ಬೆಂಗಳೂರು:ಬಿಡಿಎಯಿಂದ ನಿವೇಶನ ಮಂಜೂರಾತಿಗಾಗಿ ಯಾವುದೇ ಪ್ರಭಾವ ಅಥವಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕಳೆದ ಹದಿನೇಳು ವರ್ಷಗಳ ಹಿಂದೆ ಬಿಡಿಎ ನಿಂದ ಮಂಜೂರಾದ ನಿವೇಶನವನ್ನು ವಿವಿಧ ಕಾರಣಗಳನ್ನು ನೀಡಿ ಮಂಜೂರಾತಿ ಮಾಡಿದ ಸಂಸ್ಥೆಯೇ (ಬಿಡಿಎ) ವಾಪಸ್ ಪಡೆದಿದೆ. ಮಂಜೂರಾತಿ ಪಡೆದ ನಿವೇಶನಕ್ಕಾಗಿ ಕಳೆದ ಹದಿನೇಳು ವರ್ಷಗಳಲ್ಲಿ ಮೂರು ಬಾರಿ ನೋಂದಣಿ ಸಂಬಂಧ ಶುಲ್ಕ ಪಾವತಿ ಮಾಡಿದ್ದರೂ, ಬಿಡಿಎ ನಿವೇಶನ ಪಡೆದು ಮನೆ ಕಟ್ಟಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಈ ಹಿಂದೆ, ಶಾಸಕರು ಹಾಗೂ ಸಚಿವರುಗಳಿಗೆ ಬಿಡಿಎ ನಿವೇಶನ ಹಂಚಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ಗೆ ಸಲ್ಲಿಸಲಾಗಿತ್ತು. ಅರ್ಜಿಯ ಸಂಬಂಧ ಮಂಜೂರಾತಿ ಪಡೆದ ನಿವೇಶನದ ಕುರಿತು ಪರಿಶೀಲಿಸಲು ರಾಜ್ಯ ಹೈಕೋರ್ಟ್ ನೇಮಿಸಿದ್ದ ನ್ಯಾಯಾಧೀಶ ಫಾರೂಖ್ ಸಮಿತಿ ಸಹ ಸ್ಥಿರೀಕರಿಸಿದ್ದು, ಬಿಡಿಎ ನಿಯಮಾವಳಿಗಳ ಅನುಸಾರವಾಗಿಯೇ ನನಗೆ ನಿವೇಶನ ಮಂಜೂರಾತಿಯಾಗಿದೆ ಎಂದು ಹೇಳಿದ್ದಾರೆ.