ಕರ್ನಾಟಕ

karnataka

ETV Bharat / state

ವಿಳಾಸವೇ ಇಲ್ಲದ ಸಿದ್ದರಾಮಯ್ಯಗೆ ಪ್ರೊಗ್ರೆಸ್ ಕಾರ್ಡ್ ಎಲ್ಲಿಗೆ ಕಳಿಸಲಿ: ಡಿವಿಎಸ್ ವ್ಯಂಗ್ಯ

ಸಾಧನೆ ಬಗ್ಗೆ ಮಾಹಿತಿ ನೀಡಲು ಸಿದ್ದರಾಮಯ್ಯಗೆ ವಿಳಾಸ ಕೇಳಿದ್ದೆ. ಆದರೆ ಸಿದ್ದರಾಮಯ್ಯಗೆ ಸೂಕ್ತ ವಿಳಾಸ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಳಾಸ ಇಲ್ಲ. ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ಇಲ್ಲ. ಬಾದಾಮಿಯಲ್ಲಿ ಮನೆ ಕೊಡಲ್ಲ ಅಂತ ಸ್ಥಳೀಯರು ಹೇಳಿದ್ದಾರೆ. ವಿಳಾಸವೇ ಇಲ್ಲದ ಅವರಿಗೆ ನಾನು ಪ್ರೊಗ್ರೆಸ್ ಕಾರ್ಡ್ ಎಲ್ಲಿಗೆ ಕಳಿಸಲಿ ಎಂದು ಬಿಜೆಪಿ ಅಭ್ಯರ್ಥಿ ಡಿವಿಎಸ್​ ವ್ಯಂಗ್ಯ.

By

Published : Apr 5, 2019, 7:59 PM IST

ಡಿವಿಎಸ್ ವ್ಯಂಗ್ಯ

ಬೆಂಗಳೂರು: ಪಾಲಿಕೆ ನಾಮನಿರ್ದೇಶನ ಸದಸ್ಯ ಅಮಾನುಲ್ಲಾಖಾನ್ ಮತ್ತು ಹಲವು ಕಾಂಗ್ರೆಸ್ ನಾಯಕರು ಸಭೆ ನಡೆಸಿ ಬಿಜೆಪಿ ನಾಯಕರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಿಜೆಪಿ ಬೇರೆಯ ಹೆಜ್ಜೆ ಇಡಲಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದಗೌಡ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಕಾರ್ಪೊರೇಟರ್ ಅಮಾನುಲ್ಲಾ ವಿವಾದಾತ್ಮಕ ಹೇಳಿಕೆ ವಿಚಾರ ಚುನಾವಣಾ ಆಯೋಗದ ಕಚೇರಿಗೆ‌ ಭೇಟಿ ನೀಡಿದ ಡಿ.ವಿ ಸದಾನಂದಗೌಡ ನೇತೃತ್ವದ ನಿಯೋಗ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಪ್ರಚೋದನೆ ನೀಡಿದ್ದ ಅಮಾನುಲ್ಲಾಖಾನ್​ ಮತ್ತು ಅವರ ಸಂಗಡಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್​ಗೆ ದೂರು ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಮೈತ್ರಿ ನಾಯಕರು ಸೋಲಿನ ಭೀತಿಯಿಂದ ಅಕ್ರಮ ಹಾದಿಗಳನ್ನು ಹಿಡಿದಿದ್ದಾರೆ. ರಾಜ್ಯದಲ್ಲಿ ಭಯಮುಕ್ತವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಯುವ ಸಂಶಯ ಮೂಡುತ್ತಿದೆ. ಕೆ.ಆರ್. ಪುರಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಪಾಲಿಕೆ ನಾಮನಿರ್ದೇಶನ ಸದಸ್ಯ ಅಮಾನುಲ್ಲಾಖಾನ್ ಮತ್ತು ಹಲವು ಕಾಂಗ್ರೆಸ್ ನಾಯಕರು ಸಭೆ ನಡೆಸಿ ಬಿಜೆಪಿ ನಾಯಕರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ.‌ ಆದರೆ ಬಿಜೆಪಿ ಯಾವುದೇ ಬೆದರಿಕೆಗೆ ಜಗ್ಗಲ್ಲ, ಕಾನೂನು ಮೀರಿ ಹೋಗುವುದಿಲ್ಲ. ಈ ಬಗ್ಗೆ ವೈರಲ್ ಆದ ವಿಡಿಯೋ ಮತ್ತು ಆಡಿಯೋ ಚುನಾವಣೆ ಆಯೋಗಕ್ಕೆ ನೀಡಿದ್ದೇವೆ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದಗೌಡ

ಗೂಂಡಾ ಪ್ರವೃತ್ತಿಯುಳ್ಳ ನಾಯಕರನ್ನ ಚುನಾವಣೆ ಮುಗಿಯುವರೆಗೂ ಕ್ಷೇತ್ರದಿಂದ ದೂರವಿಡಲು ಮನವಿ ಮಾಡಿಕೊಂಡಿದ್ದೇವೆ. ಎರಡ್ಮೂರು ದಿನ ಕಾದು ನೋಡುತ್ತೇವೆ. ಸೂಕ್ತ ಕ್ರಮ ಆಗದೇ ಇದ್ದರೆ ನಾವು ಮುಂದಿನ ನಡೆ ಕುರಿತು ನಿರ್ಧರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನು ನನ್ನ ಸಾಧನೆ ಬಗ್ಗೆ ಮಾಹಿತಿ ನೀಡಲು ಸಿದ್ದರಾಮಯ್ಯಗೆ ವಿಳಾಸ ಕೇಳಿದ್ದೆ. ಆದರೆ ಸಿದ್ದರಾಮಯ್ಯಗೆ ಸೂಕ್ತ ವಿಳಾಸ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಳಾಸ ಇಲ್ಲ. ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ಇಲ್ಲ. ಬಾದಾಮಿಯಲ್ಲಿ ಮನೆ ಕೊಡಲ್ಲ ಅಂತ ಸ್ಥಳೀಯರು ಹೇಳಿದ್ದಾರೆ. ವಿಳಾಸವೇ ಇಲ್ಲದ ಅವರಿಗೆ ನಾನು ಪ್ರೊಗ್ರೆಸ್ ಕಾರ್ಡ್ ಎಲ್ಲಿಗೆ ಕಳಿಸಲಿ ಎಂದು ಸದಾನಂದಗೌಡ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮೊದಲು‌ ಪ್ರತಿಪಕ್ಷ ನಾಯಕರಾಗಿ ಗೂಟದ ಕಾರಿನಲ್ಲಿ ಓಡಾಡುತ್ತಿದ್ದರು. ನಂತರ ಸಿಎಂ ಆಗಿ ಗೂಟದ ಕಾರಿನಲ್ಲಿ ಓಡಾಡುತ್ತಿದ್ದರು. ಆದರೆ ಈಗ ಅಧಿಕಾರ ಇಲ್ಲ ಗೂಟದ ಕಾರಿಗೋಸ್ಕರ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಹೀಗೆ ಮಾತಾಡ್ತಿದ್ದಾರೆ. ಹೇಗಾದರೂ ಮಾಡಿ ಸರ್ಕಾರ ಬೀಳಿಸಿ ಮತ್ತೆ ಪ್ರತಿಪಕ್ಷ ನಾಯಕರಾಗಿ ಗೂಟದ ಕಾರಿನಲ್ಲಿ ಓಡಾಡುವ ಕನಸು ಕಾಣುತ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ಸದಾನಂದಗೌಡ ತಿರುಗೇಟು ನೀಡಿದರು.

ABOUT THE AUTHOR

...view details