ಬೆಂಗಳೂರು:ಹಣದ ಅಗತ್ಯವಿದೆ ಮನೆಗೆಲಸ ಮಾಡ್ತೇನೆ, ನಿಮ್ಮ ಕೈಯಲ್ಲಿ ಆದಷ್ಟು ಸಂಬಳ ಕೊಡಿ ಎಂದು ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಳು. ಬಳಿಕ ಮಸಾಜ್ ಮಾಡುವುದಾಗಿ ಹೇಳಿ ವಯೋವೃದ್ಧರನ್ನು ಗುರಿಯಾಗಿಸಿ, ಅವರ ಬಳಿಯಿದ್ದ ಚಿನ್ನಾಭರಣ ಕದಿಯುತ್ತಿದ್ದಳು. ಇದೀಗ ಈ ಮಹಿಳಾ ಆರೋಪಿಯನ್ನ ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಅಕ್ಕಿಂ ಮಣಿ ಬಂಧಿತ ಆರೋಪಿ. ಆರೋಪಿತಳಿಂದ 13 ಲಕ್ಷ ಮೌಲ್ಯದ 271 ಗ್ರಾಂ ಚಿನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಆಗರ ಬಳಿಯ ಸೋಮಸುಂದರಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈಕೆ, ಮನೆ ಗೆಲಸ ಮಾಡುವ ಸೋಗಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಳು. ಮನೆಗೆಲಸ ಮಾಡುವ ಸಲುವಾಗಿ ಸೂಕ್ತ ಮನೆಗಳಿಗಾಗಿ ಶೋಧ ನಡೆಸುತ್ತಿದ್ದ ಇವರು, ವಯೋವೃದ್ಧರನ್ನೇ ಟಾರ್ಗೇಟ್ ಮಾಡುತ್ತಿದ್ದರು.
ಮಹಿಳೆಯ ಮಾತನ್ನ ನಂಬಿ ಮಾಲೀಕರು ಕೆಲಸ ಕೊಡುತ್ತಿದ್ದರು. ಒಂದು ದಿನದ ಮಟ್ಟಿಗೆ ಕೆಲಸ ಮಾಡಿ ಬಳಿಕ ಎಲ್ಲವನ್ನ ಗಮನಿಸಿಕೊಂಡು, ವೃದ್ಧರಿಗೆ ಮಸಾಜ್ ಮಾಡಿ ಒಡವೆಯನ್ನೆಲ್ಲಾ ಬಿಚ್ಚಿಸಿ ಇಡಿಸುತ್ತಿದ್ದಳು. ಅವರಿಗೆ ಸ್ನಾನಕ್ಕೆ ಹೋಗುವಂತೆ ಹೇಳಿ, ಎಲ್ಲವನ್ನು ಕದ್ದು ಎಸ್ಕೇಪ್ ಆಗುತ್ತಿದ್ದಳು. ಇತ್ತೀಚೆಗೆ ಮಾರತ್ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎರಡು ಸರ್ವೆಂಟ್ ಥೆಫ್ಟ್ ಪ್ರಕರಣ ವರದಿಯಾಗಿತ್ತು.
ಮನೆಗೆಲಸ ಮಾಡುವ ಸೋಗಿನಲ್ಲಿ ಕಳ್ಳತನ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಎಸ್.ಎಲ್.ಆರ್ ರೆಡ್ಡಿ ಹಾಗೂ ಸಬ್ ಇನ್ಸ್ ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ, ಮನೆಗಳ್ಳಿಯನ್ನು ಬಂಧಿಸಿದ್ದಾರೆ. ಮನೆಗಳ್ಳಿ ವಿರುದ್ಧ ಮಾರತ್ ಹಳ್ಳಿ, ಕೆ.ಆರ್.ಪುರಂ ಹಾಗೂ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿವೆ. ಕದ್ದ ಚಿನ್ನಾಭರಣ ಮಣಿಪುರಂ ಗೋಲ್ಡ್ ಶಾಪ್ನಲ್ಲಿ ಅಡ ಇಟ್ಟು ಹಣ ಪಡೆದು ಖರ್ಚು ಮಾಡುತ್ತಿದ್ದಳು. ಸದ್ಯ ಒಟ್ಟು 271 ಗ್ರಾಂ ಗೋಲ್ಡ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ನಡು ರಸ್ತೆಯಲ್ಲೇ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಕೊಲೆ