ಬೆಂಗಳೂರು: ಸಭಾಧ್ಯಕ್ಷ ರಮೇಶ್ ಕುಮಾರ್ ವಿರುದ್ಧ ಕೇಳಿ ಬಂದಿರುವ ಧ್ವನಿಸುರಳಿಯ ಬಗ್ಗೆ ಇಂದು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಈ ಬಗ್ಗೆ ಎಲ್ಲ ಪಕ್ಷದ ನಾಯಕರು ಮಾತನಾಡಿದರು. ಸ್ಪೀಕರ್ ವಿರುದ್ಧವೇ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲ ಸದಸ್ಯರಿಗೂ ಮಾತನಾಡಲು ಅವಕಾಶ ಕೋರಿದರು. ಅಷ್ಟೇ ಅಲ್ಲ ಎಲ್ಲ ಸದಸ್ಯರ ಒಪಿನಿಯನ್ ಪಡೆದ ಸಭಾಧ್ಯಕ್ಷ ರಮೇಶ್ ಕುಮಾರ್ ಎಸ್ಐಟಿ ತನಿಖೆಗೆ ಸಿಎಂಗೆ ಸಲಹೆ ನೀಡಿದರು. ತಮ್ಮ ಮೇಲೆಯೇ ಆರೋಪ ಇರುವುದರಿಂದ ನಾನೇ ಇಂತಹುದ್ದೇ ತನಿಖೆ ನಡೆಯಬೇಕು ಎಂಬ ಆದೇಶ ನೀಡುವ ಅಧಿಕಾರ ಇಲ್ಲ. ಹೀಗಾಗಿ ನಾವು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವೆ ಎಂದು ಹೇಳಿದರು. ಆದರೆ ಸರ್ಕಾರದಿಂದ ನಡೆಯುವ ಯಾವುದೇ ತನಿಖೆಗೆ ಒಪ್ಪುವುದಿಲ್ಲ ಈ ಬಗ್ಗೆ ಸ್ಪೀಕರ್ ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿ ಪಟ್ಟು ಹಿಡಿದೆ.
ಸದನದಲ್ಲಿ ಏನೇನು ನಡೆಯಿತು?: ಎರಡು ದಿನಗಳ ಬಿಡುವಿನ ಬಳಿಕ ವಿಧಾನಸಭೆ ಕಲಾಪ ಆರಂಭವಾಯಿತು. ಸದನ ಆರಂಭವಾಗುತ್ತಿದ್ದಂತೆ ರಮೇಶ್ ಕುಮಾರ್ ತಮ್ಮ ಮೇಲೆಯೇ ಬಂದ ಆರೋಪದ ಹಿನ್ನೆಲೆಯಲ್ಲಿ, ಈ ಬಗ್ಗೆ ಮಾತನಾಡಿರುವವರು ಯಾರು ಅಂತಾ ಗೊತ್ತಾಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು. ಇಂತಹ ಆರೋಪ ಬಂದಿದ್ದರಿಂದ ನಾನು ತುಂಬಾ ನೊಂದಿದ್ದೇನೆ. ಇದರಿಂದ ನಾನು ನನ್ನ ಕುಟುಂಬಕ್ಕೆ ಏನು ಹೇಳಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದರು. ಆ ಬಳಿಕ ಈ ಬಗ್ಗೆ ದೂರು ನೀಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇದು ಸದನಕ್ಕಾದ ಅವಮಾನ ಎಂದು ಹಕ್ಕು ಚ್ಯುತಿಯಾಗಿದೆ ಎಂದು ಪ್ರತಿಪಾದಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಪ್ರತಿಪಕ್ಷದ ಪರವಾಗಿ ಮಾತನಾಡಿದ ಶಾಸಕ ಮಾಧುಸ್ವಾಮಿ, ಯಾರೋ ಮೂರನೇ ವ್ಯಕ್ತಿ ಈ ಬಗ್ಗೆ ಮಾತನಾಡಿರುವುದರಿಂದ ಸದನದ ಹಕ್ಕು ಚ್ಯುತಿ ವ್ಯಾಪ್ತಿಗೆ ಬರಲ್ಲ ಎಂದು ಪ್ರತಿಪಾದಿಸಿದರು. ಆದ್ರೆ ಇದನ್ನ ಇಷ್ಟಕ್ಕೆ ಕೈ ಬಿಡಲು ಸಾಧ್ಯವೇ ಇಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.