ಕರ್ನಾಟಕ

karnataka

By

Published : Jun 4, 2023, 8:08 AM IST

ETV Bharat / state

ಒಡಿಶಾ ರೈಲು ದುರಂತದ ಭೀಕರತೆ ಕಣ್ಣಿಗೆ ಕಟ್ಟಿದಂತಿದೆ: ಪ್ರತ್ಯಕ್ಷದರ್ಶಿ ಚಾಮರಾಜನಗರ ಯುವಕನ ಮಾತು

ಒಡಿಶಾದಲ್ಲಿ ಅಪಘಾತಕ್ಕೀಡಾದ ರೈಲಿನಲ್ಲಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಇಬ್ಬರು ಯುವಕರು ಸುರಕ್ಷಿತವಾಗಿದ್ದು, ರಾಜ್ಯಕ್ಕೆ ಬರಲು ಪರದಾಡುತ್ತಿದ್ದಾರೆ.

Train Accident
Train Accident

ಚಾಮರಾಜನಗರ: ಒಡಿಶಾದ ಬಾಲಸೋರ್​ ಜಿಲ್ಲೆಯ ಬಹಾನಗರ್​ನಲ್ಲಿಶುಕ್ರವಾರ ರಾತ್ರಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ 280ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಪಘಾತಕ್ಕಿಡಾದ ರೈಲಿನಲ್ಲಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಇಬ್ಬರು ಯುವಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಮಾಹಿತಿ ತಿಳಿದುಬಂದಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಎಂಬ ಯುವಕರು ಸೇನಾ ಪರೀಕ್ಷೆಗೆಂದು ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಯಾವುದೇ ಗಾಯವಾಗಿಲ್ಲ. ಆದರೆ ತವರಿಗೆ ಮರಳಲು ರೈಲು ಸಿಗದೇ ಪ್ರಯಾಸ ಪಡುತ್ತಿದ್ದಾರೆ.

ಕರ್ನಾಟಕದ ಜನರನ್ನು ಕರೆತರಲು ಹೋಗಿರುವ ಸಚಿವ ಸಂತೋಷ್ ಲಾಡ್ ಅವರೊಟ್ಟಿಗೆ ಗುಂಡ್ಲುಪೇಟೆ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ ಯುವಕರಿಗೆ ನೆರವು ಕೊಡಿಸಿದ್ದಾರೆ. ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ರವಾನಿಸಿ ಪರ್ಯಾಯ ಮಾರ್ಗದಲ್ಲಿ ರಾಜ್ಯಕ್ಕೆ ಹಿಂತಿರುಗುವಂತೆ ಯುವಕರಿಗೆ ಸಲಹೆ ಕೊಟ್ಟಿದ್ದಾರೆ.

ಆ ಭೀಕರತೆ ಕಣ್ಣಿಗೆ ಕಟ್ಟಿದಂತಿದೆ: ಸೇನೆಯ ಪರೀಕ್ಷೆ ಬರೆಯಲು ಬಂದಿದ್ದೆವು. ರೈಲುಗಳು ರದ್ದಾಗಿದ್ದು ಬೇರೆ ಮಾರ್ಗದಲ್ಲಿ ರಾಜ್ಯ ತಲುಪಬೇಕಿದೆ. ಶಾಸಕ, ಸಚಿವರು ಅಭಯ ಕೊಟ್ಟಿದ್ದಾರೆ. ದುರಂತದ ಕ್ಷಣಗಳು ಇನ್ನೂ ಕಣ್ಣ ಮುಂದೆಯೇ ಇದೆ ಎಂದು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಯುವಕ ಮಹೇಶ್ ಹೇಳಿದ್ದಾರೆ.

ಸೇನೆಯ ಪರೀಕ್ಷೆ ಬರೆಯಲು ತೆರಳಿದ್ದರು, ಅಪಘಾತವಾದ ರೈಲಿನಲ್ಲೇ ಇದ್ದರು, ಶಾಸಕ ಗಣೇಶ್ ಪ್ರಸಾದ್ ತುರ್ತಾಗಿ ಸ್ಪಂದಿಸಿ ಯುವಕರಿಗೆ ನೆರವಾಗಿದ್ದಾರೆ. ಅಪಘಾತ ನಡೆದ ಸ್ಥಳದಿಂದ ಈಗ 100 ಕಿಮೀಯಷ್ಟು ದೂರ ಬಂದಿದ್ದು, ಆದಷ್ಟು ಬೇಗ ಮನೆಗೆ ತಲುಪುವ ಭರವಸೆ ಇದೆ ಎಂದು ಮಹೇಶ್ ಅವರ ತಂದೆ ಮಹಾದೇವನಾಯ್ಕ ಮಾಹಿತಿ ನೀಡಿದ್ದಾರೆ‌.

ಇದನ್ನೂ ಓದಿ: 90ಕ್ಕೂ ಹೆಚ್ಚು ರೈಲು ಸಂಚಾರ ರದ್ದು; ಒಡಿಶಾದಿಂದ ಹೊರಹೋಗುವ ವಿಮಾನ ದರ ಏರಿಸದಂತೆ ಸೂಚನೆ

ಭೀಕರ ದುರಂತ: ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಕಳಸ ತಾಲೂಕಿನ ಹೊರನಾಡು, ಸಂಸೆ, ಕುದುರೆಮುಖ ಸೇರಿ ಸುತ್ತಲಿನ ಗ್ರಾಮಗಳ 110 ಮಂದಿ ತೀರ್ಥಕ್ಷೇತ್ರಗಳ ದರ್ಶನಕ್ಕೆ ತೆರಳುತ್ತಿದ್ದರು. ಇವರು ಯಶವಂತಪುರ ರೈಲು ನಿಲ್ದಾಣದಿಂದ ಯಶವಂತಪುರ - ಹೌರಾ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅಪಘಾತವಾಗುವ ಕೆಲವು ಗಂಟೆ ಮುನ್ನ ರೈಲಿನ‌ ಬೋಗಿಗಳ ಇಂಜಿನ್ ಬದಲಿಸಲಾಗಿತ್ತು. ಹಿಂದಿನ ಕೋಚ್​ನಲ್ಲಿದ್ದ ಇವರು ಎಸ್​3, ಎಸ್ 4 ಬೋಗಿಗಳಿಗೆ ಬಂದಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

ದುರಂತದ ಹಿನ್ನೆಲೆಯಲ್ಲಿ ಕೋಲ್ಕತ್ತಾದಿಂದ ರಾಜ್ಯಕ್ಕೆ ವಾಪಸ್ ಬರಲು ಪರಿತಪಿಸುತ್ತಿದ್ದ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್​​ ತಂಡಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೆರವು ನೀಡಿ, ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸಾಗಲು ಸಹಕರಿಸಿದ್ದಾರೆ. ತರಬೇತುದಾರರು ಸೇರಿ 32 ಸದಸ್ಯರ ತಂಡಕ್ಕೆ ವಿಮಾನ ಟಿಕೆಟ್, ಊಟ ಹಾಗೂ ವಸತಿ ವ್ಯವಸ್ಥೆಯನ್ನು ಸಚಿವ ಸಂತೋಷ್ ಲಾಡ್ ಮತ್ತು ಅಧಿಕಾರಿಗಳು ಮಾಡಿದ್ದರು.

ಇದನ್ನೂ ಓದಿ:ಸಾವಿನ ಕದ ತಟ್ಟಿ ಬಂದೆವು: ಬಾಲಸೋರ್​ ರೈಲು ಅಪಘಾತದ ಭಯಾನಕತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು!

ABOUT THE AUTHOR

...view details