ಬೆಂಗಳೂರು: ವಸತಿ ಯೋಜನೆಗಳಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸಮನ್ವಯತೆ ಕಾಯ್ದುಕೊಂಡು ಕೆಲಸ ಮಾಡಲಿದ್ದೇವೆ. ಲೋಪದೋಷಗಳಿದ್ದಲ್ಲಿ ದೂರು ಕೊಡಿ, ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗ್ರಾಮ ಪಂಚಾಯಿತಿಗೆ 20 ಮನೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಗೆ ಶಾಸಕರ ಅಭಿಪ್ರಾಯ ಪಡೆಯದೇ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಕುರಿತು ಸದಸ್ಯ ಗೋಪಾಲಸ್ವಾಮಿ ಪ್ರಶ್ನೆಗೆ ಸಹಮತ ವ್ಯಕ್ತಪಡಿಸಿ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸದಸ್ಯರಾದ ಆರ್.ಬಿ.ತಿಮ್ಮಾಪೂರ್, ನಾರಾಯಣಸ್ವಾಮಿ ಕೇಳಿದ ಉಪ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಜಿಲ್ಲಾ ಹಂತದಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಶಾಸಕರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಸಂಬಂಧಪಟ್ಟ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಹಿಯೊಂದಿಗೆ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದರು.
ಪರಿಷತ್ ಸದಸ್ಯರನ್ನು ಪರಿಗಣಿಸುವುದಿಲ್ಲ ಎನ್ನಲು ಸಾಧ್ಯವಿಲ್ಲ. ಶಾಸಕರಿಗೆ ಇರುವ ಪ್ರೋಟೋಕಾಲ್ ಪರಿಷತ್ ಸದಸ್ಯರಿಗೂ ಇದೆ. ಪರಿಷತ್ ಸದಸ್ಯರು ನೋಡಲ್ ಕ್ಷೇತ್ರ ಆಯ್ಕೆ ಮಾಡಿಕೊಂಡರೆ, ಅಲ್ಲಿ ಅವರ ಸಲಹೆ ಪರಿಗಣಿಸಲು ಸೂಚಿಸಿ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಎಲ್ಲೋ ಕುಳಿತು ರಾಜ್ಯದಲ್ಲಿ 25 ಲಕ್ಷ ಸೂರು ರಹಿತರಿದ್ದಾರೆ ಎಂದು ವರದಿ ಕೊಟ್ಟಿದ್ದರು. ನಂತರ ಕೇಂದ್ರದ ತಂಡ ಆಗಮಿಸಿ ಸಮೀಕ್ಷೆ ನಡೆಸಿದಾಗ ರಾಜ್ಯದ ವರದಿಗೂ ಕೇಂದ್ರದ ವರದಿಗೂ ವ್ಯತ್ಯಾಸ ಕಂಡುಬಂದಿದೆ. ಈಗ ನಾನು ಸಚಿವನಾಗಿ ಬಂದ ನಂತರ ಮತ್ತೆ ಪರಿಶೀಲನೆ ನಡೆಸಿದ್ದು, ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ವಸತಿ ಯೋಜನೆಗಳಲ್ಲಿ ಆಗಿರುವ ಬೇರೆ ಬೇರೆ ರೂಪದ ಕಹಿ ಘಟನೆಗಳು ಮರುಕಳಿಸಬಾರದು ಎಂದು ವಿಜಲ್ ಆ್ಯಪ್ ಮಾಡಿದ್ದೇವೆ ಎಂದರು.
ವಸತಿ ಯೋಜನೆ ಬಾಕಿ ಸಬ್ಸಿಡಿ ಬಿಡುಗಡೆಗೆ ಕ್ರಮ:ವಸತಿ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ಬಾಕಿ ಇದ್ದಲ್ಲಿ ಪರಿಶೀಲಿಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಫಲಾನುಭವಿಗಳ ಸಂಖ್ಯೆ ಮತ್ತು ಸಬ್ಸಿಡಿ ಹಣ ಬಿಡುಗಡೆಯಾಗದ ಕುರಿತು ಸದಸ್ಯ ಶ್ರೀಕಂಠೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2017-18ರಿಂದ 2019-20ನೇ ಸಾಲಿನವರೆಗೆ ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಿಗೆ ವಿವಿಧ ವಸತಿ ಯೋಜನೆಯಡಿ ಒಟ್ಟು 604386 ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾಮಗಾರಿ ಆದೇಶ ನೀಡಲಾಗಿದೆ. ಅದರಲ್ಲಿ 249747 ಮನೆಗಳು ಪೂರ್ಣಗೊಂಡಿವೆ. ನನ್ನ ಅವಧಿಯಲ್ಲಿ 1700 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಬಾಕಿ ಹಣ ಯಾರಿಗೆ ತಲುಪಿಲ್ಲ ಎನ್ನುವುದನ್ನು ಜಿಪಿಎಸ್ ಮೂಲಕ ಪರಿಶೀಲಿಸಿ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ ಎಂದರು.
ನಷ್ಟದ ಮೀನುಗಾರಿಕಾ ಘಟಕ ಲಾಭದತ್ತ:ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದಡಿಯಲ್ಲಿ ಬರುವ 9 ಘಟಕಗಳಲ್ಲಿ 3 ಘಟಕಗಳು ನಷ್ಟದಲ್ಲಿದ್ದು, ಅವುಗಳನ್ನು ಲಾಭದತ್ತ ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಮೀನುಗಾರಿಕಾ ಸಚಿವ ಎಸ್.ಅಂಗಾರ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, 9 ಘಟಕಗಳಲ್ಲಿ ಹೊನ್ನಾವರ, ಕಾರವಾರದ ಮೂರು ಘಟಕ ಮಾತ್ರ ನಷ್ಟದಲ್ಲಿವೆ. ನಷ್ಟದ ಘಟಕಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. 220 ನೌಕರರು ಈ ಘಟಕದಲ್ಲಿದ್ದು, 87 ಕಾಯಂ, 2 ಎರವಲು ಸೇವೆಯಡಿ ಬಂದಿದ್ದು, ಉಳಿದವರು ಹೊರಗುತ್ತಿಗೆ ಆಧಾರಿತವಾಗಿದ್ದಾರೆ. ಖಾಲಿ ಹುದ್ದೆ ಭರ್ತಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹೊಸದಾಗಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಅಧಿವೇಶನ ಮುಗಿದ ನಂತರ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿಯ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಖಾಲಿ ಹುದ್ದೆ ನೇಮಕಾತಿ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.