ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆ.ಆರ್. ಮಾರುಕಟ್ಟೆ ವ್ಯಾಪ್ತಿಯ ಪೌರಕಾರ್ಮಿಕರು ಇಂದು ಮೇಯರ್ ಕಚೇರಿ ಮುಂದೆ ಜಮಾಯಿಸಿದ್ದರು. ಸಹೋದ್ಯೋಗಿಗಳಿಂದ ಉಂಟಾಗುತ್ತಿರುವ ಕಿರುಕುಳವನ್ನ ತಪ್ಪಿಸಬೇಕು ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ 4 ಜನ ಪೌರ ಕಾರ್ಮಿಕರು ದಿನ ನಿತ್ಯವೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ದೂರಿದರು.
ಈ ಬಗ್ಗೆ ಆಪಾದಿತರನ್ನು ಬೇರೆಡೆಗೆ ವರ್ಗಾವಣೆ ಮಾಡುವುದಾಗಿ ಆಯುಕ್ತ ಮಂಜುನಾಥ್ ಭರವಸೆ ನೀಡಿದ ನಂತರ ಅವರೆಲ್ಲರೂ ಬಿಬಿಎಂಪಿ ಕಚೇರಿಯಿಂದ ಹೊರ ನಡೆದರು. ಕೆ.ಆರ್. ಮಾರುಕಟ್ಟೆ ವಾರ್ಡ್ ಕಾಂಪ್ಲೆಕ್ಸ್ ಮಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ನಾಲ್ಕು ಜನ ಪೌರಕಾರ್ಮಿಕರನ್ನು ಕೂಡಲೇ ಅದೇ ವಾರ್ಡ್ನಲ್ಲಿರುವ ಕರೀಕಲ್ಲು ಆಂಜನೇಯಸ್ವಾಮಿ ದೇವಸ್ಥಾನದ ಮಸ್ಟ್ಗೆ ವಾರ್ಗಾಯಿಸುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶಿಸಿದ್ದಾರೆ.
ಈ ಹಿಂದೆ ವರ್ಗಾವಣೆಯಾಗಿದ್ದರೂ ಬೇರೆ ಸ್ಥಳಕ್ಕೆ ಹೋಗದೇ ಅದೇ ಸ್ಥಳದಲ್ಲಿದ್ದು ಇತರ ಪೌರಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದರಿಂದ ಕರ್ನಾಕಟ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ವತಿಯಿಂದ 120 ಪೌರಕಾರ್ಮಿಕರು ವರ್ಗಾವಣೆ ಕೋರಿ ಮನವಿ ಪತ್ರ ಸಲ್ಲಿಸಿದರು. ಜೊತೆಗೆ 60 ವರ್ಷ ಪೂರೈಸಿದ ಸುಬ್ರಮಣಿ ಎಂಬುವವರನ್ನು ಕೆಲಸದಿಂದ ತೆಗೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.