ಚಾಮರಾಜನಗರ: ಜಿಲ್ಲೆಯಲ್ಲಿರುವ 1 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ವಿತರಣಾ ಅಭಿಯಾನಕ್ಕೆ ಆಶಾ ಕಾರ್ಯಕರ್ತೆಯರು ಹಾಗೂ ಪಿಡಿಒಗಳು ಬಲ ತರುತ್ತಿದ್ದಾರೆ.
ಜಿಲ್ಲೆಯ 797 ಆಶಾ ಕಾರ್ಯಕರ್ತೆಯರಿಗೆ ನಿತ್ಯ 10 ಮಂದಿ ಹಿರಿಯ ನಾಗರಿಕರನ್ನು ಕರೆತಂದು ಲಸಿಕೆ ಹಾಕಿಸುವ ಟಾರ್ಗೆಟ್ ನೀಡಿರುವುದರಿಂದ ಲಸಿಕೆ ಅಭಿಯಾನ ವೇಗ ಪಡೆಯುತ್ತಿದ್ದು, ಈಗಾಗಲೇ 19 ಸಾವಿರಕ್ಕೂ ಹೆಚ್ಚು ಮಂದಿ ಹಿರಿಯ ನಾಗರಿಕರು ಲಸಿಕೆ ಹಾಕಿಸಿಕೊಂಡಿದ್ದಾರೆ.
ಇಂದು ಜಿ.ಪಂ. ಸಿಇಒ ಹರ್ಷಲ್ ಬೋಯರ್ ಆರೋಗ್ಯ ಇಲಾಖೆ ಮತ್ತು ಪಿಡಿಒಗಳ ಸಭೆ ನಡೆಸಿ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಆಟೋ, ಕ್ಯಾಬ್ ಮೂಲಕ ಹಿರಿಯ ನಾಗರಿಕರು ಹಾಗೂ ತೀವ್ರ ಖಾಯಿಲೆಗಳಿಂದ ಬಳಲುತ್ತಿರುವ 45 ವರ್ಷದ ಮೇಲ್ಪಟ್ಟವರನ್ನು ಆಸ್ಪತ್ರೆಗಳಿಗೆ ಕರೆತಂದು ಲಸಿಕೆ ಹಾಕಿಸಬೇಕೆಂದು ಸೂಚಿಸಿದ್ದಾರೆ. ಹೀಗಾಗಿ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಬರಲಿದೆ.
ನಿತ್ಯ 7 ಸಾವಿರ ಮಂದಿಗೆ ಲಸಿಕೆ ಹಾಕಬೇಕು ಎಂಬ ಗುರಿಯನ್ನು ಆರೋಗ್ಯ ಇಲಾಖೆಗೆ ಡಿಸಿ ಡಾ.ಎಂ.ಆರ್.ರವಿ ನೀಡಿದ್ದು, ಸರಾಸರಿ ನಿತ್ಯ 4 - 5 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿಯಿತ್ತು, ಅರಿವು ಮೂಡಿಸುತ್ತಿರುವ ಪರಿಣಾಮ ಪ್ರತಿದಿನ ಲಸಿಕೆ ಪಡೆಯುತ್ತಿರುವವರ ಸಂಖ್ಯೆ 4 ಸಾವಿರ ದಾಟಿದೆ.
ಭಾನುವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 35 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದ್ದು, ಇವರಲ್ಲಿ 19 ಸಾವಿರದಷ್ಟು ಹಿರಿಯ ನಾಗರಿಕರಿದ್ದು, ಮಾರ್ಚ್ 31ರೊಳಗೆ 1 ಲಕ್ಷದಷ್ಟು ಮಂದಿ ಹಿರಿಯ ನಾಗರಿಕರಿಗೆ ಲಸಿಕೆ ಹಾಕುವ ಗುರಿಯನ್ನು ಇಲಾಖೆ ಹೊಂದಿದೆ.