ಕರ್ನಾಟಕ

karnataka

ಲಖಿಂಪುರ ಘಟನೆ ರೈತರ ಮೇಲಿನ ಸರ್ಕಾರದ ದೌರ್ಜನ್ಯವನ್ನು ತೋರಿಸುತ್ತದೆ: ಖರ್ಗೆ

ಸಾಂತ್ವನ ಹೇಳಲು ಹೊರಟವರ ವಿರುದ್ಧ ಏಕೆ ಪ್ರಕರಣ ದಾಖಲಿಸಿದ್ದೀರಿ? ಕಾಂಗ್ರೆಸ್ ಪಕ್ಷದವರಿಗೆ ಲಖಿಂಪುರಕ್ಕೆ ಹೋಗಲು ಏಕೆ ಬಿಡುತ್ತಿಲ್ಲ? ಇತರೆ ಪಕ್ಷದವರು, ಸರ್ಕಾರದವರು ತೆರಳುತ್ತಾರೆ. ಘಟನೆಗೆ ಪರೋಕ್ಷವಾಗಿ ಕಾರಣರಾದ ಸಚಿವ ಅಜಯ್ ಮಿಶ್ರಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್​ ಮುಖಂಡರು ಒತ್ತಾಯ ಮಾಡಿದ್ದಾರೆ.

By

Published : Oct 6, 2021, 1:19 PM IST

Published : Oct 6, 2021, 1:19 PM IST

Updated : Oct 6, 2021, 2:31 PM IST

Lakhimpur Kheri violence; Mallikarjun Kharge Angry On Govt
Lakhimpur Kheri violence; Mallikarjun Kharge Angry On Govt

ಬೆಂಗಳೂರು: ಉತ್ತರ ಪ್ರದೇಶದ ಲಖಿಂಪುರ ಘಟನೆ ಅಂದರೆ ದೇಶದಲ್ಲೇ‌ ಅಲ್ಲೋಲ-ಕಲ್ಲೋಲ ಉಂಟುಮಾಡುವ ಹಾಗೂ ರೈತರ ಮೇಲೆ ಸರ್ಕಾರದ ದೌರ್ಜನ್ಯ ಹೇಗೆ ನಡೆದಿದೆ ಎನ್ನುವುದನ್ನು ತೋರಿಸುತ್ತದೆ ಎಂದು ರಾಜ್ಯಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರಗಳು ರೈತರ ವಿರುದ್ಧ ನಿರಂತರವಾಗಿ ದೌರ್ಜನ್ಯ ನಡೆಸುತ್ತಿವೆ. ಸರ್ಕಾರ ಜಾರಿಗೆ ತಂದಿರುವ ಜನ, ರೈತ ವಿರೋಧಿ ಕಾನೂನು ಹಿಂಪಡೆಯುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವರ ಪುತ್ರ ಈ ಹಿಂದೆ ರೈತರ ಬಳಿ ನಿಮಗೆ ಪಾಠ ಕಲಿಸುತ್ತೇನೆ ಎಂದಿದ್ದ. ಈಗ ಆರು ಮಂದಿ ರೈತರ ಬಲಿ ಪಡೆದಿದ್ದಾನೆ. ಕಾರಲ್ಲಿ ಸಚಿವರ ಪುತ್ರ ಇದ್ದ ಎಂಬ ಮಾಹಿತಿ ಅವರ ಕುಟುಂಬದ ಸದಸ್ಯರೇ ನೀಡಿದ್ದಾರೆ. ಕೇಂದ್ರ‌ ಸರ್ಕಾರ ಜಾರಿಗೆ ತಂದ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ‌ ಕುಮ್ಮಕ್ಕು ನೀಡಿ ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. ಹರಿಯಾಣ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ರೈತರ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ.

ರಾಜ್ಯಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

ಮೃತರಿಗೆ ಸಾಂತ್ವನ ಹೇಳಲು ಹೊರಟ ನಮ್ಮ ನಾಯಕಿ ಪ್ರಿಯಂಕಾ ಗಾಂಧಿ ಅವರನ್ನು ಬಲವಂತವಾಗಿ ಬಂಧಿಸಲಾಗಿದೆ. ಬಂಧನವಾಗಿ 40 ಗಂಟೆಯಾಗಿದೆ. ಅವರಿಗೆ ನೋಟಿಸ್ ನೀಡಿಲ್ಲ. ಬಾಯಿಮಾತಿಗೆ ಆದೇಶ ಬಂದಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಲಕ್ಷ್ಮೀಪುರ ಸಮೀಪವೇ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ರೈತರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಲಿಲ್ಲ. ಪ್ರಿಯಂಕಾ ಗಾಂಧಿ ತಮ್ಮ ಬಂಧನ ವಿಚಾರವಾಗಿ ಗಮನ ಸೆಳೆದರೂ ಬೆಲೆ ಕೊಟ್ಟಿಲ್ಲ. ಪ್ರಿಯಂಕಾ ಗಾಂಧಿ ಬಂಧನ ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದಕ್ಕೂ ಬೆಲೆ ಸಿಗುತ್ತಿಲ್ಲ. ಕಾನೂನು ಗೊತ್ತಿದ್ದೂ ಪ್ರಕರಣ ದಾಖಲಿಸುತ್ತಿಲ್ಲ. ರೈತರ ವಿರುದ್ಧ ಮಾತನಾಡುವುದು, ಪ್ರಚೋದಿಸುವವರ ವಿರುದ್ಧ ಸೆಡಿಷನ್ ಪ್ರಕರಣ ದಾಖಲಿಸಬೇಕು. ಆದರೆ ರೈತರು, ಅವರ ಪರ ಹೋರಾಡುವವರ ಮೇಲೆ ಕೇಸು ದಾಖಲಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ಸಾವಿನ ಪ್ರಕರಣವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು. ಇದುವರೆಗೂ ರಾಜ್ಯ ಗೃಹ ಸಚಿವರ ಪುತ್ರನನ್ನು ಯಾಕೆ ಬಂಧಿಸಿಲ್ಲ. ಸಾಂತ್ವನ ಹೇಳಲು ಹೊರಟವರ ವಿರುದ್ಧ ಪ್ರಕರಣ ಏಕೆ ದಾಖಲಿಸಿದ್ದೀರಿ? ಕಾಂಗ್ರೆಸ್ ಪಕ್ಷದವರಿಗೆ ಲಕ್ಷ್ಮೀಪುರಕ್ಕೆ ಹೋಗಲು ಏಕೆ ಬಿಡುತ್ತಿಲ್ಲ? ಇತರೆ ಪಕ್ಷದವರು, ಸರ್ಕಾರದವರು ತೆರಳುತ್ತಾರೆ. ಘಟನೆಗೆ ಪರೋಕ್ಷವಾಗಿ ಕಾರಣರಾದ ಸಚಿವ ಅಜಯ್ ಮಿಶ್ರಾ ಅವರನ್ನ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಉತ್ತರ ಪ್ರದೇಶ ಮುಖ್ಯಮಂತ್ರಿ ಇಂತಹ ಕೆಟ್ಟ ಘಟನೆಗೆ ಪ್ರಚೋದಿಸಿದ್ದಾರೆ. ಇಂತಹ ವ್ಯಕ್ತಿ ಅಧಿಕಾರದಲ್ಲಿ ಇರುವುದು ಸರಿಯಲ್ಲ. ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

'ಆರ್​ಎಸ್​ಎಸ್​ ನನ್ನ ಸೋಲಿಗೆ ಕಾರಣ':

2019ರ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಆರ್​ಎಸ್​ಎಸ್ ಕೂಡ ಕಾರಣ. ಹಲವು ಕಾರಣಗಳಿಗೆ ನಾನು ಸೋತಿರಬಹುದು. ಇದರಲ್ಲಿ ಆರ್​ಎಸ್​ಎಸ್ ಕೈವಾಡ ಸಹ ಇದೆ. ಆರ್​ಎಸ್​ಎಸ್ ಮನುಸ್ಮೃತಿಯನ್ನ ಪ್ರತಿಪಾದಿಸುತ್ತಿದೆ. ಗೋಲ್ವಾಲ್ಕರ್ ಯಾರು, ಅದರ ಪ್ರತಿಪಾದಕ. ಕಲಬುರಗಿಯಲ್ಲಿ ನನ್ನ ಸೋಲಿಗೆ ಆರ್​ಎಸ್​ಎಸ್ ಕಾರಣ. ಆರ್​ಎಸ್​ಎಸ್ ಏನು‌ ಪ್ರತಿಪಾದಿಸುತ್ತದೆ. ಮನುಸ್ಮೃತಿ ಏನು ಪ್ರತಿಪಾದಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ಈಶ್ವರ್ ಖಂಡ್ರೆ, ರಾಮಲಿಂಗ ರೆಡ್ಡಿ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Last Updated : Oct 6, 2021, 2:31 PM IST

ABOUT THE AUTHOR

...view details