ಕರ್ನಾಟಕ

karnataka

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದೋ, ಬೇರೆ ಸರ್ಕಾರವೋ ಯೋಚಿಸಬೇಕಿದೆ: ಬಿ.ಕೆ.ಹರಿಪ್ರಸಾದ್

By ETV Bharat Karnataka Team

Published : Jan 19, 2024, 4:55 PM IST

ಬಿ.ಕೆ.ಹರಿಪ್ರಸಾದ್​ ಅವರು ನೀಡಿದ್ದ ಹೇಳಿಕೆ ಹಿನ್ನೆಲೆ ಸಿಸಿಬಿ ಪೊಲೀಸ್​ ಅಧಿಕಾರಿಗಳು ಇಂದು ಕುಮಾರಕೃಪಾ ಅತಿಥಿಗೃಹದಲ್ಲಿ ವಿಚಾರಣೆಗೆ ಒಳಪಡಿಸಿದರು.

Congress Leader B K Hariprasad
ಕಾಂಗ್ರೆಸ್​ ಮುಖಂಡ ಬಿ ಕೆ ಹರಿಪ್ರಸಾದ್​

ಬೆಂಗಳೂರು: "ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷದ ಸರ್ಕಾರ ಇದೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಮುಂದಿನ ದಿನಗಳಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಇದೆಯಾ ಅಥವಾ ಬೇರೆಯವರ ಸರ್ಕಾರ ಇದೆಯಾ ಎನ್ನುವುದನ್ನು ಯೋಚನೆ ಮಾಡಬೇಕಿದೆ. ನನ್ನ ಪರಿಸ್ಥಿತಿಯೇ ಹೀಗಾದರೆ, ಉಳಿದ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎನ್ನುವುದು ನನ್ನ ಯೋಚನೆ. ಬಿಜೆಪಿ ಸರ್ಕಾರ ಇದ್ದಾಗ ಮೂರು ಕೇಸ್​ ಫೈಲ್​ ಮಾಡಿದ್ರು, ಆದರೆ ಇವರು ಯಾಕೆ ಮಾಡಿದ್ದಾರೆ ಎನ್ನುವುದು ಗೊತ್ತಾಗ್ತಿಲ್ಲ" ಎಂದು ಕಾಂಗ್ರೆಸ್​ ಮುಖಂಡ ಬಿ.ಕೆ. ಹರಿಪ್ರಸಾದ್​ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲೂ ಗೋಧ್ರಾ ಮಾದರಿ ಹತ್ಯಾಕಾಂಡ ದಾಳಿ ನಡೆಯಬಹುದು. ನಮ್ಮ ಕರ್ನಾಟಕದಿಂದ ಅಯೋಧ್ಯೆಗೆ ಪ್ರಯಾಣಿಸುವವರಿಗೆ ರಕ್ಷಣೆ ಕೊಡಿ ಎಂಬ ಹೇಳಿಕೆ ನೀಡಿದ ಹಿನ್ನೆಲೆ ಸಿಸಿಬಿ ಪೊಲೀಸರು ಕುಮಾರಕೃಪ ಅತಿಥಿ ಗೃಹದಲ್ಲಿ ವಿಚಾರಣೆಗೆ ಒಳಪಡಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು.

"ಕುಮಾರಕೃಪಾದಲ್ಲಿ‌ ಇದ್ದಾಗ ಹೇಳಿಕೆ ಪಡೆಯಲು ಬಂದಿದ್ದರು. ಸಿಸಿಬಿ ಅಧಿಕಾರಿಗಳ ಯಾವ ಪ್ರಶ್ನೆಗಳಿಗೂ ನಾನು ಉತ್ತರ ನೀಡಿಲ್ಲ. ಠಾಣೆಗೆ ಕರೆದುಕೊಂಡು ಹೋಗಿ, ಅಲ್ಲಿ ಉತ್ತರ ಕೊಡುತ್ತೇನೆ. ಠಾಣೆಗೆ ಕರೆದುಕೊಂಡು ಹೋಗಲು ವಾರೆಂಟ್​ ಜೊತೆಗೆ ಬನ್ನಿ ಎಂದು ಹೇಳಿ ಕಳುಹಿಸಿದ್ದೇನೆ. ಸಂಸದ ಅನಂತ್ ಕುಮಾರ್​ ಹೆಗಡೆ, ಕಲ್ಲಡಕ್ ಪ್ರಭಾಕರ್​ ಭಟ್​ ಅವರನ್ನು ರತ್ನಕಂಬಳಿ ಹಾಸಿ ನೋಡಿಕೊಳ್ಳುವಂತೆ, ನನ್ನನ್ನು ನೋಡಿಕೊಳ್ಳಬೇಕೆಂದಿಲ್ಲ. ಯಾವುದೇ ಸಂದರ್ಭದಲ್ಲಿ ಕರೆದರೂ ಬಂದು ಉತ್ತರ ನೀಡಲು ತಯಾರಿದ್ದೇನೆ. ಕೇವಲ ಹೇಳಿಕೆ ಮಾತ್ರವಲ್ಲ, ನಾನು ಮಂಪರು ಪರೀಕ್ಷೆಗೂ ಯತಾರಿದ್ದೇನೆ. ನನ್ನ ಜೊತೆಗೆ ಬಿಜೆಪಿಯ ರಾಜ್ಯಾಧ್ಯಕ್ಷರ ಮಂಪರು ಪರೀಕ್ಷೆಯನ್ನೂ ನಡೆಸಬೇಕು ಎಂದು ಅವರಿಗೆ ಹೇಳಿದ್ದೇನೆ" ಎಂದು ಹೇಳಿದರು.

"ಸರ್ಕಾರದ ವಿರುದ್ಧ ನಾನು ಮಾತನಾಡಿಲ್ಲ. ಸರ್ಕಾರದಲ್ಲಿರುವವರಿಗೆ ಅವರ ಜವಾಬ್ದಾರಿ ಏನು ಎನ್ನುವುದನ್ನು ಹೇಳಿದ್ದೇನೆ. ಆದರೆ, ಅದು ಸರ್ಕಾರದ ವಿರುದ್ಧ ಆಗಿದೆ. ನನ್ನ ತಿಳಿವಳಿಕೆ, ಸಲಹೆಯನ್ನು ಬೇರೆ ರೀತಿಯಲ್ಲಿ ತೆಗೆದುಕೊಂಡರೆ ನಾನು ಜವಾಬ್ದಾರನಲ್ಲ. ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ನಮ್ಮದು ಅದ್ಭುತವಾದ ಸರ್ಕಾರ. ಹೈಕಮಾಂಡ್ ಇವರಲ್ಲೇ ಇದೆ ನೋಡೋಣ" ಎಂದು ವಾಗ್ದಾಳಿ ನಡೆಸಿದ್ದಾರೆ.

"ಕಲ್ಲಡ್ಕ ಪ್ರಭಾಕರ್ ಭಟ್​, ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರಿಗೆ ರತ್ನ ಕಂಬಳಿ ಹಾಸಿದ್ದಾರೆ. ಈ ಬಗ್ಗೆ ಹೈ ಕಮಾಂಡ್ ಗಮನಕ್ಕೆ ತರುತ್ತೇನೆ. ಪೊಲೀಸ್​ನವರು ಟಾರ್ಗೆಟ್​ ಮಾಡಿದರೆ ನಾನು ಬಗ್ಗುವವನಲ್ಲ. ಪೊಲೀಸ್​ ಮೂಲಕ ಸರ್ಕಾರ ನನ್ನನ್ನು ಟಾರ್ಗೆಟ್​ ಮಾಡಿದ್ದರೆ, ಅವರ ಭ್ರಮೆಯಷ್ಟೆ. ಬಿಜೆಪಿ ಇದ್ದಾಗ ಮೂರು ಕೇಸ್​ ಹಾಕಿದ್ದಾರೆ. ಅದು ಬೇರೆ ಪ್ರಶ್ನೆ. ನಾನೇನಾದರೂ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಟ್ಟಾಗ ಕೇಸ್​ ಮಾಡಬೇಕು. ಆದರೆ ಇವರು ಯಾಕೆ ಮಾಡಿದ್ದಾರೆ ಎನ್ನುವುದನ್ನು, ಬೇರೆ ಸದಸ್ಯರ ಜೊತೆ ಮಾತನಾಡಿ, ನಂತರ ಮಾಧ್ಯಮದ ಮುಂದೆ ಬರುತ್ತೇನೆ" ಎಂದು ಹೇಳಿದ್ದಾರೆ.

ಗೋಧ್ರಾ ಮಾದರಿ ಹತ್ಯಾಕಾಂಡ ರೀತಿ ರಾಜ್ಯದಲ್ಲೂ ನಡೆಯಬಹುದು ಎಂಬ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಸಿಸಿಬಿ ಪೊಲೀಸರು ಬಿ.ಕೆ.ಹರಿಪ್ರಸಾದ್ ಅವರನ್ನು ವಿಚಾರಣೆಗೆ ಕರೆದಿದ್ದರು. ಹೇಳಿಕೆ ಆಧರಿಸಿ ಮಾಹಿತಿ ನೀಡುವಂತೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸರ್ಕಾರದ ನಡೆಗೆ ಬಿ.ಕೆ.ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಗೋಧ್ರಾ ದುರಂತದ ರೀತಿ ಮತ್ತೊಂದು ಘಟನೆ ನಡೆಯಬಹುದು: ಬಿ.ಕೆ.ಹರಿಪ್ರಸಾದ್

ABOUT THE AUTHOR

...view details