ಬೆಂಗಳೂರು: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದ್ದು ಗೊಂದಲ ಮೂಡಿಸುವ ಪ್ರಯತ್ನ ಮಾತ್ರ. ದೇಶದಲ್ಲಿ ಎನ್ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು ರಾಜ್ಯದಲ್ಲಿಯೂ ನಿಶ್ಚಿತವಾಗಿ 22 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವೈದ್ಯಕೀಯ ತಪಾಸಣೆಗೊಳಗಾಗಿ ಒಂದು ದಿನದ ವಿಶ್ರಾಂತಿ ಪಡೆದು ಯಡಿಯೂರಪ್ಪ ಡಾಲರ್ಸ್ ಕಾಲೋನಿ ನಿವಾಸಕ್ಕೆ ಹಿಂದಿರುಗಿದರು. ಈ ವೇಳೆ ಮಾತನಾಡಿದ ಅವರು, ಸೋಲಿನ ಭಯದಿಂದ ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳು ಇವಿಎಂ ಬಗ್ಗೆ ಆರೋಪ ಮಾಡುತ್ತಿವೆ. ಇತ್ತೀಚೆಗಿನ ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ಗಢ ಚುನಾವಣೆಗಳಲ್ಲಿ ಯಾಕೆ ಇವಿಎಂ ಬಗ್ಗೆ ಆರೋಪ ಮಾಡಲಿಲ್ಲ? ಒಂದು ವೇಳೆ ಇವಿಎಂಗಳಲ್ಲಿ ತೊಂದರೆ ಇದ್ದರೆ ಕಾಂಗ್ರೆಸ್ನವರು ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆಯೋಗ ಹತ್ತಾರು ಬಾರಿ ಪರಿಶೀಲಿಸಿ ದೋಷ ಇಲ್ಲ ಅಂದಿದೆ ಫಲಿತಾಂಶ ಬರೋವರೆಗೂ ಶಾಂತವಾಗಿ ಕಾಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.