ಕರ್ನಾಟಕ

karnataka

By

Published : Aug 5, 2023, 4:50 PM IST

Updated : Aug 6, 2023, 12:01 PM IST

ETV Bharat / state

ಜಲ ಮೂಲ ಸಂರಕ್ಷಣೆಗೆ ಸ್ವಯಂ ಸೇವಕರು, ಗ್ರಾಮೀಣ ಸಮುದಾಯದ ಪರಿಣಾಮಕಾರಿಯಾಗಿ ಬಳಕೆಗೆ ಚಿಂತನೆ: ಸಚಿವ ಎನ್.ಎಸ್. ಬೋಸರಾಜು

''ಜಲ ಮೂಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ವಯಂ ಸೇವಕರು, ಗ್ರಾಮೀಣ ಸಮುದಾಯದ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಚಿಂತನೆ ನಡೆಸಲಾಗಿದೆ'' ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ತಿಳಿಸಿದರು.

ಜಲ ಮೂಲ ಸಂರಕ್ಷಣೆಗೆ ಸ್ವಯಂ ಸೇವಕರು, ಗ್ರಾಮೀಣ ಸಮುದಾಯದ ಪರಿಣಾಮಕಾರಿಯಾಗಿ ಬಳಕೆಗೆ ಚಿಂತನೆ: ಸಚಿವ ಎನ್.ಎಸ್. ಬೋಸರಾಜು
Minister N S Bosaraju

ಬೆಂಗಳೂರು:''ಜಲ ಮೂಲಗಳಾದ ನದಿ, ಕೆರೆ ಮತ್ತು ನಾಲೆಗಳ ಸಂರಕ್ಷಣೆಗೆ ಸ್ವಯಂ ಸೇವಕರು ಹಾಗೂ ಗ್ರಾಮೀಣ ಸಮುದಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಚಿಂತನೆ ನಡೆಸಿದೆ'' ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಹೇಳಿದರು.

ವಿಕಾಸಸೌಧದಲ್ಲಿ ಶನಿವಾರ ಸಚಿವರನ್ನು ಭೇಟಿ ಮಾಡಿದ ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ ಡಾ. ಲಿಂಗರಾಜು ಯಾಲೆ ಅವರ ನೇತೃತ್ವದ ತಂಡದೊಂದಿಗೆ ರಾಜ್ಯದ ಕೆರೆಗಳ ಅಧ್ಯಯನ ಹಾಗೂ ಜಲ ಮೂಲಗಳ ಪುನರುಜ್ಜೀವನದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

ಸಭೆಯಲ್ಲಿ ರಾಜ್ಯದ ಜಲಮೂಲಗಳನ್ನ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದಂತಹ ಅಂಶಗಳ ಬಗ್ಗೆ ಹಾಗೂ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಬಗ್ಗೆ ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯ ಪ್ರಮುಖರು ಸಚಿವರಿಗೆ ಮಾಹಿತಿ ನೀಡಿದರು. ನೈಸರ್ಗಿಕ ಕ್ರಮಗಳ ಆಧಾರದ ಮೇಲೆ ಬತ್ತಿರುವ ಹಾಗೂ ಕ್ಷೀಣಿಸುತ್ತಿರುವ ಜಲಮೂಲಗಳನ್ನು ಪುನರುಜ್ಜೀವನಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ದೇಶಾದ್ಯಂತ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಕುಮದ್ವತಿ, ಸುವರ್ಣಮುಖಿ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.

ಕೆರೆಗಳು, ನಾಲೆಗಳು ಹಾಗೂ ಜಲಮೂಲಗಳ ಸಂರಕ್ಷಣೆ ಮತ್ತು ಅವುಗಳ ಒತ್ತುವರಿಯನ್ನು ತಡೆಗಟ್ಟುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಸಂರಕ್ಷಣೆ ಮತ್ತು ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಪ್ರಮುಖವಾಗಿದೆ. ಜಲಮೂಲಗಳ ಸಂರಕ್ಷಣೆಗೆ ಸ್ವಯಂ ಸೇವಕರು ಮತ್ತು ಗ್ರಾಮೀಣ ಸಮುದಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲೂ ಚಿಂತಿಸಲಾಗುತ್ತಿದೆ. ಗ್ರಾಮೀಣ ಸಮುದಾಯದ ಸ್ವಯಂ ಸೇವಕರು ತಮ್ಮ ವ್ಯಾಪ್ತಿಯಲ್ಲಿರುವ ಜಲ ಮೂಲಗಳ ಬಗ್ಗೆ ನಿಗಾವಹಿಸುವುದು ಹಾಗೂ ಯಾವುದೇ ಕೊರತೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸ ಇವರದ್ದಾಗಿರುತ್ತದೆ. ಪ್ರಾಥಮಿಕ ಹಂತದಲ್ಲಿ ಚಿಂತನೆ ನಡೆದಿದ್ದು, ಇದರ ಅನುಷ್ಠಾನದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯಿಂದ ಅಧ್ಯಯನ: ರಾಯಚೂರು ಜಿಲ್ಲೆಯ ಆತ್ತನೂರು, ಕಲ್ಲೂರ, ಹೀರಾ ಮತ್ತು ಚಿಂಚರಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದೆ. ಕೃಷ್ಣ ಮತ್ತು ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಾಗಿದ್ದರೂ ಕೆಲವು ಭಾಗದಲ್ಲಿ ನೀರಿನ ಕೊರತೆ ಇದ್ದೇ ಇದೆ. ನಾಲಾಗಳಿರುವ ಕಡೆಗಳಲ್ಲಿ ಸಮಸ್ಯೆ ಕಡಿಮೆಯಾಗಿದ್ದರೂ, ನಾಲಾಗಳ ವ್ಯಾಪ್ತಿ ಇಲ್ಲದಿರುವ ಗ್ರಾಮಗಳಲ್ಲಿ ತೊಂದರೆ ಇದ್ದೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಅಧ್ಯಯನದ ಅಗತ್ಯತೆಯಿದೆ. ರಾಯಚೂರು ಜಿಲ್ಲೆಯ ಬಹುಭಾಗಗಳಲ್ಲಿ ಈ ತೊಂದರೆ ಇದ್ದು, ಪ್ರಾಥಮಿಕ ಹಂತದಲ್ಲಿ ದ ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯಿಂದ ರಾಯಚೂರು ಜಿಲ್ಲೆಯ ಆತ್ತನೂರು, ಕಲ್ಲೂರ, ಹೀರಾ ಮತ್ತು ಚಿಂಚರಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧ್ಯಯನ ಕೈಗೊಳ್ಳಲು ಸಚಿವರು ಸೂಚನೆ ನೀಡಿದರು.

ವಾಟರ್ ನಾಲೆಡ್ಜ್ ಕೇಂದ್ರಗಳ ಸ್ಥಾಪನೆ:ಈ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಾಟರ್ ನಾಲೆಡ್ಜ್ ಕೇಂದ್ರಗಳ ಸ್ಥಾಪನೆಯ ಬಗ್ಗೆಯೂ ಚರ್ಚಿಸಲಾಯಿತು. ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಜಲ ಮೂಲಗಳ ಸಮಗ್ರ ಮಾಹಿತಿ, ಅವುಗಳ ಬಳಕೆ, ಮರುಬಳಕೆ, ಮಾಲಿನ್ಯ ನಿಯಂತ್ರಣ ಹಾಗೂ ಪೋಲಾಗುತ್ತಿರುವ ನೀರಿನ ಮಾಹಿತಿ ಸೇರಿದಂತಹ ಸಮಗ್ರ ಚಿತ್ರಣವನ್ನು ವೈಜ್ಞಾನಿಕವಾಗಿ ಅಳವಡಿಸುವ ಯೋಜನೆ ಇದಾಗಿದೆ. ಈ ಮೂಲಕ ನೀರಿನ ಸಂಪೂರ್ಣ ಮಾಹಿತಿ ಗ್ರಾಮ ಜನರಿಗೆ ನೀಡುವುದು ಹಾಗೂ ಅವರ ಪಾಲುದಾರಿಕೆಯಲ್ಲಿ ಸಂರಕ್ಷಣೆಯ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆಯೂ ಅಧ್ಯಯನ ನಡೆಸಿ ವರದಿ ನೀಡುವಂತೆ ಸಚಿವರು ತಜ್ಞರಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ರಾಹುಲ್ ಗಾಂಧಿ ಪರ ತೀರ್ಪು ಬಂದಿರುವುದು ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಂತೆ ಆಗಿದೆ: ಮಧು ಬಂಗಾರಪ್ಪ

Last Updated : Aug 6, 2023, 12:01 PM IST

ABOUT THE AUTHOR

...view details