ಕರ್ನಾಟಕ

karnataka

ETV Bharat / state

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 4030 ಕೋಟಿ ರೂ. ಅನುದಾನ ಹೆಚ್ಚಳ: ಬಿಜೆಪಿಯವರ ಆರೋಪ ಸುಳ್ಳೆಂದ ಸಚಿವ ಹೆಚ್ ಸಿ ಮಹದೇವಪ್ಪ

ಎಸ್​ಸಿಎಸ್​ಪಿ/ಟಿಎಸ್​ಪಿ ಅಧಿನಿಯಮ ಸೆಕ್ಷನ್ 7(ಡಿ) ರದ್ದು ಮಾಡಿದ್ದೇವೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು.

By

Published : Jul 31, 2023, 8:29 PM IST

ಸಚಿವ ಹೆಚ್.ಸಿ ಮಹದೇವಪ್ಪ
ಸಚಿವ ಹೆಚ್.ಸಿ ಮಹದೇವಪ್ಪ

ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ

ಬೆಂಗಳೂರು : ಎಸ್​ಸಿಎಸ್​ಪಿ/ಟಿಎಸ್​ಪಿ ಅಧಿನಿಯಮ, 2013ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳ ಒಳಿತಿಗಾಗೇ ಬಳಕೆಯಾಗಬೇಕೆಂಬುದು ಬಹಳ ವರ್ಷಗಳ ಬೇಡಿಕೆ. ಕಾಯ್ದೆಯಲ್ಲಿನ ಸಣ್ಣ ಲೋಪವನ್ನು ಬಳಸಿಕೊಂಡು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಇದೀಗ ಕಾಯ್ದೆ ಸೆಕ್ಷನ್ 7(ಡಿ) ಕೈಬಿಡುವ ಮೂಲಕ ಅನುದಾನವನ್ನು ಆ ಸಮುದಾಯಗಳಿಗೆ ಖರ್ಚು ಮಾಡಬೇಕೆಂಬ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಅನುಸೂಚಿತ ಜಾತಿ/ ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆ ನಡೆಯಿತು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, 2023-24ನೇ ಸಾಲಿನ ಎಸ್​ಸಿಎಸ್​ಪಿ/ಟಿಎಸ್​ಪಿ ಅಡಿ 34,293.69 ಕೋಟಿ ರೂ. ಗಳ ಕ್ರಿಯಾ ಯೋಜನೆ ಅನುಮೋದನೆ ನೀಡಲಾಗಿದೆ. ಯೋಜನಾ ವೆಚ್ಚಕ್ಕೆ ಅನುಗುಣವಾಗಿ ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಅ‌ನುದಾನ ಮೀಸಲಿಡಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಎಸ್‌ಸಿಎಸ್‌ಪಿ/ಟಿಎಸ್‌ಪಿ ವಿಶೇಷ ಉಪಯೋಜನೆಯಡಿ ಅನುದಾನ ದುರ್ಬಳಕೆ ಆಗುತ್ತಿತ್ತು. ಬೇರೆ ಬೇರೆ ವಲಯಗಳಿಗೂ ಈ ಅನುದಾನ ಬಳಸಲಾಗಿತ್ತು.

ಇದೀಗ ಬಜೆಟ್‌ನಲ್ಲಿ ಈ ಯೋಜನೆಗಳಡಿ ಬೇರೆ ವಲಯಗಳಿಗೆ ಅನುದಾನ ಬಳಸಿಕೊಳ್ಳುವುದಕ್ಕೆ‌ ನಿರ್ಬಂಧ ಹಾಕಲಾಗಿದೆ. ಇದಕ್ಕಾಗಿ ಈ ಯೋಜನೆಯಲ್ಲಿ ಬರುವ 7ಡಿ ನಿಯಮ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕಾಯ್ದೆ ಜಾರಿಗೆ ತರುವ ಹಿಂದೆ ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳ ಮತ್ತು ಕಾಯ್ದೆಯ ಆಶಯ, ಉದ್ದೇಶಕ್ಕೆ ಧಕ್ಕೆ ಆಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮದಂತೆ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಾಗಿ ಖರ್ಚು ಮಾಡಬೇಕಾದ ಶೇ.24.1 ಅನುದಾನದ ಕುರಿತ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ನಲ್ಲಿ 34,294 ಕೋಟಿ ರೂ. ಏರಿಕೆ ಮಾಡಿದ್ದರು. ಈ ಬಾರಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 4030 ಕೋಟಿ ರೂ ಅನುದಾನ ಹೆಚ್ಚಳ ಆಗಿದೆ. ಎಸ್​ಸಿ ಯೋಜನೆಗೆ 24,333 ಕೋಟಿ ರೂ., ಟಿಎಸ್​ಪಿ ಅಡಿ ಯೋಜನೆಗೆ 9,961 ಕೋಟಿ ರೂ. ಈ ವರ್ಷ ನಿಗದಿ ಮಾಡಲಾಗಿದೆ ಎಂದರು.

2013 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 2014-15 ರಲ್ಲಿ ನಡೆದ ಬಜೆಟ್​ನಲ್ಲಿ ಯೋಜನಾ ಗಾತ್ರಕ್ಕೆ ಅನುಗುಣವಾಗಿ ಈ ಸಮುದಾಯದ ಜನರಿಗೆ ಹಣ ಮೀಸಲಿಡಲಾಗಿತ್ತು. ಮೀಸಲಿಟ್ಟ ಹಣ ಬೇರೆ ಉದ್ದೇಶಕ್ಕೆ ಬಳಸಬಾರದು ಅಂತ ಕಾಯ್ದೆ ತರುವುದರ ಜೊತೆ ಐತಿಹಾಸಕ ತೀರ್ಮಾನ ಇದಾಗಿತ್ತು. 8 ಸಾವಿರ ಕೋಟಿ ರೂ. ಸಮುದಾಯಕ ಕಾರ್ಯಕ್ರಮಕ್ಕೆ ಖರ್ಚು ಮಾಡಲಾಗುತ್ತಿತ್ತು. ಹಿಂದಿನ ಸರ್ಕಾರ ಕಾಯ್ದೆ ಮುಂದುವರೆಸುವ ಕೆಲಸ ಮಾಡಿದೆ. ಆದರೆ ಕಳೆದ ಸರ್ಕಾರ 10 ಸಾವಿರ ಕೋಟಿ ರೂ. ಗಳನ್ನು ಬೇರೆ ಉದ್ದೇಶಕ್ಕೆ ಬಳಸಿದೆ. ಡೀಮ್ಡ್ ಎಕ್ಸಪೆಂಡೀಚರ್ ಅಡಿ ಹಣ ಖರ್ಚು ಮಾಡಲಾಗಿದೆ. ಈ ಸಂಬಂಧ 36 ದೂರುಗಳು ಬಂದಿವೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ನಿಧಿ ದುರ್ಬಳಕೆ ಬಗ್ಗೆ ನಾವು ಮೌನವಾಗಿಲ್ಲ. ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿದ್ದೇವೆ. ತನಿಖೆ ಈಗಾಗಲೇ ನಡೆಯುತ್ತಿದ್ದು, ಮತ್ತಷ್ಟು ದೂರುಗಳು ಬಂದರೂ ತನಿಖೆ ಮಾಡುತ್ತೇವೆ ಎಂದು ಸಚಿವರು ಹೇಳಿದರು.

ವರದಿ ಕೊಡಬೇಕು :ವಿವಿಧ ಇಲಾಖೆಗಳಿಗೆ ಹಣ ಹಂಚಿಕೆ ಮಾಡಲಾಗಿದೆ. ಯಾವ್ಯಾವ ಕಾರ್ಯಕ್ರಮಕ್ಕೆ ಹಣ ಕೊಡಲಾಗಿದೆ ಅಂತ ವರದಿ ಕೊಡಬೇಕು. ಯಾವ ಮಕ್ಕಳಿಗೂ ಕಾಲೇಜು, ಹಾಸ್ಟೆಲ್​ನಲ್ಲಿ ಸೀಟ್ ಇಲ್ಲ ಅಂತ ಹೇಳುವಂತಿಲ್ಲ. ಹೆಚ್ಚು ಹಾಸ್ಟೆಲ್ ತೆರೆಯಬೇಕು ಅಂತ ಹೇಳಲಾಗಿದೆ. ಇಂದು ಕ್ರಿಯಾ ಯೋಜನೆ ಅಪ್ರೂವಲ್ ಮಾಡಲಾಗಿದೆ. ಮೂರು ತಿಂಗಳಿಗೊಮ್ಮೆ ಪರಿಷತ್ ಸಭೆ ಕರೆಯಲಾಗುತ್ತದೆ. ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ ಎಂದು ಮಹದೇವಪ್ಪ ತಿಳಿಸಿದರು.

ಬಿಜೆಪಿಯವರ ಆರೋಪ ಆಧಾರ ರಹಿತ : ಗೃಹ ಲಕ್ಷ್ಮಿ ಯೋಜನೆಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ 6 ಸಾವಿರ ಕೋಟಿ ರೂ. ಹಣ ಬಳಕೆ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಮಹದೇವಪ್ಪ ತಿರುಗೇಟು ನೀಡಿದರು. ಬಿಜೆಪಿ ಅವರ ಆರೋಪ ಬೇಸ್ ಲೆಸ್. ಯಾವುದಕ್ಕೆ ಹಣ ಯೋಜನೆ ಇರಬೇಕು ಅದಕ್ಕೆ ಇದೆ. ಪಂಚ ಗ್ಯಾರಂಟಿಗೆ 11 ಸಾವಿರ ಕೋಟಿ ರೂ. ಕೊಡಲಾಗಿದೆ ಎಂದರು.

ಇದನ್ನೂ ಓದಿ :ಬಿಎಸ್​ವೈಮುಕ್ತ ಕನಸು ರಾಷ್ಟ್ರೀಯ ಬಿಜೆಪಿ ನಾಯಕರದ್ದಾಗಿದೆ: ಹೆಚ್‌.ಸಿ ಮಹದೇವಪ್ಪ

ABOUT THE AUTHOR

...view details