ಬೆಳಗಾವಿ: ರಾಜ್ಯದಿಂದ ಮಹದಾಯಿ ನದಿ ನೀರು ತಿರುವು ಮಾಡಿದ್ರೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಮಹದಾಯಿ ನದಿ ನೀರು ತಿರುವು ಮಾಡಿದ್ದರಿಂದ ನೀರಿನ ಮಟ್ಟ ಕಡಿಮೆ ಆಗಿದೆ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಆರೋಪಕ್ಕೆ ಬೆಳಗಾವಿಯ ಡಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಮಗಾರಿ ಸ್ಥಳಕ್ಕೆ ಬಂದು ನೋಡಿಕೊಂಡು ಹೋಗುವಂತೆ ಗೋವಾ ಸಿಎಂಗೆ ಆಹ್ವಾನ ಮಾಡ್ತೀನಿ. ಮಹದಾಯಿ ನದಿಗೆ ಅಡ್ಡಲಾದ ಗೋಡೆ ಟಚ್ ಮಾಡಿದ್ರೆ ರಾಜೀನಾಮೆ ಕೊಡ್ತೀನಿ. ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಹಿತಾಸಕ್ತಿ ನಾವು ಕಾಪಾಡುತ್ತೇವೆ. ಅವರು ಅಲ್ಲಿನ ಹಿತಾಸಕ್ತಿಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದರು ತ್ಯಾಗಿಗಳಿಗೆ ಸಚಿವ ಸ್ಥಾನ ಸಿಗಬೇಕು:ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ತ್ಯಾಗ ಮಾಡಿ ಬಂದವರಿಗೆ ಸಚಿವ ಸ್ಥಾನ ಸಿಗಬೇಕು. ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಅಂತ ನಮ್ಮ ಆಗ್ರಹವೂ ಇದೆ. ಸೋತವರ ಪರ ಲಾಬಿ ಮಾಡುವವರು ತ್ಯಾಗ ಮಾಡಲಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ರಾಜೀನಾಮೆ ಕೊಡುವ ಸಮಯ ಬಂದ್ರೆ ಕೊಡಣ ಬಿಡಿ. ಆದರೆ ತ್ಯಾಗ ಮಾಡಿ ಬಂದ 17 ಶಾಸಕರಿಗೂ ಸಚಿವ ಸ್ಥಾನ ಸಿಗಬೇಕು. ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ಸಂಪುಟದಲ್ಲಿ ಅವಕಾಶ ಸಿಗಬೇಕು. ಸಚಿವ ಶ್ರೀಮಂತ ಪಾಟೀಲ್ರನ್ನು ಸಂಪುಟದಿಂದ ಕೈ ಬಿಡ್ತಾರೆ ಎಂಬುದು ಸುಳ್ಳು ಎಂದರು.
ಬಿಜೆಪಿಗೆ ಬಂದ ಯಾರನ್ನೂ ಡ್ರಾಪ್ ಮಾಡಲ್ಲ. ರೇಣುಕಾಚಾರ್ಯ ಆಗ್ರಹವೂ ಸರಿ ಇದೆ. ನಮ್ಮ ಆಗ್ರಹವೂ ಸರಿ ಇದೆ. ಇಬ್ಬರೂ ಸೇರಿ ಸರ್ಕಾರ ಆಗಿದೆ. ಒಬ್ಬರಿಂದಲೇ ಆಗಿಲ್ಲ. ನಮ್ಮ ಸಿಎಂ ಗಟ್ಟಿ ಇದ್ದಾರೆ. ಸಂಪುಟ ವಿಸ್ತರಣೆ ಮಾಡ್ತಾರೆ. ಮಿತ್ರ ಮಂಡಳಿಯಿಂದ ಪ್ರತ್ಯೇಕ ಸಭೆ ಆಗಿದೆ ಎಂಬುದು ಸುಳ್ಳು. ಶಂಕರ್, ವಿಶ್ವನಾಥ್, ಎಂಟಿಬಿ ಸಹಜವಾಗಿ ಸೇರಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಬಂಡಾಯ ಅಂತ ದೊಡ್ಡದಾಗಿ ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಅದೇನು ದೊಡ್ಡ ವಿಚಾರ ಅಲ್ಲ. ಯಡಿಯೂರಪ್ಪ ಎರಡೂವರೆ ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಮಾಡ್ತೀವಿ. ನನ್ನ ಮೇಲಿನ ಪ್ರೀತಿಗೆ ಎಲ್ಲರೂ ಮನೆಗೆ ಬಂದು ಭೇಟಿ ಆಗ್ತಿದ್ದಾರೆ. ಆದರೆ ನಾನೇನು ಮಹಾನ್ ನಾಯಕ ಅಲ್ಲ. ಸಣ್ಣ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿಯಲ್ಲಿ ಮೂಲ ವಲಸಿಗ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು.
ನಾನು ಇಲಾಖೆ ಮೀಟಿಂಗ್ಗೆ ನವದೆಹಲಿಗೆ ಹೋಗಿದ್ದೇನೆ. ನನ್ನ ಇಲಾಖೆ ದೊಡ್ಡದು. ಮೇಲಿಂದ ಮೇಲೆ ದೆಹಲಿಗೆ ಹೋಗಬೇಕಾಗುತ್ತೆ. ನಾನು ಪ್ರತಿ ಸಲ ದೆಹಲಿಗೆ ಹೋದಾಗ ಸಂತೋಷ್, ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.