ಕರ್ನಾಟಕ

karnataka

By

Published : Jul 29, 2019, 4:51 PM IST

ETV Bharat / state

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಫೋಟೋ ಕ್ಲಿಕ್ಕಿಸಿಕೊಂಡ ರಾಜಕುಮಾರನೀತ!

ಬಂಡೀಪುರ ರಾಷ್ಟ್ರೀಯ ಉದ್ಯಾನ ಅದೆಷ್ಟೋ ಪ್ರಾಣಿಗಳ ಆಶ್ರಯತಾಣ. ಇಲ್ಲಿ ರಾಜನಂತೆ ಮೆರೆದ, ಪ್ರವಾಸಿ ಸ್ನೇಹಿಯಾಗಿದ್ದ ಪ್ರಿನ್ಸ್ ಟೈಗರ್ ಮೃತಪಟ್ಟು ಎರಡು ವರುಷಗಳೇ ಕಳೆದರೂ, ಆತನ ನೆನಪು ಮಾತ್ರ ಶಾಶ್ವತ.

ಪ್ರಿನ್ಸ್ ಟೈಗರ್

ಚಾಮರಾಜನಗರ: ಗಂಭೀರ ವದನ, ಗಾಂಭೀರ್ಯ ಹೆಜ್ಜೆ, ಬಲಿಷ್ಠ ಬಾಹುಗಳು, ಹೆದರದೇ ಗಂಟೆಗಟ್ಟಲೇ ನಿಲ್ಲುತ್ತಿದ್ದ ಆ ರಾಜಕುಮಾರ ಕಣ್ಮರೆಯಾಗಿ ಎರಡು ವರ್ಷಗಳಾಗುತ್ತಾ ಬಂದರೂ ಅವನ ನೆನಪು ಮಾತ್ರ ಹಸಿರಿನಷ್ಟೇ ನಿಚ್ಚಳವಾಗಿದೆ.

ಮಧ್ಯಪ್ರದೇಶದ ಮುನ್ನ, ರಾಜಾಸ್ಥಾನದ ಮಛಲಿಯಂತೆ ಬಂಡೀಪುರ ಕಾಡಿನ ರಾಯಭಾರಿಯಾಗಿದ್ದ ಈ ಪ್ರಿನ್ಸ್ ಟೈಗರ್. 30 ಕ್ಕೂ ಹೆಚ್ಚು ಮೈಲಿ ಸರಹದ್ದನ್ನು ಹೊಂದಿದ್ದ ಈ ರಾಜಕುಮಾರ, ಎಷ್ಟು ಆಕ್ರಮಣಕಾರಿಯೋ ಅಷ್ಟೇ ಪ್ರವಾಸಿ ಸ್ನೇಹಿಯಾಗಿದ್ದ. ಸಫಾರಿ ವಾಹನಗಳ ಕೈಯ್ಯಳತೆ ದೂರದಲ್ಲೇ ಹೆಜ್ಜೆಯನ್ನಿಟ್ಡು, ಘರ್ಜಿಸಿ ಪ್ರವಾಸಿಗರಿಗೆ ಅಚ್ಚರಿಯಾಗುವ ರೀತಿಯಲ್ಲಿ ಗಂಟೆಗಟ್ಟಲೆ ದರ್ಶನ ನೀಡುತ್ತಿದ್ದ. 5 ವರ್ಷಕ್ಕೂ ಹೆಚ್ಚು ಕಾಲ ಉಳಿಸಿಕೊಂಡಿದ್ದ ತನ್ನ ಸರಹದ್ದನ್ನು ಕಿತ್ತುಕೊಳ್ಳಲು ಬಂದ 2-3 ಗಂಡು ಹುಲಿಗಳನ್ನು ಕೊಂದಿದ್ದ ಎಂದು ಮೂಲಗಳು ತಿಳಿಸಿವೆ‌.

ಫೋಟೋ ಕೃಪೆ: ವೇಣು ಮತ್ತು ಶಮಂತ್, ವನ್ಯಜೀವಿ ಛಾಯಗ್ರಾಹಕರು

ಪ್ರಿನ್ಸ್ ಕುರಿತು ವನ್ಯಜೀವಿ ಛಾಯಗ್ರಾಹಕ ವೇಣು ಮಾತನಾಡಿ, ಪ್ರಿನ್ಸ್ ಬಹಳ‌ ಅದ್ಭುತವಾಗಿದ್ದ, ಅವನ ನಡಿಗೆ ಶೈಲಿಯೇ ಬಲು ವಿಶಿಷ್ಟ. ತುಂಬಾ ಅಂದರೆ ತುಂಬಾ ಬೋಲ್ಡ್ ಆಗಿದ್ದ ಅವನು ಯಾರಿಗೂ ಹೆದರುತ್ತಿರಲಿಲ್ಲ. ತಮಿಳುನಾಡಿನಿಂದ ಬಂದು ವಾಹನಗಳ ಓಡಾಟಕ್ಕೆ, ಪ್ರವಾಸಿಗರಿಗೆ ಹೊಂದಿಕೊಂಡಿದ್ದ, ಮಳೆಯಲ್ಲಿ ಓಡಾಡುತ್ತಾ ಆಟ ಆಡುತ್ತಾ ಪೋಸ್ ಕೊಡುತ್ತಿದ್ದ ಎಂದರು.

ಫೋಟೋ ಕೃಪೆ: ವೇಣು ಮತ್ತು ಶಮಂತ್, ವನ್ಯಜೀವಿ ಛಾಯಗ್ರಾಹಕರು

ಬಂಡೀಪುರಕ್ಕೆ ಹರಿದುಬಂದ ಪ್ರವಾಸಿಗರು:

ಒಂದು ಸಮಯದಲ್ಲಿ ಬಂಡೀಪುರಕ್ಕೆ ಪ್ರವಾಸಿಗರು ಹರಿದು ಬಂದಿದ್ದಕ್ಕೆ ದೊಡ್ಡ ಕಾರಣವೇ ಈ ಪ್ರಿನ್ಸ್ ಟೈಗರ್. ಈತನಿಗಾಗಿಯೇ ಯಾರೋ ಎಫ್​ಬಿ ಪೇಜ್ ಕೂಡ ಕ್ರಿಯೇಟ್ ಮಾಡಿದ್ದರು. ಬಂಡೀಪುರಕ್ಕೆ ಬರುತ್ತಿದ್ದ ಪ್ರವಾಸಿಗರು ಝೂನಲ್ಲಿ ಗಂಟೆಗಟ್ಟಲೇ ಪ್ರಿನ್ಸ್ ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಹುಲಿಗಳನ್ನು ಕಾಣುವುದೇ ಅಪರೂಪವಾದ ಅಂದು ಮತ್ತು ಇಂದಿನ ದಿನಗಳಲ್ಲಿ ನಾಜೂಕು ಮಾಡದೇ, ಭಯಪಟ್ಟುಕೊಳ್ಳದೇ ಬಿರುಸಿನಿಂದ ಓಡಾಡುತ್ತಿದ್ದ, ಆಟವಾಡುತ್ತಿದ್ದ. ಆತನಿಂದಲೇ ಪ್ರೇರಣೆಗೊಂಡು 'ಪ್ರಿನ್ಸ್ ಲ್ಯಾಂಡ್' ಎಂದು ಹೋಟೆಲ್​ಗೆ ಹೆಸರಿಟ್ಟಿದ್ದೇನೆ ಎಂದು ಹೋಟೆಲ್ ಮಾಲೀಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಮಂತ್ ತಿಳಿಸಿದರು.

'ಪ್ರಿನ್ಸ್ ಲ್ಯಾಂಡ್' ಹೋಟೆಲ್

ರಾಯಭಾರಿ ಇಲ್ಲದ ಬಂಡೀಪುರ:

ದೊಡ್ಡ ಸರಹದ್ದು ಹೊಂದಿದ್ದ ಪ್ರಿನ್ಸ್, ಸರಹದ್ದಿನ ಕದನದಲ್ಲೇ 2017 ಲ್ಲಿ ಕುಂದಕೆರೆ ಅರಣ್ಯ ವಲಯದಲ್ಲಿ ಮೃತಪಟ್ಟಿದ್ದ. ಪ್ರಿನ್ಸ್ ಸತ್ತು 2 ವರ್ಷಗಳಾದರೂ ಆತನಂತೆ ಆಕ್ರಮಣಕಾರಿಯಾದ, ಪ್ರವಾಸಿ ಸ್ನೇಹಿಯಾದ ಹುಲಿ ಇನ್ನೂ ಕಂಡು ಬಂದಿಲ್ಲ. ಆತನ ಟೆರಿಟರಿ ಪಡೆದ ಮಾದೇಶ ಎಂಬ ಹುಲಿಯೂ ಕಂಡು 6 ತಿಂಗಳಾಗುತ್ತ ಬಂದಿದೆ ಎಂದು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.

ಫೋಟೋ ಕೃಪೆ: ವೇಣು ಮತ್ತು ಶಮಂತ್, ವನ್ಯಜೀವಿ ಛಾಯಗ್ರಾಹಕರು

ಬಂಡೀಪುರಕ್ಕೆ ದೊಡ್ಡಮಟ್ಟದ ಜನಪ್ರಿಯತೆ, ಆದಾಯ ತಂದುಕೊಟ್ಟ ಪ್ರಿನ್ಸ್ ನೆನಪಿನಲ್ಲಿ ಹುಲಿಯ ಪ್ರತಿಮೆ ಮಾಡಿಸಬೇಕು, ಇಲ್ಲವೇ ಆತನ ನೆನಪನ್ನು ಛಾಯಚಿತ್ರ ಸಂಗ್ರಹಿಸಿ ಗ್ಯಾಲರಿ ಮಾಡಬೇಕು ಎನ್ನುತ್ತಾರೆ ಪರಿಸರ ಪ್ರೇಮಿಗಳು.

ABOUT THE AUTHOR

...view details