ಬೆಂಗಳೂರು:ಆಹಾರ ಭದ್ರತೆ ಕಾಯ್ದೆಯಡಿ ವಿತರಿಸುತ್ತಿರುವ ಪಡಿತರ ದುರ್ಬಳಕೆ ತಡೆಗೆ ಆಂಧ್ರಪ್ರದೇಶ ಮಾದರಿಯ ಯೋಜನೆಗೆ ಆಹಾರ ಇಲಾಖೆ ಪ್ರಸ್ತಾವನೆ ಸಿದ್ದಪಡಿಸಿದ್ದು,'ಮೊಬೈಲ್ ರೇಷನ್ ಸ್ಟೋರ್' ಮೂಲಕ ಪಡಿತರದಾರರ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ಮುಂದಾಗಿದೆ. ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ರಾಜ್ಯೋತ್ಸವದ ಕೊಡುಗೆಯಾಗಿ ಯೋಜನೆ ಪ್ರಾಯೋಗಿಕವಾಗಿ ರಾಜ್ಯ ರಾಜಧಾನಿಯಲ್ಲಿ ಜಾರಿಗೆ ಬರಲಿದೆ.
ಆಂಧ್ರಪ್ರದೇಶದಲ್ಲಿ ಪಡಿತರದಾರರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಜನಮನ್ನಣೆ ಪಡೆದುಕೊಂಡ ಬೆನ್ನಲ್ಲೇ ಕಾಳಸಂತೆಗೆ ಕಡಿವಾಣ ಹಾಕಲು ಪೂರಕವಾಗಿ ರಾಜ್ಯದಲ್ಲಿಯೂ ಮನೆ ಮನೆಗೆ ಪಡಿತರ ತಲುಪಿಸುವ ಯೋಜನೆ ಜಾರಿಗೆ ಆಹಾರ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿ 19,963 ಪಡಿತರ ವಿತರಣಾ ಕೇಂದ್ರಗಳಿದ್ದು, 1.47 ಕೋಟಿ ಪಡಿತರ ಕಾರ್ಡ್ಗಳಿವೆ. ಅಂತ್ಯೋದಯ, ಬಿಪಿಎಲ್ ಕಾರ್ಡ್ಗೆ ಉಚಿತ ಪಡಿತರ ವಿತರಣೆ ಮಾಡುತ್ತಿದ್ದು, ಎಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಇವರೆಲ್ಲರ ಮನೆ ಬಾಗಿಲಿಗೆ ಆಟೋ ಮೂಲಕ ಪಡಿತರವನ್ನು ಸರಬರಾಜು ಮಾಡಬೇಕು ಎನ್ನುವ ಪ್ರಸ್ತಾವನೆ ಸಿದ್ಧಗೊಂಡಿದೆ.
ಆಂಧ್ರಪ್ರದೇಶ ಮಾದರಿಯಲ್ಲೇ ಪ್ರತಿ ಫಲಾನುಭವಿ ಮನೆಗೆ ತೆರಳಿ, ಬೆರಳಚ್ಚು ಪಡೆದು ಪಡಿತರ ವಿತರಣೆ ಮಾಡಲಾಗುತ್ತದೆ. ಅಕ್ರಮ ತಡೆಗೆ ವಾಹನಗಳಿಗೆ ಜಿಪಿಎಸ್ ಬಳಕೆ ಮಾಡಿ ಅದರ ಮೇಲೆ ನಿಗಾ ಇರಿಸಲಾಗುತ್ತದೆ. ಇದರಿಂದಾಗಿ ಪಡಿತರದಾರರು ಪಡಿತರ ವಿತರಣಾ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ, ಬಾಗಿಲು ತೆಗೆದಿರುವ ಸಮಯಕ್ಕೆ ಕಾಯಬೇಕಿಲ್ಲ. ಪಡಿತರ ಬಂದಿದೆಯೋ ಇಲ್ಲವೇ ವಿಚಾರಿಸಬೇಕಿಲ್ಲ. ದೂರವಿರುವ ಅಂಗಡಿಗಳಿಗೆ ಅಲೆದಾಡುವುದೂ ತಪ್ಪಲಿದೆ ಎನ್ನುವುದು ಆಹಾರ ಇಲಾಖೆಯ ಲೆಕ್ಕಾಚಾರವಾಗಿದೆ.
ಕಾಳಸಂತೆಗೆ ಕಡಿವಾಣ:
ಪಡಿತರದಾರರ ಮನೆ ಬಾಗಿಲಿಗೆ ಪಡಿತರ ಸರಬರಾಜು ಮಾಡುವುದರಿಂದ ಕಾಳಸಂತೆಯಲ್ಲಿ ಪಡಿತರ ಮಾರಾಟಕ್ಕೆ ಬ್ರೇಕ್ ಹಾಕಬಹುದು ಎನ್ನುವುದು ಇಲಾಖೆಯ ಅಭಿಪ್ರಾಯವಾಗಿದೆ. ಪ್ರತಿ ತಿಂಗಳು ಪಡಿತರ ವಿತರಣೆಯಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡುವುದು, ಕೆಲವರಿಗೆ ಪಡಿತರ ವಿತರಿಸದೇ ಅಕ್ರಮವಾಗಿ ಪಡಿತರ ವಿತರಣಾ ಕೇಂದ್ರದಲ್ಲೇ ದಾಸ್ತಾನು ಮಾಡಿ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಆಗಾಗ ಅಲ್ಲಲ್ಲಿ ಕೇಳಿ ಬರುತ್ತಲೇ ಇರುತ್ತವೆ.