ಬೀದರ್:ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಮುಂಗಾರು ಹಂಗಾಮಿನ ದ್ವಿದಳ ಬೆಳೆಯಾದ ಹೆಸರು ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಸತತ ಮಳೆ: ಕಟಾವಿಗೆ ಬಂದಿದ್ದ ಹೆಸರು ಬೆಳೆ ನೆಲಸಮ ಈ ಬಾರಿ ಮುಂಗಾರು ಹಂಗಾಮಿನ ಬಿತ್ತನೆ ವೇಳೆಯಲ್ಲಿ ಸೋಯಾಬಿನ್ ಬೀಜ ಕಳಪೆ ಮಟ್ಟದಿಂದ ಕೂಡಿದ್ದರಿಂದ ಕೃಷಿ ಇಲಾಖೆ ಸಲಹೆಯಂತೆ ರೈತರು ಉದ್ದು, ಹೆಸರು, ತೊಗರಿ ಬೆಳೆಗಳನ್ನು ಹೆಚ್ಚಾಗಿ ಬೆಳೆದಿದ್ದರು. ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಮಳೆಯಿಂದಾಗಿ ಹೆಸರು ಬೆಳೆ ನೆಲಸಮವಾಗಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ರೈತ ಕೈಲಾಸ್ ಎಂಬುವವರ 20 ಎಕರೆ ಹಾಗೂ ಇತರೆ ರೈತರ 30 ಎಕರೆ ಸೇರಿ ಒಟ್ಟು 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೆಸರು ಬೆಳೆ ಮಳೆಗೆ ಬಲಿಯಾಗಿದೆ.
ಇದಕ್ಕಾಗಿ ಅಂದಾಜು 2 ಲಕ್ಷ ರೂಪಾಯಿ ಖರ್ಚು ಮಾಡಲಾಗಿದ್ದು, ಸುಮಾರು 125 ಕ್ವಿಂಟಲ್ ಇಳುವರಿ ನಿರೀಕ್ಷೆಯಲ್ಲಿದ್ದೆವು. ಇದೀಗ ಮಳೆಯ ಅವಾಂತರದಿಂದ ಬೆಳೆ ಕೈ ಸೇರಿಲ್ಲ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು ಎಂದು ರೈತರು ಆಗ್ರಹಿಸಿದ್ದಾರೆ.