ಅಥಣಿ(ಬೆಳಗಾವಿ):ರಾಜ್ಯದಲ್ಲಿ ಕೊರೊನಾ ಉಲ್ಬಣದಿಂದ ರಾಜ್ಯ ಸರ್ಕಾರ ಕಳೆದ ಇಪ್ಪತ್ತು ದಿನಗಳಿಂದ ಲಾಕ್ಡೌನ್ ಜಾರಿ ಮಾಡಿದೆ. ಪರಿಣಾಮ ತಾಲೂಕಿನ ಕಲ್ಲಂಗಡಿ ಬೆಳೆಗಾರರ ಮೇಲೆ ಅದು ನೇರ ಪರಿಣಾಮ ಬಿಸಿ ರೈತರು ಕಂಗಾಲಾಗಿದ್ದಾರೆ.
ತಾಲೂಕಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯಾದ ಕಲ್ಲಂಗಡಿ ಬೆಳೆಯುತ್ತಾರೆ. ಆದರೆ ಬೇಸಿಗೆ ವೇಳೆಯಲ್ಲಿ ದಿಢೀರನೆ ಕೊರೊನಾ ಸೋಂಕು ಉಲ್ಬಣದಿಂದ ರೈತರಿಗೆ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ರಾಜ್ಯದ ವಿವಿಧ ಭಾಗಗಳಿಗೆ ಮತ್ತು ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗೋವಾ, ಆಂಧ್ರಪ್ರದೇಶ ರಾಜ್ಯಗಳಿಗೆ ಪ್ರತಿನಿತ್ಯ ಲೋಡುಗಟ್ಟಲೆ ತಾಲೂಕಿನಿಂದ ಕಲ್ಲಂಗಡಿ ಸರಬರಾಜು ಆಗುತ್ತಿತ್ತು, ಸದ್ಯ ರಾಜ್ಯದಲ್ಲಿ ಲಾಕ್ಡೌನ್ ಹಾಗೂ ಹಣ್ಣಿಗೆ ಬೇಡಿಕೆ ಇಲ್ಲದೆ ರೈತರ ಜಮೀನಲ್ಲಿ ರಾಶಿ ರಾಶಿ ಕಲ್ಲಂಗಡಿ ಹಣ್ಣು ಕೊಳೆಯುತ್ತಿದೆ.
ಈಟಿವಿ ಭಾರತ ಜೊತೆ ರೈತ ಜಾವೀದ್ ನದಾಫ್ ಮಾತನಾಡಿ, ಒಂದು ಎಕರೆ ಕಲ್ಲಂಗಡಿ ಬೆಳೆಯಲು 70 ಸಾವಿರ ರೂಪಾಯಿ ಖರ್ಚಾಗುತ್ತದೆ. ನಾನು ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದೆ. ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ನನಗೆ ಇದೆ ರೀತೀಯಿಂದ ನಷ್ಟ ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತ್ತು. ಈ ಬಾರಿ ಒಳ್ಳೆದಾಗುತ್ತದೆಂದು ಮತ್ತೆ ಬೆಳೆದೆ. ಆದರೆ ಈ ಬಾರಿಯೂ ನನಗೆ ಇದೇ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕಳೆದ ಬಾರಿ ಪರಿಹಾರ ಘೋಷಣೆ ಮಾಡಿತ್ತು. ಆದರೆ ಒಂದೇ ಒಂದು ರೂಪಾಯಿ ಬಂದಿಲ್ಲವೆಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆರೋಪಿಸಿ ಅಳಲು ತೋಡಿಕೊಂಡರು.