ಕರ್ನಾಟಕ

karnataka

By

Published : Jan 16, 2022, 4:35 PM IST

Updated : Jan 16, 2022, 5:29 PM IST

ETV Bharat / state

ಸಂಕ್ರಾಂತಿಗೆ ಕಾದಿದ್ದೇ ಬಂತು, ಸಂಪುಟ ಪುನಾರಚನೆ ಆಗಲಿಲ್ಲ.. ಆಕಾಂಕ್ಷಿಗಳು 5 ರಾಜ್ಯ ಚುನಾವಣೆ ಮುಗಿಯುವವರೆಗೂ ಕಾಯಲೇಬೇಕು..

ಪಂಚ ರಾಜ್ಯಗಳ ಚುನಾವಣೆ, ಬಜೆಟ್ ನಂತರವೇ ರಾಜ್ಯದಲ್ಲಿ ಸಂಪುಟ ಸರ್ಜರಿ ನಡೆಯಲಿದೆ. ಇದರಿಂದಾಗಿ ಮತ್ತೆ ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಪ್ರತ್ಯೇಕ ಸಭೆಗಳಂತಹ ಚಟುವಟಿಕೆ ಆರಂಭಗೊಂಡಿವೆ. ಇತ್ತೀಚೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲ ಶಾಸಕರು ಸಭೆ ನಡೆಸಿರುವುದೇ ಇದಕ್ಕೆ ನಿದರ್ಶನವಾಗಿದೆ..

karnataka-cabinet-expansion-deferred-again
ಬೊಮ್ಮಾಯಿ ಸಂಪುಟ

ಬೆಂಗಳೂರು :ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟಕ್ಕೆ ಸೇರಲು ಕಾತರದಿಂದ ಕಾಯುತ್ತಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಶೆಯಾಗಿದೆ. ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ, ಪುನಾರಚನೆಗೆ ಚಿಂತನೆ ನಡೆಸಿದ್ದ ವರಿಷ್ಠರು, ಇದೀಗ ಪಂಚ ರಾಜ್ಯಗಳ ಚುನಾವಣೆಯತ್ತ ಗಮನ ಹರಿಸಿರುವುದರಿಂದ ಬಹುತೇಕ ರಾಜ್ಯ ಬಜೆಟ್ ಮಂಡನೆಯಾಗುವವರೆಗೂ ಕಾಯುವ ಅನಿವಾರ್ಯತೆ ಎದುರಾಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದ ನಂತರ ಬೊಮ್ಮಾಯಿ ಸಂಪುಟದಲ್ಲಿ ಮೇಜರ್ ಸರ್ಜರಿ ಮಾಡಿ ಚುನಾವಣಾ ಸಂಪುಟ ರಚನೆಗೆ ನಡೆಸಲಾಗಿದ್ದ ಚಿಂತನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ರಾಜ್ಯ ಬಿಜೆಪಿ ಘಟಕ ಹಾಗೂ ಸಂಘ ಪರಿವಾರದ ಈ ಚಿಂತನೆಗೆ ಹೈಕಮಾಂಡ್ ಅಸ್ತು ಎಂದಿದ್ದರೂ ಪಂಚ ರಾಜ್ಯಗಳ ಚುನಾವಣೆ, ಕೊರೊನಾ 3ನೇ ಅಲೆ ಇದಕ್ಕೆ ಅಡ್ಡಿಯಾಗಿದೆ. ಹಾಗಾಗಿ, ಸದ್ಯಕ್ಕೆ ಬೊಮ್ಮಾಯಿ ಸಂಪುಟದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎನ್ನುವ ಮಾತುಗಳು ಸಿಎಂ ಆಪ್ತ ವಲಯದಿಂದ ಕೇಳಿ ಬರುತ್ತಿವೆ.

ಹಿರಿಯರನ್ನು ಕೈಬಿಡುವ ಸಾಧ್ಯತೆ?:ಸದ್ಯ ಬೊಮ್ಮಾಯಿ ಸಂಪುಟದಲ್ಲಿ 4 ಸ್ಥಾನಗಳು ಖಾಲಿ ಉಳಿದಿವೆ. ಇಲಾಖೆಗಳಲ್ಲಿ ಕಳಪೆ ಸಾಧನೆ ಮಾಡಿರುವ ಕೆಲ ಸಚಿವರನ್ನು ಕೈಬಿಡುವುದು ಹಾಗೂ ಕೆಲ ಹಿರಿಯ ನಾಯಕರನ್ನು ಸಂಪುಟದಿಂದ ಕೈಬಿಟ್ಟು ಸಂಘಟನೆಗೆ ಬಳಸಿಕೊಳ್ಳಲು ಚಿಂತಿಸಲಾಗಿದೆ. ಆರು ಮಂದಿಯನ್ನು ಕೈಬಿಟ್ಟರೆ ಒಟ್ಟು 10 ಸ್ಥಾನ ಖಾಲಿ ಆದಂತಾಗಲಿದೆ.

ಯುವಕರು ಮುಂದಿನ ಚುನಾವಣೆಗೆ ಅನುಕೂಲವಾಗುವಂತಹ ಮುಖಗಳಿಗೆ ಮಣೆ ಹಾಕಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ಮಾಡಲು ಸಂಘ ಪರಿವಾರ ಚಿಂತನೆ ನಡೆಸಿತ್ತು. ಇದಕ್ಕಾಗಿಯೇ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಪಕ್ಷದ ಚಿಂತನ ಬೈಠಕ್ ಆಯೋಜಿಸಿತ್ತು. ಅಲ್ಲಿ ಸಚಿವರ ಮೌಲ್ಯಮಾಪನ ಮಾಡಿ ಕೆಲವನ್ನು ಕೈಬಿಟ್ಟು ಹೊಸದಾಗಿ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಮೂರನೇ ಅಲೆ ಕಾರಣಕ್ಕೆ ಬಿಜೆಪಿಯ ಚಿಂತನ ಬೈಠಕ್ ಮುಂದೂಡಿಕೆಯಾಗಿದೆ.

ಇದರ ನಡುವೆಯೂ ಸಂಕ್ರಾಂತಿ ನಂತರ ಬೊಮ್ಮಾಯಿ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗಿತ್ತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲ ನಾಯಕರು ಈ ಸಂಬಂಧ ಹೇಳಿಕೆಗಳನ್ನೂ ನೀಡುತ್ತ ಬಂದಿದ್ದರು. ಆದರೆ, ಈಗ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿರುವುದರಿಂದ ವರಿಷ್ಠರು ಉತ್ತರಪ್ರದೇಶ ಉಳಿಸಿಕೊಳ್ಳಲು ಸರ್ಕಸ್ ಆರಂಭಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಕರ್ನಾಟಕ ರಾಜ್ಯದ ಕಡೆ ತಲೆ ಹಾಕುವುದು ಅನುಮಾನ ಎನ್ನಲಾಗಿದೆ. ಹಾಗಾಗಿ, ಸಂಪುಟದಿಂದ ಕೊಕ್ ಆಗುತ್ತಿದ್ದವರು ಇನ್ನೆರಡು ತಿಂಗಳು ಸೇಫ್ ಆಗಿದ್ದರೆ, ಸಚಿವ ಸ್ಥಾನಾಕಾಂಕ್ಷಿಗಳಿಗೆ ಮತ್ತೆ ನಿರಾಶೆಯಾಗುವಂತಾಗಿದೆ.

ಸಚಿವಾಕಾಂಕ್ಷಿಗಳ ಕಸರತ್ತು :ರಾಜ್ಯ ಆಯವ್ಯಯ ಮಂಡನೆವರೆಗೂ ಸಂಪುಟದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ. ಹಾಗಾಗಿ, ಪಂಚ ರಾಜ್ಯಗಳ ಚುನಾವಣೆ, ಬಜೆಟ್ ನಂತರವೇ ರಾಜ್ಯದಲ್ಲಿ ಸಂಪುಟ ಸರ್ಜರಿ ನಡೆಯಲಿದೆ. ಇದರಿಂದಾಗಿ ಮತ್ತೆ ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಪ್ರತ್ಯೇಕ ಸಭೆಗಳಂತಹ ಚಟುವಟಿಕೆ ಆರಂಭಗೊಂಡಿವೆ. ಇತ್ತೀಚೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲ ಶಾಸಕರು ಸಭೆ ನಡೆಸಿರುವುದೇ ಇದಕ್ಕೆ ನಿದರ್ಶನವಾಗಿದೆ.

ರೇಣುಕಾಚಾರ್ಯ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಅವಕಾಶ ಸಿಗದೇ ಇರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ, ಯಾವ ರೀತಿ ಸಂಪುಟ ಸರ್ಜರಿ ನಡೆಯಲಿದೆ, ಹೈಕಮಾಂಡ್​​ನ ಲೆಕ್ಕಾಚಾರವೇನು ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.

ಡಿಸಿಎಂ ಸ್ಥಾನ :ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಚುನಾವಣೆಗೆ ಮುನ್ನವೇ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದರೆ, ಸರ್ಕಾರ ರಚನೆಯಾಗಿ ಮೂರು ವರ್ಷವಾಗುತ್ತ ಬಂದರೂ ಅವರಿಗೆ ಡಿಸಿಎಂ ಸ್ಥಾನ ನೀಡಿಲ್ಲ. ಯಡಿಯೂರಪ್ಪ ಸಂಪುಟದಲ್ಲಿ ಮೂರು ಡಿಸಿಎಂ ಸ್ಥಾನ ಸೃಷ್ಟಿಸಿದರೂ ರಾಮುಲು ಅದರಲ್ಲಿ ಇರಲಿಲ್ಲ. ಈಗ ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಸ್ಥಾನವನ್ನೇ ಕಲ್ಪಿಸಿಲ್ಲ. ಹೀಗಾಗಿ, ರಾಮುಲು ಅವಕಾಶ ವಂಚಿತರಾಗಿದ್ದಾರೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮತಬುಟ್ಟಿ ಸೇಫ್ ಮಾಡಿಕೊಳ್ಳಲು ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕು ಎನ್ನುವ ಚರ್ಚೆ ಕೂಡ ಪಕ್ಷದ ವಲಯದಲ್ಲಿ ನಡೆದಿದೆ ಎನ್ನಲಾಗಿದೆ.

ಸಂಕ್ರಾಂತಿಗೆ ಸಂಪುಟ ಸರ್ಜರಿಯಾಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಕಾಯುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ:ಮೂವರು ಕಂದಮ್ಮಗಳ ಸಾವು ಪ್ರಕರಣ: ತನಿಖೆಗೆ ಆದೇಶಿಸಿದ ಬೆಳಗಾವಿ ಡಿಎಚ್ಒ

Last Updated : Jan 16, 2022, 5:29 PM IST

ABOUT THE AUTHOR

...view details