ಕರ್ನಾಟಕ

karnataka

ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆ.. ಪ್ರತಿ ಚುನಾವಣೆಯಲ್ಲೂ ಹೆಚ್ಚುತ್ತಲೇ ಇದೆ ಕುರುಡು ಕಾಂಚಾಣದ ಕುಣಿತ

By

Published : Apr 15, 2023, 12:37 PM IST

Updated : Apr 15, 2023, 7:24 PM IST

ರಾಜ್ಯದಲ್ಲಿ ಮಾದರಿ ನೀತಿ‌ ಸಂಹಿತೆ.. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಐಟಿ ಅಧಿಕಾರಿಗಳು, ಇಡಿ, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಫೀಲ್ಡಿಗೆ ಇಳಿದಿದ್ದು ಅಕ್ರಮಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡುತ್ತಿದ್ದಾರೆ.

representative image
ಪ್ರಾತಿನಿಧಿಕ ಚಿತ್ರ

ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಕಠಿಣ ನೀತಿ ಸಂಹಿತೆಯಡಿ ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ನೀತಿ ಸಂಹಿತೆ ನಿಯಮದ ಮೂಲಕ ಕುರುಡು ಕಾಂಚಾಣದ ಕುಣಿತಕ್ಕೆ ಅಂಕುಶ ಹಾಕಲು ಚು.ಆಯೋಗ ಅಖಾಡಕ್ಕೆ ಇಳಿದಿದೆ. ಆ ಮೂಲಕ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡಿದೆ.

ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅಖಾಡದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಇತ್ತ ರಾಜಕೀಯ ಪಕ್ಷಗಳು ಮತದಾರರ ಮನವೊಲಿಸಲು ನಾನಾ ಕಸರತ್ತು ಆರಂಭಿಸಿವೆ. ಮತದರಾರಿಗೆ ಆಮಿಷಗಳನ್ನು ಒಡ್ಡಲು ರಾಜಕೀಯ ಪಕ್ಷಗಳು ಆರಂಭಿಸಿವೆ. ಆದರೆ, ನೀತಿ ಸಂಹಿತೆ ಮೂಲಕ ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ರಾಜಕೀಯ ಪಕ್ಷಗಳ ಅಕ್ರಮಗಳಿಗೆ ನಿಯಂತ್ರಣ ಹಾಕಲು ಎಲ್ಲ ರೀತಿಯ ಕ್ರಮ‌ ಕೈಗೊಳ್ಳುತ್ತಿದೆ. ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ವಿರುದ್ಧ ಕಟ್ಟು ನಿಟ್ಟಿನ ಕ್ರಮ‌ ಜರುಗಿಸುತ್ತಿದೆ. ಈಗಾಗಲೇ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಐಟಿ ಅಧಿಕಾರಿಗಳು, ಇಡಿ, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಫೀಲ್ಡಿಗೆ ಇಳಿದಿದ್ದು, ಅಕ್ರಮಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡುತ್ತಿದೆ.

ಏನಿದು ಚುನಾವಣಾ ನೀತಿ ಸಂಹಿತೆ?:ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಮುಕ್ತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಅನುಸರಿಸುವ ಕಾನೂನು ಕ್ರಮವೇ ನೀತಿ ಸಂಹಿತೆ. ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಮತದಾನ ಮುಗಿಯುವವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಎಲ್ಲ ರಾಜಕೀಯ ಪಕ್ಷಗಳು, ಸರ್ಕಾರ, ಅಭ್ಯರ್ಥಿಗಳು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಪಾಲಿಸಬೇಕು.

ಯಾರಿಗೆ ಅನ್ವಯ?: ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ-ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು ಸೇರಿದಂತೆ ಸರ್ಕಾರದಿಂದ ಹಣಕಾಸಿನ ನೆರವು ಪಡೆಯವ ಪ್ರತಿಯೊಂದು ಸಂಸ್ಥೆ ಅಥವಾ ಕಚೇರಿಗಳು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರ ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಮಾಡುವಂತಿಲ್ಲ. ಉದ್ಘಾಟನೆ, ಅಡಿಗಲ್ಲು, ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಹೊಸ ಟೆಂಡರ್‌ ಕರೆಯುವಂತಿಲ್ಲ. ಅಭ್ಯರ್ಥಿಗಳು ಮತದಾರರಿಗೆ ನಗದು, ಮದ್ಯ, ವಸ್ತುಗಳು, ಯಾವುದೇ ಉಡುಗೊರೆ, ಆಮಿಷಗಳನ್ನು ಒಡ್ಡುವಂತಿಲ್ಲ.

ನೀತಿ ಸಂಹಿತೆ ಜಾರಿಯಾದ ಬಳಿಕ ಸಚಿವರು ಮತ್ತು ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ. ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹಗಳನ್ನು ಬಳಸುವಂತಿಲ್ಲ. ಸಚಿವರು ತಮಗೆ ಹಂಚಿಕೆಯಾಗಿರುವ ಅಧಿಕೃತ ಸರ್ಕಾರಿ ನಿವಾಸದಿಂದ ಕಚೇರಿಗೆ ಬರಲು ಮಾತ್ರ ಸರ್ಕಾರಿ ವಾಹನ ಬಳಸಬಹುದು. ಸಚಿವರು ಬೆಂಗಳೂರು ಬಿಟ್ಟು ಹೊರಗಡೆ ಅಧಿಕೃತ ಭೇಟಿಗೆ ತೆರಳಬೇಕಾದರೆ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ಚುನಾವಣಾ ಪ್ರಚಾರ ಸಭೆ - ಸಮಾರಂಭ, ರ‍್ಯಾಲಿಗಳಿಗೆ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ಪೊಲೀಸ್‌ ಠಾಣೆಯ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚಕ್ಕಾಗಿ ಪ್ರತ್ಯೇಕ ಖಾತೆ ತೆರೆಯಬೇಕು. ಗರಿಷ್ಠ 40 ಲಕ್ಷ ರೂ. ಚುನಾವಣಾ ವೆಚ್ಚದ ಮಿತಿ ವಿಧಿಸಲಾಗುತ್ತದೆ.

ಕಳೆದ ಬಾರಿ ಜಪ್ತಿ ಮಾಡಲಾಗದ ನಗದು, ಮದ್ಯ, ವಸ್ತು

ಕಳೆದ ಬಾರಿ ಜಪ್ತಿ ಮಾಡಲಾಗದ ನಗದು, ಮದ್ಯ, ವಸ್ತು: ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ಒಟ್ಟು 94 ಕೋಟಿ ನಗದು ಜಪ್ತಿ ಮಾಡಲಾಗಿತ್ತು. ಜೊತೆಗೆ 24.78 ಕೋಟಿ ಮೌಲ್ಯದ ಮದ್ಯ, ಇನ್ನುಳಿದಂತೆ ಸೀರೆ, ವಾಹನ ಸೇರಿ ಒಟ್ಟು 66 ಕೋಟಿ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಒಟ್ಟಾರೆ ಈ ಚುನಾವಣೆ ಸಂದರ್ಭದಲ್ಲಿ ಸುಮಾರು 185.74 ಕೋಟಿ ರೂ. ಮೊತ್ತದ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಚುನಾವಣಾ ಆಯೋಗ ಜಪ್ತಿ ಮಾಡಿತ್ತು.

2013ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2018ರ ಚುನಾವಣೆ ವೇಳೆ 8 ಪಟ್ಟು ಹೆಚ್ಚಿನ ಪ್ರಮಾಣದ ಅಕ್ರಮ ನಗದು, ಮದ್ಯ,ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಐಟಿ ಇಲಾಖೆ 2018ರ ಚುನಾವಣೆಯಲ್ಲಿ ಸುಮಾರು 31.5 ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿತ್ತು. ಅದೇ 2013ರ ಚುನಾವಣೆ ವೇಳೆ 5 ಕೋಟಿ ರೂ. ನಗದನ್ನು ಐಟಿ ಇಲಾಖೆ ಜಪ್ತಿ ಮಾಡಿತ್ತು. 5.8 ಮೌಲ್ಯದ ಚಿನ್ನಾಭರಣಗಳನ್ನು ಐಟಿ ಇಲಾಖೆ ಜಪ್ತಿ ಮಾಡಿತ್ತು.

ಈ ಬಾರಿ ಕುರುಡು ಕಾಂಚಾಣ 5 ಪಟ್ಟು ಹೆಚ್ಚು:ಈ ಬಾರಿಯ ಚುನಾವಣೆಯಲ್ಲಿ ಕುರುಡು ಕಾಂಚಾಣದ ಕುಣಿತ ಸುಮಾರು 5 ಪಟ್ಟು ಹೆಚ್ಚಾಗಿದೆ‌. ಕಳೆದ ಬಾರಿಗೆ ಹೋಲಿಸಿದರೆ ಕಳೆದ 12 ದಿ‌ನಗಳಲ್ಲಿ ರಾಜ್ಯದಲ್ಲಿ ಜಪ್ತಿ ಮಾಡಲಾದ ನಗದು, ಮದ್ಯ, ವಸ್ತುಗಳ ಮೌಲ್ಯ ಐದು ಪಟ್ಟು ಹೆಚ್ಚಿದೆ‌‌. ಹಾಗಾಗಿ ಈ ಬಾರಿ ಮತದಾರರನ್ನು ಓಲೈಸಲು ಎಗ್ಗಿಲ್ಲದೆ ರಾಜಕೀಯ ಪಕ್ಷಗಳು ಕಳ್ಳ ದಾರಿ ಹಿಡಿದಿರುವುದು ಸ್ಪಷ್ಟವಾಗುತ್ತಿದೆ. ಚುನಾವಣಾ ಆಯೋಗ ನೀಡಿದ ಅಂಕಿ-ಅಂಶದ ಪ್ರಕಾದ ಚುನಾವಣೆ ಘೋಷಣೆಯಾದ ಮೊದಲ 2 ವಾರದಲ್ಲೇ ಚುನಾವಣೆ ಆಯೋಗ ಬರೋಬ್ಬರಿ 108 ಕೋಟಿ ಹಣವನ್ನು ಜಪ್ತಿ ‌ಮಾಡಿತ್ತು. ಕಳೆದ ಚುನಾವಣೆಯ ಇದೇ ಅವಧಿಯಲ್ಲಿ 20.12 ಕೋಟಿ ಮೌಲ್ಯದ ನಗದು, ಮದ್ಯ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.

2018ರಲ್ಲಿ ಚುನಾವಣಾ ಆಯೋಗ 14 ದಿ‌ಗಳಲ್ಲಿ 4.83 ಕೋಟಿ ರೂ.‌ನಗದು ವಶ ಪಡಿಸಿಕೊಂಡಿತ್ತು. ಈ ಬಾರಿ 14 ದಿನಗಳಲ್ಲಿ 37.24 ಕೋಟಿ ರೂ‌.‌ನಗದು ಜಪ್ತಿ ಮಾಡಿದೆ. ಕಳೆದ ಬಾರಿ ಎರಡು ವಾರದಲ್ಲಿ 12,725 ಲೀಟರ್ ಮದ್ಯ ವಶಪಡಿಸಿಕೊಂಡಿದ್ದರೆ, ಈ ಬಾರಿ 5,23,988 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಕಳೆದ ಬಾರಿ ಎರಡು ವಾರದಲ್ಲಿ ಸುಮಾರು 30 ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡಿದ್ದರೆ, ಈ ಬಾರಿ ಎರಡು ವಾರಗಳಲ್ಲಿ 397 ಕೆ.ಜಿ. ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಕಳೆದ ಬಾರಿ 10 ಕೆ.ಜಿ ಚಿನ್ನ ವಶಕ್ಕೆ ಪಡೆದಿದ್ದರೆ, ಈ ಬಾರಿ ಎರಡು ವಾರದಲ್ಲಿ ಬರೋಬ್ಬರಿ 34.36 ಕೆ.ಜಿ. ಚಿನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:₹100 ಕೋಟಿ ಗಡಿ ದಾಟಿದ ಅಕ್ರಮ ನಗದು, ಮದ್ಯ, ವಸ್ತುಗಳ ಜಪ್ತಿ ಮೌಲ್ಯ

150 ಕೋಟಿ ಮೌಲ್ಯದ ವಸ್ತು ವಶ: ಮಾರ್ಚ್ 29 ರಂದು ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಆ ದಿನದಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಸುಮಾರು 150 ಕೋಟಿ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಒಟ್ಟು 149.58 ಕೋಟಿ ರೂ. ವಶಪಡಿಸಿಕೊಂಡಿದ್ದು, ಅದರಲ್ಲಿ 61 ಕೋಟಿ ರೂ. ನಗದು, 33 ಕೋಟಿ ರೂ. ಮೌಲ್ಯದ ಮದ್ಯ, 24 ಕೋಟಿ ರೂ. ಬೆಲೆಬಾಳುವ ಲೋಹಗಳು, 18 ಕೋಟಿ ರೂ. ಮೌಲ್ಯದ ಗಿಫ್ಟ್​, 13 ಕೋಟಿ ರೂ. ಬೆಲೆ ಬಾಳುವ ವಿವಿಧ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಆಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 1,262 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇನ್ನು ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನ (ಅಂದರೆ ಮಾರ್ಚ್ 9 ರಿಂದ ಮಾರ್ಚ್ 27ರ ಅವಧಿಯ ನಡುವೆ) ಒಟ್ಟು 58 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು.

Last Updated : Apr 15, 2023, 7:24 PM IST

ABOUT THE AUTHOR

...view details