ಕರ್ನಾಟಕ

karnataka

By

Published : Oct 29, 2022, 1:19 PM IST

ETV Bharat / state

ಐಪಿಸಿ ಸೆಕ್ಷನ್ 279 - ನಿರ್ಲಕ್ಷ್ಯದ ಚಾಲನೆ ಸಾಕು ಪ್ರಾಣಿಗಳಿಗೆ ಅನ್ವಯವಾಗುವುದಿಲ್ಲ: ಹೈಕೋರ್ಟ್

ಸುಪ್ರೀಂಕೋರ್ಟ್‌ ಪ್ರಕರಣವೊಂದರಲ್ಲಿ ಹೇಳಿರುವಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಮತ್ತು ಪ್ರಾಣಿಗಳನ್ನು ಸಮಾನವಾಗಿ ಕಾಣಬೇಕು. ಆದರೆ, ಯಾವುದೇ ಪ್ರಾಣಿಯೂ ಮನುಷ್ಯನಿಗಿಂತ ಶ್ರೇಷ್ಠವಲ್ಲ ಎಂಬ ಅಂಶವನ್ನು ದೂರುದಾರರ ಪರ ವಕೀಲರು ಉಲ್ಲೇಖಿಸಿದ್ದರು. ಆದರೆ, ಈ ಅಂಶ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಗೆ ಅನ್ವಯವಾಗಲಿದೆ. ಆದರೆ, ಐಪಿಸಿ ಕಾಯಿದೆಯಲ್ಲಿ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್​ ತಿಳಿಸಿದೆ.

ipc-section-279-is-not-applicable-to-domestic-animals-high-court
ಐಪಿಸಿ ಸೆಕ್ಷನ್ 279

ಬೆಂಗಳೂರು: ಭಾರತೀಯ ದಂಡ ಸಂಹಿತೆ (ಐಪಿಸಿ) 279 (ನಿರ್ಲಕ್ಷ್ಯದ ಚಾಲನೆ) ಮನುಷ್ಯರಿಗೆ ಮಾತ್ರ ಅನ್ವಯಿಸುತ್ತವೆ ಎಂದು ತಿಳಿಸಿರುವ ಹೈಕೋರ್ಟ್, ರಸ್ತೆ ಅಪಘಾತಗಳಲ್ಲಿ ಸಾಕು ನಾಯಿಗಳಿಗೆ ಗಾಯವಾದಲ್ಲಿ ಇದೇ ಸೆಕ್ಷನ್ ಅಡಿ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

2018ರಲ್ಲಿ ವಾಹನ ಚಲಾಯಿಸುತ್ತಿರುವ ಸಂದರ್ಭದಲ್ಲಿ ನಾಯಿಗೆ ತಾಕಿದ ಪ್ರಕರಣ ರದ್ದು ಕೋರಿ ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿ ಜಿ. ಪ್ರತಾಪ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಐಪಿಸಿ ಸೆಕ್ಷನ್ 279 ಕೇವಲ ಮನುಷ್ಯರಿಗೆ ಸಂಬಂಧಿಸಿದ್ದಾಗಿದೆ. ಆದರೆ, ಮಾನವನ ಹೊರತಾಗಿ ಇತರ ಪ್ರಾಣಿಗಳಿಗೆ ತೊಂದರೆಯಾದಲ್ಲಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.

ಪ್ರಕರಣ ಸಂಬಂಧ ದೂರುದಾರರ ಪರ ವಕೀಲರು, ಸುಪ್ರೀಂಕೋರ್ಟ್‌ ಪ್ರಕರಣವೊಂದರಲ್ಲಿ ಹೇಳಿರುವಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಮತ್ತು ಪ್ರಾಣಿಗಳನ್ನು ಸಮಾನವಾಗಿ ಕಾಣಬೇಕು. ಆದರೆ, ಯಾವುದೇ ಪ್ರಾಣಿಯೂ ಮನುಷ್ಯನಿಗಿಂತ ಶ್ರೇಷ್ಠವಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ್ದರು. ಆದರೆ, ಈ ಅಂಶ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಗೆ ಅನ್ವಯವಾಗಲಿದೆ. ಆದರೆ, ಐಪಿಸಿ ಕಾಯಿದೆಯಲ್ಲಿ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೇ, ದೂರುದಾರರ ಪರ ವಕೀಲರ ವಾದ ಪರಿಗಣಿಸಿದಲ್ಲಿ ಐಪಿಸಿ ಕಾಯಿದೆಯಲ್ಲಿ ವ್ಯಕ್ತಿ ಎಂಬ ಪದದ ಬದಲಿಗೆ ಪ್ರಾಣಿ ಎಂಬುದಾಗಿ ಅರ್ಥೈಸಬೇಕಾಗಲಿದೆ. ಆಗ ಸಾಕು ಪ್ರಾಣಿಗಳು ಸಾವನ್ನಪ್ಪಿದಾಗ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಲ್ಲದೆ, ಐಪಿಸಿ 428(10 ರೂ.ಗಳಿಗೆ ಮೇಲ್ಪಟ್ಟ ಮೌಲ್ಯದ ಪ್ರಾಣಿಯನ್ನು ಉದ್ದೇಶ ಪೂರಕವಾಗಿ ವಿಷ ಹಾಕಿ ಕೊಲ್ಲುವುದು ಇಲ್ಲವೇ ಅಂಗವೈಕಲ್ಯವನ್ನುಂಟು ಮಾಡುವುದು) ಮತ್ತು ಸೆಕ್ಷನ್ 429(50 ರೂ.ಮೌಲ್ಯಕ್ಕೂ ಹೆಚ್ಚಿನ ಬೆಲೆಯ ಪ್ರಾಣಿಗಳನ್ನು ಉದ್ದೇಶ ಪೂರಕವಾಗಿ ವಿಷ ಹಾಕಿ ಕೊಲ್ಲುವುದು ಹಾಗೂ ಅಂಗ ವೈಕಲ್ಯವನ್ನುಂಟು ಮಾಡುವುದಾಗಿದೆ) ಅಡಿ ಪ್ರಕರಣ ದಾಖಲಾಗಿತ್ತು.

ಆದರೆ, ಈ ಘಟನೆಯು ಆಕಸ್ಮಿಕವಾಗಿ ನಡೆದಿರುವುದಾಗಿದ್ದು, ಉದ್ದೇಶಪೂರ್ವಕವಾಗಿ ನಡೆದಿಲ್ಲ. ಆದ್ದರಿಂದ ಈ ಎರಡೂ ಸೆಕ್ಷನ್​ಗಳಡಿ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ಸಾಕು ಪ್ರಾಣಿಗಳಿಗೆ ಉಂಟಾಗುವ ಗಾಯ ಮತ್ತು ಸಾವು ಸಂಭವಿಸಿದಲ್ಲಿ ಐಪಿಸಿ 279, 428 ಮತ್ತು 429 ಅಡಿ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಮೋಟಾರು ವಾಹನ ಕಾಯಿದೆ ಸೆಕ್ಷನ್ 134(ಎ) ಮತ್ತು (ಬಿ) ಪ್ರಕಾರ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡದೇ ರಸ್ತೆ ಬದಿಯಲ್ಲಿ ಬಿಟ್ಟುಹೋಗುವ ಆರೋಪವಾಗಿದೆ. ಆದರೆ, ಈ ಪ್ರಕರಣದಲ್ಲಿ ಪ್ರಾಣಿಗೆ ತೊಂದರೆ ಆಗಿರುವುದರಿಂದ ಈ ಸೆಕ್ಷನ್‌ಗಳ ಅಡಿಯೂ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರಕರಣ ರದ್ದು ಮಾಡುತ್ತಿರುವುದಾಗಿ ನ್ಯಾಯಪೀಠ ಅಭಿಪ್ರಾಯ ಪಟ್ಟಿದ್ದು, ಅರ್ಜಿಯನ್ನು ಪುರಸ್ಕರಿಸಿ ಪ್ರಕರಣ ರದ್ದು ಮಾಡಿದೆ.

ಪ್ರಕರಣದ ಹಿನ್ನೆಲೆ: 2018ರ ಫೆಬ್ರವರಿ 24ರಂದು ಬೆಳಗ್ಗೆ ನನ್ನ ತಾಯಿ ಎರಡು ಸಾಕು ನಾಯಿಗಳೊಂದಿಗೆ ವಾಯುವಿಹಾರಕ್ಕೆ ತೆರಳಿದ್ದರು. ಈ ನಡುವೆ ವಾಹನವೊಂದು ಒಂದು ನಾಯಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ನಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅದು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ಕುರುಬರಹಳ್ಳಿಯ ನಿವಾಸಿಯಾಗಿರುವ ದಿಲ್ರಾಜ್ ರಾಖೇಜಾ ಎಂಬುವರು ವಿಜಯನಗರ ಠಾಣೆಗೆ ದೂರು ದಾಖಲಿಸಿದ್ದರು.

ಪೊಲೀಸರು ವಾಹನ ಚಾಲಕ ಪ್ರತಾಪ್ (ಅರ್ಜಿದಾರ) ವಿರುದ್ಧ ಮೋಟಾರು ವಾಹನ ಕಾಯಿದೆ 134(ಎ),(ಬಿ) ಮತ್ತು 187 ಹಾಗೂ ಐಪಿಸಿ ಸೆಕ್ಷನ್​ 279, 428, 429 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ನಡೆಸಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಪ್ರತಾಪ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಅನಾರೋಗ್ಯದ ಬಗ್ಗೆ ತಿಳಿಸದೇ ವಿಮೆ ಮಾಡಿಸಿದಲ್ಲಿ ಮೆಡಿಕ್ಲೈಮ್ ನಿರಾಕರಿಸಬಹುದು: ಹೈಕೋರ್ಟ್

ABOUT THE AUTHOR

...view details