ಬಳ್ಳಾರಿ:ನಗರದ ಹೊರವಲಯದ ಹಗರಿ ಬಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಪನ್ನರಾಜ್, ಎಡಿಸಿ ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
2020-2021 ರ ಬಜೆಟ್ನಲ್ಲಿ ಬಳ್ಳಾರಿ ಕೃಷಿ ವಿಶ್ವವಿದ್ಯಾಲಯಕ್ಕೆ 50 ಕೋಟಿ ರೂ ಮೀಸಲಿಡಬೇಕು ಮತ್ತು ಆಡಳಿತಾತ್ಮಕವಾಗಿ ಅನುಮೋದನೆ ನೀಡಬೇಕು. ಮುಖ್ಯವಾಗಿ ಡಿ.ಎಂ.ಎಫ್ ಹಣದಲ್ಲಿ 50 ಕೋಟಿ ರೂ. ಹಣ ನೀಡಬಹುದು ಹಾಗೂ ಕೆ.ಎಂ.ಆರ್.ಸಿಯಲ್ಲಿ 50 ಕೋಟಿ ರೂ. ಹಣ ನೀಡಬಹುದು ಎಂದು ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕೃಷಿ ಕಾಲೇಜಿನಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊಣೆಯಿಲ್ಲದೇ ಕಾಲೇಜು ಆರಂಭಿಸಬಹುದು ಎಂದು ಪನ್ನರಾಜ್ ತಿಳಿಸಿದರು.
ರೈತ ಮಾಧವ ರೆಡ್ಡಿ ಮಾತನಾಡಿ, ಈ ಕೃಷಿ ಕಾಲೇಜು ಆರಂಭವಾಗುವುದರಿಂದ ಬಹಳಷ್ಟು ಮಕ್ಕಳಿಗೆ ಅನುಕೂಲವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಇಂಜಿನಿಯರಿಂಗ್ ಓದಿದರೂ ಕೆಲಸ ಸಿಗದ ಪರಿಸ್ಥಿತಿಯಿದೆ. ಹಾಗಾಗಿ ಕೃಷಿ ಕಾಲೇಜು ಆರಂಭಿಸಿದರೆ ಸ್ವಯಂ ಉದ್ಯೋಗ ಮಾಡಬಹುದು. ರೈತರ ಮಕ್ಕಳಿಗೆ ಕೃಷಿ ಕಾಲೇಜುಗಳಲ್ಲಿ ಓದಿಸುವ ಮೂಲಕ ಮಕ್ಕಳನ್ನು ಕೃಷಿ ಕ್ಷೇತ್ರದತ್ತ ಸೆಳೆಯುತ್ತೇವೆ ಎಂದರು.