಗಳು ಮಾತನಾಡಿದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ಅವಲೋಕದ ನಡೆಸಿ ಹಾಗೂ ಪಟ್ಟಿ ಮಾಡಿದ್ದಾರೆ. ಕೂಡಲೇ ಇಲ್ಲಿನ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಎಲ್ಲಾ ರೀತಿಯ ಸೌಲಭ್ಯ ಹಾಗೂ ಸೌಕರ್ಯ ನೀಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ :ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಪ್ರಧಾನಿ ಮೋದಿಗೆ ಪತ್ರ: ಪಿಎಂ ಕಚೇರಿಯಿಂದ ಮರುಪತ್ರ

ಒಟ್ಟಾರೆಯಾಗಿ, ಕಾಡಂಚಿನ ಗ್ರಾಮಗಳಾದ ಕಾರ್ಲೆ ಹಾಗೂ ಜೇಡಿ ಕೊಂಡ ಗ್ರಾಮಗಳಿಗೆ ಈ ವರೆಗೂ ಭೇಟಿ ನೀಡದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರುವುದು ನಿಜಕ್ಕೂ ಗ್ರಾಮಸ್ಥರಿಗೆ ಖುಷಿ ನೀಡಿದೆ. ಅಧಿಕಾರಿಗಳ ಭೇಟಿ ನೆಪ ಮಾತ್ರಕ್ಕೆ ಆಗುವುದು ಬೇಡ. ಅಧಿಕಾರಿಗಳು ಬಂದ ರೀತಿಯಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿ ನಮಗೆ ನ್ಯಾಯ ನೀಡಬೇಕು, ನಮ್ಮನ್ನು ಮನುಷ್ಯರಂತೆ ನೋಡಬೇಕು. ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಚಿಕ್ಕಮಗಳೂರು: ಮೂಲಭೂತ ಸೌಕರ್ಯಗಳಿಲ್ಲದೆ ಕಾರ್ಲೆ ಗ್ರಾಮಸ್ಥರ ಪರದಾಟ

Last Updated : Aug 21, 2023, 10:34 PM IST

ABOUT THE AUTHOR

...view details