ಕರ್ನಾಟಕ

karnataka

By

Published : May 8, 2022, 10:20 AM IST

ETV Bharat / state

3 ಲಕ್ಷ ಕೊಟ್ಟರೆ 10 ಲಕ್ಷ ಕೊಡ್ತೇವೆಂದು ಯಾಮಾರಿಸಿದ ನಕಲಿ ಸ್ವಾಮೀಜಿಗಳು

ನಮ್ಮದು ಫೇಮಸ್ ಮಠ. ರಾಜಕಾರಣಿಗಳು 350 ಕೋಟಿ ರೂ. ಹಣ ನೀಡಿದ್ದಾರೆ. ಅದರಲ್ಲಿ ನೂರು ರೂಪಾಯಿಯೇ ಹೆಚ್ಚಿವೆ. ಡಿಸೆಂಬರ್ ವೇಳೆಗೆ 100 ಮುಖಬೆಲೆಯ ನೋಟು ಬ್ಯಾನ್ ಆಗುತ್ತದೆ. ಹಾಗಾಗಿ, ಈ ಹಣವನ್ನು ಲೋನ್ ರೀತಿ ಕೊಡಲು ಮುಂದಾಗಿದ್ದೇವೆ ಎಂದು ಕಥೆ ಹೇಳಿ ವ್ಯಕ್ತಿಯೊಬ್ಬರಿಗೆ 3 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ವಂಚನೆ
ವಂಚನೆ

ಚಿಕ್ಕಮಗಳೂರು: ಡಿಸೆಂಬರ್​ಗೆ 100 ರೂ. ಮುಖಬೆಲೆಯ ನೋಟ್​ಗಳು ಬ್ಯಾನ್ ಆಗುತ್ತವೆ. ನಮ್ಮ ಮಠಕ್ಕೆ ರಾಜಕಾರಣಿಗಳಿಂದ 350 ಕೋಟಿ ರೂ ಫಂಡ್ ಬಂದಿದ್ದು, ಮೂರು ಲಕ್ಷ ಕೊಟ್ಟರೆ ಹತ್ತು ಲಕ್ಷ ಕೊಡ್ತೀವಿ, ಆರು ತಿಂಗಳಿಗೊಮ್ಮೆ 50 ಸಾವಿರ ಕೊಟ್ರೆ ಸಾಕೆಂದು ನಂಬಿಸಿ ನಕಲಿ ಸ್ವಾಮೀಜಿಗಳು ಪ್ರಸಿದ್ಧ ಮಠವೊಂದರ ಹೆಸರು ಹೇಳಿಕೊಂಡು ಯಾಮಾರಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದ ಕೆಇಬಿ ಕಂಟ್ರಾಕ್ಟರ್ ವಿಜಯ್ ಮೋಸ ಹೋದವರು. ನಮ್ಮದು ಫೇಮಸ್ ಮಠ. ನಮ್ಮ ಮಠಕ್ಕೆ ರಾಜಕಾರಣಿಗಳು 350 ಕೋಟಿ ರೂ. ಹಣ ನೀಡಿದ್ದಾರೆ. ಅದರಲ್ಲಿ ನೂರು ರೂಪಾಯಿಯೇ ಹೆಚ್ಚಿವೆ. ಡಿಸೆಂಬರ್ ವೇಳೆಗೆ 100 ಮುಖಬೆಲೆಯ ನೋಟು ಬ್ಯಾನ್ ಆಗುತ್ತದೆ. ಹಾಗಾಗಿ, ಈ ಹಣವನ್ನು ಲೋನ್ ರೀತಿ ಕೊಡಲು ಮುಂದಾಗಿದ್ದೇವೆ ಎಂದು ಕಥೆ ಹೇಳಿದ್ದಾರೆ. ಅವ್ರ ಮಾತನ್ನು ನಂಬಿದ ವಿಜಯ್‍ಗೆ 10 ಲಕ್ಷ ಕೊಡ್ತೇವೆ ಎಂದ ಸ್ವಾಮೀಜಿಗಳು, 500 ಮುಖ ಬೆಲೆಯ 3 ಲಕ್ಷ ಕೊಡು, ನಾವು 100 ಮುಖ ಬೆಲೆಯ 10 ಲಕ್ಷ ಕೊಡ್ತೇವೆ, ಉಳಿದ 7 ಲಕ್ಷ ಹಣವನ್ನ 6 ತಿಂಗಳಿಗೊಮ್ಮೆ 50 ಸಾವಿರದಂತೆ ಲೋನ್ ಕಟ್ಟಿಕೊಂಡು ಹೋಗು ಅಂತ ಬೆಸ್ಟ್ ಆಫರ್ ಕೊಟ್ಟಿದ್ದಾರೆ.


ಈ ಆಫರ್ ಕೇಳಿದ ವಿಜಯ್, ಬಾಳೆಹೊನ್ನೂರಿಗೆ ಬಂದು ಕಳ್ಳ ಖಾವಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ 500 ಮುಖಬೆಲೆಯ ಅಸಲಿ 3 ಲಕ್ಷ ಹಣ ಕೊಟ್ಟಿದ್ದಾರೆ. ಬಳಿಕ ನಕಲಿ ಸ್ವಾಮೀಜಿಗಳು ತಂದಿದ್ದ ಪೆಟ್ಟಿಗೆಯನ್ನು ಪಡೆದುಕೊಂಡು, 10 ಲಕ್ಷ ರೂಪಾಯಿ ಇದೆ ಎಂದು ನಂಬಿದ್ದಾರೆ. ಅವರು ಹೋದ ಬಳಿಕ ಯಾಕೋ ಅನುಮಾನ ಬಂದು ಪೆಟ್ಟಿಗೆಯನ್ನು ಪರಿಶೀಲಿಸಿದಾಗ 1800 ರೂಪಾಯಿ ಮಾತ್ರ ಇರುವುದು ಕಂಡುಬಂದಿದೆ. ಪೆಟ್ಟಿಗೆಯ ಒಳಗೆ ಕಾಗದ, ನ್ಯೂಸ್ ಪೇಪರ್ ತುಂಬಿ ಕಿರಾತಕರು ಪರಾರಿ ಆಗಿದ್ದಾರೆ.

ಕಳ್ಳ ಸ್ವಾಮೀಜಿಗಳಿಗಾಗಿ ವಿಜಯ್ ಕುಮಾರ್ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದ್ರೆ, ಕಿಡಿಗೇಡಿಗಳು ಪತ್ತೆಯಾಗದ ಬಳಿಕ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಆಗಮಿಸಿ ನಡೆದ ಕಥೆಯನ್ನೆಲ್ಲಾ ಹೇಳಿ ಮೂವರು ವಂಚಕರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಾಳೆಹೊನ್ನೂರು ಪೊಲೀಸರು, ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:ಉದ್ಯೋಗಿಗಳಿಗೆ 30 ನಿಮಿಷ ನಿದ್ರಾ ವಿರಾಮ ಘೋಷಿಸಿದ ಬೆಂಗಳೂರಿನ ಕಂಪನಿ

ABOUT THE AUTHOR

...view details