ಬೀದರ್:ತಮ್ಮನ ಸಾವಿನ ದುಃಖದಲ್ಲಿಯೇ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬರೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವ ಘಟನೆ ತಾಳಮಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಪರೀಕ್ಷೆ ಕೇಂದ್ರದಲ್ಲಿ ನಡೆದಿದೆ. ಗ್ರಾಮದ ಕೀರ್ತನಾ ಪ್ರಶಾಂತ್ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ.
ಘಟನೆಯ ವಿವರ: ವೇಳಾ ಪಟ್ಟಿಯಂತೆ ನಿನ್ನೆ (ಗುರುವಾರ) ಇಂಗ್ಲಿಷ್ ಭಾಷೆ ವಿಷಯ ಇತ್ತು. ವಿದ್ಯಾರ್ಥಿನಿ ಕೀರ್ತನಾ ಎಂಬುವವರ ಸಹೋದರ ಕಾರ್ತಿಕ ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದ. ಗುರುವಾರ ಆತನ ಅಂತ್ಯ ಕ್ರಿಯೆ ನಡೆಯಲ್ಲಿತ್ತು. ಹೀಗಾಗಿ ತಮ್ಮನ ಸಾವಿನ ದುಃಖದಲ್ಲಿದ್ದ ಬಾಲಕಿ ಪರೀಕ್ಷೆ ಬರೆಯಲು ನಿರಾಕರಿಸಿದ್ದರು. ಈ ಬಗ್ಗೆ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸುರೇಶ ಕಟ್ಟಮನಿ, ಕಸ್ಟೋಡಿಯನ್ ಮಲ್ಲಪ್ಪ ಜಿಗಜೀವಣಿ ಅವರು ಬಾಲಕಿಯ ತಂದೆ ಸೇರಿದಂತೆ ಸಂಬಂಧಿಕರಿಗೆ ಪರೀಕ್ಷೆ ಬರೆಸುವ ಬಗ್ಗೆ ಮನವರಿಕೆ ಮಾಡಿದರು. ಇದರ ಫಲವಾಗಿ ದುಃಖದ ಮಧ್ಯೆ ಬಾಲಕಿ ಕೀರ್ತನಾ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ. ಬಳಿಕ ತಮ್ಮನ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ:ಎಸ್ಎಸ್ಎಲ್ಸಿ ಪರೀಕ್ಷೆ; ಬೀದರ್ನಲ್ಲಿ ಸಾಮೂಹಿಕ ನಕಲು, 15 ಶಿಕ್ಷಕರ ಅಮಾನತು
ತಂದೆ ಸಾವಿನ ನೋವಿನ ಮಧ್ಯೆ ಪರೀಕ್ಷೆ ಬರೆದ ವಿದ್ಯಾರ್ಥಿನಿ: ತಂದೆಯ ಸಾವಿನ ದುಃಖದ ನಡುವೆಯೂ ಶಾಲಾ ವಿದ್ಯಾರ್ಥಿನಿಯೊಬ್ಬರು ಹತ್ತನೇ ತರಗತಿ ಪರೀಕ್ಷೆ ಬರೆದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಏ.1ರಂದು ನಡೆದಿತ್ತು. ಹುಕ್ಕೇರಿ ತಾಲೂಕಿನ ಕೆಸ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯಾದ ಮಿದ್ದತ್ ಅಬ್ದುಲ್ ರಜಾಕ್ ಸನದಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಕಳೆದ ಗುರುವಾರ ರಾತ್ರಿ ವಿದ್ಯಾರ್ಥಿನಿ ಮಿದ್ದತ್ ಅವರ ತಂದೆ ಮೃತಪಟ್ಟಿದ್ದರು.