ಕರ್ನಾಟಕ

karnataka

By

Published : Oct 24, 2020, 2:26 PM IST

ETV Bharat / state

ಸಮಗ್ರ ಕೃಷಿಯಿಂದ ವಾರ್ಷಿಕ ಅಧಿಕ ಲಾಭ ಗಳಿಸುತ್ತಿರುವ ರೈತ!

ಬಸಯ್ಯಸ್ವಾಮಿ ಒಂದೇ ಬೆಳೆಯನ್ನು ಬೆಳೆಯದೆ‌ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಭತ್ತ, ಕಬ್ಬು ಸೇರಿದಂತೆ ಜೇನು ಸಾಕಾಣಿಕೆಯಿಂದ ವಾರ್ಷಿಕವಾಗಿ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ.‌

farmer basayya swamy getting profit from integrated agriculture
ಸಮಗ್ರ ಕೃಷಿಯಿಂದ ಲಾಭದಾಯಕ ಹೆಜ್ಜೆ ಇಟ್ಟ ರೈತ ಬಸಯ್ಯಸ್ವಾಮಿ

ಹೊಸಪೇಟೆ: ತಾಲೂಕಿನ ಕಡ್ಡಿರಾಂಪುರ ರೈತ ಬಸಯ್ಯಸ್ವಾಮಿ ಸಾವಯವ ಕೃಷಿಯಿಂದ ಯಶಸ್ಸು ಸಾಧಿಸಿದ್ದು, ಭತ್ತ, ಕಬ್ಬು ಸೇರಿದಂತೆ ಜೇನು ಸಾಕಾಣಿಕೆಯಿಂದ ವಾರ್ಷಿಕವಾಗಿ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ.‌

ಕೃಷಿ ಎಂದರೆ ಸಾಕು ಮುಗು ಮುರಿಯುವವರೇ ಹೆಚ್ಚು. ಆದರೆ ರೈತ ಬಸಯ್ಯಸ್ವಾಮಿ ಅವರು ಸಮಗ್ರ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಿ ಲಾಭದಾಯಕ ಜೀವನ ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಸಾಯಯವ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದರ ಮೂಲಕ ಸಾವಯವ ಕೃಷಿಯನ್ನು ಕರಗತ ಮಾಡಿಕೊಂಡಿದ್ದಾರೆ.‌ ಕಾಂಪೋಸ್ಟ್ ಕುಣಿ ಹಾಗೂ ಎರೆಹುಳು ತೊಟ್ಟಿಯನ್ನು ಮಾಡಿಕೊಳ್ಳಬೇಕು.‌ ಜೊತೆಗೆ ಕಸವನ್ನು ಭೂಮಿಯಲ್ಲಿ ಹಾಕಿ ರೀ ಸೈಕ್ಲಿಂಗ್ ಮಾಡುವ ಮೂಲಕ ಗೊಬ್ಬರವಾಗಿ ಪರಿರ್ತನೆ ಮಾಡಬೇಕು ಎಂಬುದು ರೈತ ಬಸಯ್ಯಸ್ವಾಮಿ ಅವರ ಅನುಭವದ ಮಾತಾಗಿದೆ.

ಸಮಗ್ರ ಕೃಷಿ ರೈತ

ಸಾವಯವ ಕೃಷಿ ಪದ್ಧತಿಯಿಂದ 1 ಎಕರೆಯಲ್ಲಿ 60 ಟನ್ ಕಬ್ಬಿನ ಇಳುವರಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಬಹುತೇಕ ರೈತರು ಇಳುವರಿ ಬಂದ ಬಳಿಕ ಉಳಿದ ಕಬ್ಬಿನ ಬೇರನ್ನು ಬೆಂಕಿಯಲ್ಲಿ ಸುಡುತ್ತಾರೆ.‌ ಇದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತದೆ. ಆದರೆ ಬಸಯ್ಯಸ್ವಾಮಿ ಅವರು ಉಳಿದ ಕಬ್ಬಿನ ಬೇರನ್ನು ಗೊಬ್ಬರವಾಗಿ ಪರಿವರ್ತನೆ ಮಾಡುತ್ತಿರುವುದು ವಿಶೇಷ. ಭತ್ತವನ್ನು ಬೆಳೆಯುವ ಮೂಲಕ ಮನೆಗೆ ಅಕ್ಕಿಯನ್ನು ಉತ್ಪಾದಿಸುತ್ತಾರೆ.‌ ಉಳಿದ ಅಕ್ಕಿಯನ್ನು ಪಾಲಿಶ್ ಮಾಡದೆ ಮಾರಾಟ ಮಾಡುತ್ತಾರೆ.

ಮುಕ್ಕಾಲು ಎಕೆರೆಯಲ್ಲಿ ಬಸಯ್ಯಸ್ವಾಮಿ ಕೈ ತೋಟವನ್ನು ಸಹ ಮಾಡಿಕೊಂಡಿದ್ದಾರೆ.‌ ಅದರಲ್ಲಿ ಜೇನು ಸಾಕಾಣಿಕೆಯನ್ನು ಮಾಡಿಕೊಂಡು ವಾರ್ಷಿಕ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಆಯುರ್ವೇದಿಕ್​​ ಗಿಡಗಳಾದ ಇಪ್ಲಿ, ಮೆಣಸು, ತುಳಸಿ, ಕಾಮ ಕಸ್ತೂರಿ ಬೆಳೆದಿದ್ದಾರೆ. ಅರಣ್ಯ ಸಸಿಗಳಾದ ಹೆಬ್ಬೇವು, ಬಿದಿರಿನ ಗಿಡಗಳು ಸಹ ಇವೆ. ಕ್ಯಾನ್ಸರ್​​ಗೆ ಮದ್ದಾದ ರಾಮ ಫಲ, ಹನುಮಾನ ಫಲ ಹಾಗೂ ಲಕ್ಷ್ಮಣ ಫಲವನ್ನು ಬೆಳೆಯುತ್ತಿದ್ದಾರೆ. ಇನ್ನು ಸಕ್ಕರೆ ಕಾಯಿಲೆಗೆ ಇನ್ಸುಲಿನ್ ಗಿಡ ಸಹ ಬೆಳಸಿದ್ದಾರೆ. ರಾತ್ರಿ ವೇಳೆಯಲ್ಲಿ ಸುಗಂಧ ಸೂಸುವ ಮನೋರಂಜನ, ಪಾರಿಜಾತ, ರಾತ್ರಿ ರಾಣಿ ಗಿಡಗಳನ್ನು‌‌‌‌‌‌ ಕಾಣಬಹುದಾಗಿದೆ.‌ ನರ್ಸರಿ ಮೂಲಕ ರೈತರ ಬೆಳೆಗಳ ಇಳುವರಿಗೆ ಸಹಾಯಕರಾಗಿದ್ದಾರೆ.

ಎರೆಹುಳು ಇದ್ದರೆ ರೆಂಟೆ, ಕುಂಟಿ ಹೊಡೆಯುವ ಅವಶ್ಯಕತೆ ಇಲ್ಲ. ಆ ಕೆಲಸವನ್ನು ಎರೆಹುಳು ಒಂದೇ ಮಾಡಲಿದ್ದು,‌ ಭೂಮಿಯನ್ನು ಫಲವತ್ತುಗೊಳಿಸುವ ಕಾರ್ಯವನ್ನು ಸಹ ಈ ಹುಳುಗಳು ಮಾಡಲಿವೆ. ಹಾಗಾಗಿ ಬಸಯ್ಯಸ್ವಾಮಿ ಅವರು ಕೃಷಿಯಲ್ಲಿ ಎರೆಹುಳುವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.‌

ಅಷ್ಟೇ ಅಲ್ಲದೆ ಜೇನು ಸಾಕಾಣಿಕೆಯಲ್ಲಿ ಬಸಯ್ಯಸ್ವಾಮಿ ಹೆಸರುವಾಸಿಯಾಗಿದ್ದಾರೆ. ಕಟ್ಟಿಗೆ ಪೆಟ್ಟಿಗೆ ಹಾಗೂ ಗಡಿಗೆಯಲ್ಲಿ ಜೇನು ಸಾಕಾಣಿಕೆಯನ್ನು ಮಾಡುತ್ತಿದ್ದಾರೆ.‌ ವಾರ್ಷಿಕ 20 ಪೆಟ್ಟಿಗೆ ಜೇನು ತುಪ್ಪವನ್ನು ಸಂಗ್ರಹಿಸಿ 1 ಲಕ್ಷ ರೂ. ಆದಾಯವನ್ನು ಗಳಿಸುತ್ತಿದ್ದಾರೆ. ನಾನಾ ಭಾಗಗಳಿಂದ ರೈತರು ಬಂದು ಬಸಯ್ಯಸ್ವಾಮಿ ಅವರಿಂದ ಜೇನು ಸಾಕಾಣಿಕೆಯ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ದನಗಳನ್ನೂ ಸಾಕಿಕೊಂಡಿದ್ದಾರೆ. ಇದರಿಂದ ಮನೆಗೆ ಗೋಬರ್​ ಗ್ಯಾಸ್ ಮಾಡಿಕೊಂಡಿದ್ದು, ಸಿಲಿಂಡರ್ ಸಹವಾಸಕ್ಕೆ ಹೋಗುವುದಿಲ್ಲ.‌ ಅಲ್ಲದೆ ಕೋತಿಗಳ ಕಾಟ ಹೆಚ್ಚಾಗಿದ್ದು, ಕೋತಿ ಗನ್ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಬಸಯ್ಯಸ್ವಾಮಿ ಅವರು ಕೈ ತೋಟದಲ್ಲಿ ಮನೆಯನ್ನು ಮಾಡಿಕೊಂಡಿದ್ದಾರೆ. ಜನರು ಮನೆ ಬಳಿ ಬಂದು‌ ಬೇಕಾದ ವಸ್ತುಗಳನ್ನು ಖರೀದಿ‌‌ ಮಾಡಿಕೊಂಡು ಹೋಗುತ್ತಾರೆ. ಬಸಯ್ಯಸ್ವಾಮಿ ಒಂದೇ ಬೆಳೆಯನ್ನು ಬೆಳೆಯದೆ‌ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಎಲ್ಲಾ ಸಾಧನೆಯಲ್ಲಿ ಬಸಯ್ಯಸ್ವಾಮಿ ಅವರ ಪತ್ನಿ ಸುಜಾತ ಅವರ ಪಾಲು ಸಹ ಇದೆ.

ABOUT THE AUTHOR

...view details