ಬೆಂಗಳೂರು: ಐಎಂಎ ಜ್ಯುವೆಲರ್ಸ್ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಒಟ್ಟು 14 ಸಾವಿರ ದೂರುಗಳು ದಾಖಲಾಗಿವೆ. ಇದೇ ರೀತಿ ದೂರು ನೀಡುವವರ ಸಂಖ್ಯೆ ಮುಂದುವರೆದರೆ 20 ಸಾವಿರಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ.
ನಿನ್ನೆಯವರೆಗೂ ಒಟ್ಟು 11ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ಇವತ್ತೂ ಕೂಡ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಗ್ರಾಹಕರು ದೂರು ನೀಡಲು ಬರುತ್ತಿದ್ದು, ಸಂಜೆಯ ವೇಳೆಗೆ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯಿದೆ. ದೂರು ಸಲ್ಲಿಸಲು ಶಿವಾಜಿನಗರದ ಎ.ಎಸ್ ಕನ್ವೆನ್ಷನ್ ಹಾಲ್ನಲ್ಲಿ ವ್ಯವಸ್ಥೆ ಮಾಡಲಾಗಿದ್ದು ನಾಲ್ಕು ಕೌಂಟರ್ ಗಳಲ್ಲಿ ಪೊಲೀಸರು ದೂರು ಸ್ವೀಕರಿಸುವ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.
ಐಎಂಎ ದೋಖಾ ಪ್ರಕರಣ ದೂರುಗಳ ಸಂಖ್ಯೆ ಏರಿಕೆ ಸಾಧ್ಯತೆ ಇನ್ನು, ಐಎಂಎ ಗ್ರೂಪ್ ಆಫ್ ಕಂಪನೀಸ್ ಮುಖ್ಯಸ್ಥ ಮನ್ಸೂರ್ ಖಾನ್ ದತ್ತು ಪಡೆದಿದ್ದ ಶಾಲೆಯ ಶಿಕ್ಷಕರಿಗೆ ವೇತನ ನೀಡಿಲ್ಲವಂತೆ ಹೀಗಾಗಿ ಅವರು ಪಾಠ ಮಾಡಲ್ಲ ಎನ್ನುತ್ತಿದ್ದಾರೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕಿದಂತಾಗಿದೆ. ಶಿವಾಜಿ ಸರ್ಕಲ್ ಬಳಿ ಇರುವ ಗೌರ್ನಮೆಂಟ್ ವಿ.ಕೆ.ಓ ಪಬ್ಲಿಕ್ ಸ್ಕೂಲ್ ಹಾಗೂ ಕಾಲೇಜು ಸ್ಥಿತಿ ಅತಂತ್ರವಾಗಿದ್ದು, ಪ್ರಿ-ನರ್ಸರಿಯಿಂದ ಕಾಲೇಜುವರೆಗೂ ವ್ಯಾಸಂಗ ಮಾಡುತ್ತಿರುವ ಸುಮಾರು 1,600 ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ಇಂದಿನಿಂದ ಎರಡು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಲಾಗಿದ್ದು, ವಿದ್ಯಾರ್ಥಿಗಳ ಪೋಷಕರು ಶಾಲೆಗೆ ದೌಡಾಯಿಸಿ ವಿವರಣೆ ಪಡೆಯುತ್ತಿದ್ದಾರೆ. ಕೆಲವರು ಟಿಸಿ ಸಹ ಕೇಳಲಾರಂಭಿಸಿದ್ದಾರೆ. ಶಾಲೆಯಲ್ಲಿ ಮೂವರು ಸರ್ಕಾರಿ ಶಿಕ್ಷಕರು ಸೇರಿದಂತೆ ಒಟ್ಟು 79 ಶಿಕ್ಷಕರಿದ್ದು, ಐಎಂಎ ನಿಯೋಜಿತ 76 ಜನ ಶಿಕ್ಷಕರು ಪಾಠ ಮಾಡುವುದಿಲ್ಲ ಎಂದು ಪ್ರತಿಭಟನೆಗಿಳಿದಿದ್ದಾರೆ. ಪ್ರತಿ ತಿಂಗಳು ಶಾಲಾ ನಿರ್ವಹಣೆ & ಶಿಕ್ಷಕರ ಸಂಬಳವಾಗಿ ಐಎಂಎ ಕಂಪನಿಯಿಂದ ಒಟ್ಟು 32 ಲಕ್ಷ ರೂಪಾಯಿ ಪಾವತಿಸಲಾಗುತ್ತಿತ್ತು. ಆದರೆ ಈಗ ವಂಚನೆ ಪ್ರಕರಣ ಹೊರಬರುತ್ತಿದ್ದಂತೆ ಶಾಲೆಯ ನಿರ್ವಹಣೆ ಬಗ್ಗೆಯೂ ಗೊಂದಲ ಶುರುವಾಗಿದೆ.