ಕರ್ನಾಟಕ

karnataka

ETV Bharat / state

ಮಂಗಳೂರು ಕಮಿಷನರ್ ಸೇರಿ 7 ಮಂದಿ IPS ಅಧಿಕಾರಿಗಳ ವರ್ಗಾವಣೆ

ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

By

Published : Feb 23, 2023, 4:49 PM IST

7-ips-offficers-transfered-by-govt
ಮಂಗಳೂರು ಕಮಿಷನರ್ ವರ್ಗಾವಣೆ: ಏಳು ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯದಲ್ಲಿ 7 ಮಂದಿ ಭಾರತೀಯ ಪೊಲೀಸ್ ಸೇೆವೆ (ಐಪಿಎಸ್) ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಇಂದು ಆದೇಶಿಸಿದೆ. ಬೆಂಗಳೂರು ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಹಾಗೂ ಕಾರ್ಯನಿರ್ವಹಣೆಗಾಗಿ ಹೊಸದಾಗಿ ಸೃಷ್ಟಿಸಲಾಗಿದ್ದ ಟ್ರಾಫಿಕ್ ಡಿವಿಷನ್‌ಗೆ ನಗರ ಕೇಂದ್ರ ಸಶಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಸುಜಿತಾ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಮಂಗಳೂರು ನಗರ ಕಮೀಷನರ್ ಆಗಿದ್ದ ಶಶಿಕುಮಾರ್ ಜಾಗಕ್ಕೆ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರನ್ನು ವರ್ಗಾವಣೆಗೊಳಿಸಲಾಗಿದೆ‌.

ರಾಜ್ಯ ರೈಲ್ವೇ ಡಿಐಜಿಯಾಗಿ ಶಶಿಕುಮಾರ್, ರಾಜ್ಯ ಗುಪ್ತವಾರ್ತೆ ಎಸ್ಪಿಯಾಗಿ ಕಿಶೋರ್ ಬಾಬು, ವೈರ್ ಲೆಸ್ ವಿಭಾಗದ ಎಸ್ಪಿ ಕೋನವಂಶಿಕೃಷ್ಣ, ಕೇಂದ್ರ ಸಶಸ್ತ್ರ ವಿಭಾಗದ ಡಿಸಿಪಿಯಾಗಿ ಅರುಣಾಂಶು ಗಿರಿ ಹಾಗೂ ಕೊಪ್ಪಳ ಎಸ್ಪಿಯಾಗಿ ಯಶೋಧವೊಂಟಾಗೊಡಿ ವರ್ಗಾವಣೆಗೊಂಡಿದ್ದಾರೆ.

ಮಂಗಳೂರು ಪೊಲೀಸ್​ ಕಮಿಷನರ್​ ವರ್ಗ:ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿದ್ದ ಶಶಿಕುಮಾರ್ ಅವರನ್ನು ವರ್ಗಾಯಿಸಲಾಗಿದೆ. ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ನೇಮಕ ಮಾಡಲಾಗಿದೆ. ಕುಲದೀಪ್ ಅವರು ಬೆಂಗಳೂರು ನಗರ ಟ್ರಾಫಿಕ್ ವೆಸ್ಟ್ ಡಿವಿಷನ್‌ನ ಡಿಸಿಪಿ ಆಗಿದ್ದರು.

ಶಶಿಕುಮಾರ್ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸುಮಾರು ಎರಡು ವರ್ಷ ಎರಡು ತಿಂಗಳು ಸೇವೆ ಸಲ್ಲಿಸಿದ್ದಾರೆ. ಇವರು ಕಮಿಷನರ್ ಆಗಿ ಬಂದ ಹೊಸತರಲ್ಲಿಯೇ ಜನರೊಂದಿಗೆ ಬೆರೆತು ಜನಪ್ರಿಯರಾಗಿದ್ದರು. ವಿವಿಧ ಸಾರ್ವಜನಿಕ ಸಮಾರಂಭಗಳಲ್ಲಿ ಹಾಡುವ ಮೂಲಕ ಮೆಚ್ಚುಗೆಗೂ ಪಾತ್ರರಾಗಿದ್ದರು.

ಶಶಿಕುಮಾರ್ ಅವರು ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಂಗಳೂರು ಕಮೀಷನರ್ ಆಗಿ ಬಂದಿದ್ದು, ಈ ವೇಳೆ ನಗರದಲ್ಲಿ ಕೊರೊನಾ ನಿಯಮಾವಳಿಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಕಾರ್ಯಕ್ರಮವೊಂದನ್ನು ಮಾಡಿ ಆ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅವರು ಅದೇ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಹಾಡಿಗೆ ಹೆಜ್ಜೆ ಹಾಕಿದ್ದರು. ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿದ್ದಾಗ ಚಿತ್ರದುರ್ಗದ ಕೋಟೆ ಹತ್ತಿದ್ದರು.

ತಮ್ಮ ಸೇವಾವಧಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಜಾಲವನ್ನು ಬೇಧಿಸಿದ್ದರು. ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ನಡೆಸುತ್ತಿದ್ದ ಗಾಂಜಾ ಪ್ರಕರಣ, ನಕಲಿ ನೋಟುಗಳ ಜಾಲ, ಹಲವು ಗಾಂಜಾ ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಸರಣಿ ಕೋಮು ಹತ್ಯೆ ಸಂದರ್ಭದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿಯೂ ಹತ್ಯೆ ನಡೆದಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಮಂಗಳೂರಿನಲ್ಲಿ ಪಬ್ ಮೇಲೆ ನಡೆದ ದಾಳಿ ಇವರ ಆಡಳಿತ ಅವಧಿಯಲ್ಲಿ ನಡೆದಿತ್ತು.

ಆರೋಪಗಳು: ಶಶಿಕುಮಾರ್ ಜನಸ್ನೇಹಿಯಾಗಿದ್ದರೂ ಅವರ ಮೇಲೆ ಕೆಲವೊಂದು ಆರೋಪಗಳು ಕೂಡ ಕೇಳಿಬಂದಿದ್ದವು. ಮೊಹಮ್ಮದ್ ಕಬೀರ್ ಎಂಬವರು ಮಂಗಳೂರು ಕಮಿಷನರ್ ಶಶಿಕುಮಾರ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿ ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದರು. ವೈದ್ಯಕೀಯ ವಿದ್ಯಾರ್ಥಿಗಳ ಮತ್ತು ವೈದ್ಯರ ಗಾಂಜಾ ಪ್ರಕರಣದಲ್ಲಿ ಗಾಂಜಾ ಸ್ಮಗ್ಲರ್ ಎಂದು ಉಲ್ಲೇಖಿಸಿರುವುದಕ್ಕೆ ಕಾನೂನು ಹೋರಾಟ ನಡೆಸುವುದಾಗಿ ವೈದ್ಯರು ಮತ್ತು ವಕೀಲರು ಹೇಳಿಕೆಗಳನ್ನು ನೀಡಿದ್ದರು.

ಇದನ್ನೂ ಓದಿ:ಆಡಳಿತ ಯಂತ್ರಕ್ಕೆ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ

ABOUT THE AUTHOR

...view details