ಕರ್ನಾಟಕ

karnataka

ETV Bharat / state

ಮೋದಿ ಸಂಪುಟದಿಂದ ಸದಾನಂದ ಗೌಡರಿಗೆ ಕೊಕ್​​: ಮಂತ್ರಿಗಿರಿಗೆ ಮುಳುವಾಗಿದ್ದೇನು?

ರಾಜ್ಯದ ನಾಲ್ವರು ಸದಸ್ಯರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದರೆ ಇತ್ತ ಸದಾನಂದ ಗೌಡರಿಗೆ ಮಂತ್ರಿಗಿರಿ ಕೈತಪ್ಪಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭದ ಸುಳಿವು ಸಿಕ್ಕಿದ್ದು, ಸದಾನಂದಗೌಡರಿಂದ ರಾಜ್ಯ ರಾಜಕಾರಣ ಚಿತ್ರಣ ಬದಲಾದರೂ ಅಚ್ಚರಿಪಡಬೇಕಿಲ್ಲ.

By

Published : Jul 7, 2021, 7:52 PM IST

Updated : Jul 8, 2021, 12:02 PM IST

minister-sadananda-gowda-resign-ahead-of-expansion
ಸಂಪುಟದಿಂದ ಸದಾನಂದಗೌಡರಿಗೆ ಕೋಕ್

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಡಿ.ವಿ ಸದಾನಂದಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಕೊಕ್ ನೀಡಲಾಗಿದೆ. ಮೋದಿ 1.O ಸರ್ಕಾರದಲ್ಲಿ ರತ್ನಗಂಬಳಿ ಹಾಸಿ ಡಿವಿಎಸ್‌ರನ್ನು 2.O ಸರ್ಕಾರದಲ್ಲಿ ಕೈಬಿಟ್ಟಿರುವುದು ಹಲವು ಅನುಮಾನಗಳು ಹುಟ್ಟುವಂತೆ ಮಾಡಿದೆ.

ಯಡಿಯೂರಪ್ಪ ಅವರ ನಂತರದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಅಲ್ಪ ಸಮಯದಲ್ಲೇ ಹುದ್ದೆ ಕಳೆದುಕೊಂಡಿದ್ದ ಡಿ.ವಿ ಸದಾನಂದಗೌಡರಿಗೆ ಹೈಕಮಾಂಡ್ ಅನುಕಂಪ ತೋರಿತ್ತು. ಕೇಂದ್ರದಲ್ಲಿ ಎನ್​​​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆ ಸದಾನಂದಗೌಡರಿಗೆ ಕ್ಯಾಬಿನೆಟ್‌ ದರ್ಜೆಯ ರೈಲ್ವೆ ಖಾತೆ ನೀಡಲಾಗಿತ್ತು.

ನಂತರ ರೈಲ್ವೆ ಖಾತೆ ವಾಪಸ್ ಪಡೆದು ಯೋಜನೆ ಮತ್ತು ಸಾಂಖಿಕ ಖಾತೆ ನೀಡಲಾಗಿತ್ತು. ಆದರೂ ಗೌಡರ ಮೇಲಿನ ವಿಶ್ವಾಸ ಕಡಿಮೆಯಾಗಿರಲಿಲ್ಲ. ಅದರ ಪ್ರತಿಫಲ ಮೋದಿ ನೇತೃತ್ವದಲ್ಲಿ 2ನೇ ಬಾರಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರದಲ್ಲಿಯೂ ಅವಕಾಶ ಸಿಕ್ಕಿತ್ತು.

ಕೇಂದ್ರದಲ್ಲಿ ರಾಜ್ಯದ ಪರ ಪ್ರಭಾವಿ ಸಚಿವರಾಗಿದ್ದ ಅನಂತ ಕುಮಾರ್ ನಿಧನದ ನಂತರ ಅವರು ನಿರ್ವಹಿಸುತ್ತಿದ್ದ ಮಹತ್ವದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನೀಡಲಾಯಿತು. ಕೋವಿಡ್ ಸಾಂಕ್ರಾಮಿಕದ ವೇಳೆ ಇಡೀ ದೇಶಕ್ಕೆ ಔಷಧ ಸರಬರಾಜು ಮಾಡುವ ಬಹುದೊಡ್ಡ ಹೊಣೆಗಾರಿಕೆ ನಿಭಾಯಿಸುವ ಜವಾಬ್ದಾರಿ ನಿರ್ವಹಿಸಬೇಕಾಯಿತು.

ಕೋವಿಡ್ ವೇಳೆ ಪರಿಣಾಮಕಾರಿಯಾಗಿ ಅವರು ಕೆಲಸ ಮಾಡಿದ್ದಾರೆ. ಆದರೂ ಡಿವಿಎಸ್​​ಗೆ ಕೊಕ್ ನೀಡಲಾಗಿದೆ. ಕೇಂದ್ರದಿಂದ ಅನುಕಂಪ ಮತ್ತು ವಿಶ್ವಾಸ ಎರಡನ್ನೂ ಹೊಂದಿದ್ದ ಗೌಡರನ್ನು ಸಂಪುಟದಿಂದ ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನ್ಯಾಯಾಲಯದಿಂದ ತಡೆ ತಂದಿದ್ದೇ ಮುಳುವಾಯ್ತಾ?

ತಮ್ಮ ವಿರುದ್ಧ ಮಾನಹಾನಿಕರ ವರದಿಗಳನ್ನು ಬಿತ್ತರಿಸದಂತೆ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಿಂದ ಡಿವಿಎಸ್​ ತಡೆಯಾಜ್ಞೆ ತಂದಿದ್ದರು. ಈ ಕಾರಣಕ್ಕೆ ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಡಬಹುದು ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬಂದಿತ್ತು.

ರಾಸಾಯನಿಕ ಮತ್ತು ರಸಗೊಬ್ಬರದಂತಹ ಮಹತ್ವದ ಖಾತೆಯನ್ನು ಸದಾನಂದಗೌಡರು ನಿರ್ವಹಿಸಿದ ರೀತಿ ಬಿಜೆಪಿ ವರಿಷ್ಠರಿಗೆ ಸಮಾಧಾನ ತಂದಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ರಾಜ್ಯ ರಾಜಕೀಯದ ವದಂತಿ:

ಸದಾನಂದಗೌಡರಿಂದ ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ರಾಜ್ಯದಲ್ಲಿ ಹೊಸ ಸುದ್ದಿ ಹರಿದಾಡುತ್ತಿದೆ. ರಾಜ್ಯ ರಾಜಕಾರಣದತ್ತ ಆಸಕ್ತಿ ವಹಿಸಿ ಎಂದು ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆದಲ್ಲಿ ಆಗ ಮತ್ತೆ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ ಎಂಬ ಗುಸು ಗುಸು ಆರಂಭವಾಗಿದೆ.

Last Updated : Jul 8, 2021, 12:02 PM IST

ABOUT THE AUTHOR

...view details