ಕರ್ನಾಟಕ

karnataka

By

Published : Jan 1, 2023, 11:32 AM IST

Updated : Jan 1, 2023, 1:19 PM IST

ETV Bharat / state

ಚಿನ್ನದ ರಥ ಎಳೆದು ಮಲೆ ಮಹದೇಶ್ವರನಿಗೆ ಮಧ್ಯರಾತ್ರಿ ಜೈಕಾರ

ಹೊಸ ವರ್ಷ 2023ರ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಜನಸಾಗರವೇ ಕಂಡುಬರುತ್ತಿದೆ.

new year
ಹೊಸ ವರ್ಷ ಸಂಭ್ರಮ

ಮೈಸೂರು ಪ್ರವಾಸಿ ತಾಣಗಳಿಗೆ ಹರಿದು ಬರುತ್ತಿರುವ ಜನ

ಚಾಮರಾಜನಗರ/ಮೈಸೂರು:ಹೊಸವರ್ಷಾರಂಭ ಭಾನುವಾರದಿಂದ ಶುರುವಾಗಿದ್ದು ರಜೆಯ ಮಜಾ ಅನುಭವಿಸಲು ಜನರು ಪ್ರವಾಸಿ ತಾಣಗಳತ್ತ ಲಗ್ಗೆಯಿಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನಾಥ ದೇವಾಲಯ, ಚಾಮರಾಜನಗರ ತಾಲೂಕಿನ ಕೆ.ಗುಡಿ ಹಾಗು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಜನಸಾಗರವೇ ಹರಿದುಬರುತ್ತಿದೆ.

ವರ್ಷದ ಕೊನೆಯ ದಿನವಾದ ನಿನ್ನೆ ಮಲೆಮಹದೇಶ್ವರ ಬೆಟ್ಟದಲ್ಲಿ ನೂರಾರು ಭಕ್ತರು ಚಿನ್ನದ ರಥ ಎಳೆದು, ನೂತನ ವರ್ಷಕ್ಕೆ ಪ್ರಾರ್ಥನೆ ಸಲ್ಲಿಸಿ ಮಲೆ ಮಹದೇಶ್ವರನಿಗೆ ಮಧ್ಯರಾತ್ರಿ ಜೈಕಾರ ಮೊಳಗಿಸಿದರು. ಬಿಳಿಗಿರಿರಂಗನಾಥ ದೇವಾಲಯ ಮತ್ತು ಗೋಪಾಲಸ್ವಾಮಿ ಬೆಟ್ಟದಲ್ಲಿ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ತಮ್ಮ ಸಮಯವನ್ನು ಪ್ರಕೃತಿ ಮಡಿಲಲ್ಲಿ ಕಳೆಯುತ್ತಿದ್ದಾರೆ. ಅಲ್ಲದೇ ಕೆ.ಗುಡಿಯಲ್ಲೂ ಜನಸಂದಣಿ ಹೆಚ್ಚಿದೆ.

ಇದನ್ನೂ ಓದಿ:ಹಳೆ ವರ್ಷಕ್ಕೆ ಗುಡ್ ಬೈ, ಹೊಸ ವರ್ಷಕ್ಕೆ ಹಾಯ್! ಬೆಂಗಳೂರಿನಲ್ಲಿ ಮಧ್ಯರಾತ್ರಿ ಸಂಭ್ರಮ

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಕ್ಲಬ್​ ಆಯೋಜಿಸಿದ್ದ ನ್ಯೂ ಇಯರ್​ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಿದ್ದು ಹಾಡು, ನೃತ್ಯ, ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ‌.

2022ರಲ್ಲಿ ನಿಧಾನಕ್ಕೆ ಚೇತರಿಸಿಕೊಂಡ ಪ್ರವಾಸೋದ್ಯಮ:ರಾಜ್ಯದ ಪ್ರವಾಸೋದ್ಯಮಗಳಿಗೆ ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಭಾರಿ ಹೊಡೆತ ನೀಡಿತ್ತು. 2022ರ ಪ್ರಾರಂಭದಲ್ಲೂ ಅದು ಹಾಗೆಯೇ ಮುಂದುವರೆದಿತ್ತು. ಬಳಿಕ ನಿಧಾನಕ್ಕೆ ಚೇತರಿಸಿಕೊಂಡ ಜನರು ಪ್ರವಾಸಿ ತಾಣಗಳತ್ತ ಜನರು ಮುಖ ಮಾಡಿದ್ದರು. ಇದು ವ್ಯಾಪಾರಸ್ಥರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿಸಿತ್ತು.

ಮೈಸೂರಿನ ಕೆಲವು ವ್ಯಾಪಾರಸ್ಥರು ಪ್ರವಾಸೋದ್ಯಮ ನಂಬಿಕೊಂಡಿದ್ದು, ಪ್ರತಿವರ್ಷ ಅಂದಾಜು 25ರಿಂದ 30 ಲಕ್ಷ ಪ್ರವಾಸಿಗರು ವಿದೇಶ, ಹೊರರಾಜ್ಯಗಳು ಹಾಗು ಕರ್ನಾಟಕದ ಬೇರೆ ಬೇರೆ ಕಡೆಯಿಂದ ಆಗಮಿಸುತ್ತಿದ್ದರು. ಆದರೆ ಕೊರೊನಾದಿಂದಾಗಿ ಹಲವಾರು ವ್ಯಾಪಾರಿಗಳು ನಷ್ಟ ಅನುಭವಿಸಿದ್ದು, ತಮ್ಮ ವ್ಯವಹಾರಗಳನ್ನು ಬಂದ್​ ಮಾಡಿದ್ದರು.

ಚಾಮರಾಜನಗರದ ಪ್ರವಾಸಿ ತಾಣಗಳಲ್ಲಿ ಜನಸಾಗರ

ಆದರೆ, 2022ರಲ್ಲಿ ಸ್ವಲ್ಪ ಮಟ್ಟಿಗೆ ಇದೆಲ್ಲವೂ ಸುಧಾರಿಸಿತ್ತು. ಅದ್ದೂರಿಯಲ್ಲಿ ದಸರಾ ಆಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸುಮಾರು ಒಂದು ತಿಂಗಳ ಕಾಲ ಮೈಸೂರಿನಲ್ಲಿ ಪ್ರವಾಸಿಗರು ಹೆಚ್ಚಿದ್ದು, ಹೋಟೆಲ್​ಗಳು ಸೇರಿದಂತೆ ಪ್ರವಾಸೋದ್ಯಮದ ಜೊತೆ ನಂಟಿರುವ ಎಲ್ಲಾ ವ್ಯಾಪಾರಗಳು ಚೆನ್ನಾಗಿ ನಡೆದಿದ್ದವು.

ಅಂತೆಯೇ ಇದೀಗ ಕ್ರಿಸ್ಮಸ್​ ಹಬ್ಬ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಆಗಮಿಸಿ ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಖುಷಿಪಡುತ್ತಿದ್ದಾರೆ. ನಗರದ ಸುಮಾರು 15 ಸಾವಿರಕ್ಕೂ ಹೆಚ್ಚು ಲಾಡ್ಜ್​, ಹೋಟೆಲ್​, ಕ್ಲಬ್​ಗಳು ಡಿಸೆಂಬರ್​ 20 ರಿಂದ ಜನವರಿ 2ರವರೆಗೆ ಬಹುತೇಕ ಬುಕ್​ ಆಗಿದ್ದು, ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಎರಡು ವರ್ಷಗಳಿಂದ ಲಾಭವೇ ಕಾಣದ ಹೋಟೆಲ್​ಗಳು, ಲಾಡ್ಜ್‌ಗಳು ಸಂಪೂರ್ಣ ನೂರಕ್ಕೆ ನೂರರಷ್ಟು ಬುಕ್ಕಿಂಗ್ ಆಗಿವೆ.

ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಿವು..: ಮೈಸೂರು ನಗರ ಬೆಂಗಳೂರು ಸಮೀಪದಲ್ಲೇ ಇರುವುದರಿಂದ ಜನರು ಹೆಚ್ಚು ಆಗಮಿಸುತ್ತಿದ್ದಾರೆ. ಇಲ್ಲಿ ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ, ಸೇಂಟ್ ಫಿಲೋಮಿನಾ ಚರ್ಚ್, ಪಾರಂಪರಿಕ ಕಟ್ಟಡಗಳು, ವಸ್ತು ಪ್ರದರ್ಶನ, ಗಿರಿಧಾಮಗಳು, ಬೃಂದಾವನ, ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳು, ಕೊಡಗು ನಿಸರ್ಗಧಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಶ್ರೀರಂಗಪಟ್ಟಣ, ಇತರೆ ಪ್ರವಾಸಿ ತಾಣಗಳಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಈ ಬಗ್ಗೆ ಈಟಿವಿ ಭಾರತ್​ಗೆ ಮಾಹಿತಿ ನೀಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, 'ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದು, ಇಲ್ಲಿನ ಬಹುತೇಕ ಹೋಟೆಲ್​ಗಳು ನೂರಕ್ಕೆ ನೂರರಷ್ಟು ಬುಕ್ಕಿಂಗ್ ಆಗಿವೆ. ಇದು ಪ್ರವಾಸೋದ್ಯಮಕ್ಕೆ ಬೂಸ್ಟರ್ ನೀಡಿದೆ' ಎಂದರು.

ಇದನ್ನೂ ಓದಿ:ಬೆಂಗಳೂರಲ್ಲಿ ರಂಗೇರಿದ ಹೊಸ ವರುಷ ಸ್ವಾಗತ ಸಂಭ್ರಮ: ಹುಬ್ಬಳ್ಳಿಯಲ್ಲಿ ಕಪಲ್ಸ್​ ಡ್ಯಾನ್ಸ್​

Last Updated : Jan 1, 2023, 1:19 PM IST

ABOUT THE AUTHOR

...view details