ಕರ್ನಾಟಕ

karnataka

By

Published : Nov 21, 2020, 3:44 AM IST

ETV Bharat / state

ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ: ಹಿಮಾಂಶು ಮಕರ್ ಚಾಂಪಿಯನ್

ಮೆಟ್ರೋ, ರಾಜಧಾನಿ ನಗರಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗಗಳ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನ ಅರಿವು ಪರೀಕ್ಷಿಸುವ ಹಾಗೂ ಐಟಿ ಕುರಿತು ಆಸಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗುತ್ತಿದೆ.

himanshu-makar-become-champion-in-rural-it-quiz
ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020ಯಲ್ಲಿ ನಡೆದ ಗ್ರಾಮೀಣ ಐಟಿ ರಸಪ್ರಶ್ನೆ ರಾಷ್ಟ್ರೀಯ ಫೈನಲ್​ನಲ್ಲಿ ರಾಜಸ್ಥಾನದ ಹಿಮಾಂಶು ಮಕರ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವಾಲಯದ ಸಹಭಾಗಿತ್ವದಲ್ಲಿ ಐಟಿ ದಿಗ್ಗಜ ಟಿಸಿಎಸ್ ಗ್ರಾಮೀಣ ಐಟಿ ರಸಪ್ರಶ್ನೆ ನಡೆಸುತ್ತದೆ. ರಾಜಸ್ಥಾನದ ಸೂರತ್‌ಗಢದ ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿ ಹಿಮಾಂಶು ಅಂತಿಮವಾಗಿ 350 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಜೊತೆಗೆ 1 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.

300 ಅಂಕ ಗಳಿಸಿ ಪೈಪೋಟಿ ನೀಡಿದ ಮಧ್ಯಪ್ರದೇಶದ ದೇವಾಸ್‌ನ ಎಕ್ಸಲೆನ್ಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮನ್ ಕುಮಾರ್ ರನ್ನರ್ ಅಪ್ ಆದರು. ಇವರಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು. ಈ ಅಂತಿಮ ಸುತ್ತಿನಲ್ಲಿ ಒಟ್ಟು 6 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸುಹಾಸ್ ಶೆಣೈ ಯು., ಗುಜರಾತ್‌ನ ಭಾವನಗರದ ಪರಸ್ ಗಥಾನಿ, ಛತ್ತೀಸ್‌ಗಢದ ರಾಯ್ಪುರದ ತೋಮನ್ ಸೇನ್ ಹಾಗೂ ಮಹಾರಾಷ್ಟ್ರದ ವಾರ್ಧಾದ ಸಾಕ್ಷಿ ಹಿಂದೂಜಾ ಫೈನಲ್‌ಗೇರಿದ್ದ ಇತರ ಸ್ಪರ್ಧಿಗಳಾಗಿದ್ದರು.

ದಾಖಲೆ ಸೇರಿದ ಕ್ವಿಜ್:

ಮೆಟ್ರೋ, ರಾಜಧಾನಿ ನಗರಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗಗಳ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನ ಅರಿವು ಪರೀಕ್ಷಿಸುವ ಹಾಗೂ ಐಟಿ ಕುರಿತು ಆಸಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕಳೆದ 21 ವರ್ಷಗಳಿಂದ ಈ ಕ್ವಿಜ್​ ನಡೆಯುತ್ತಿದ್ದು, ಈ ತನಕ 18 ದಶಲಕ್ಷ ಮಕ್ಕಳನ್ನು ತಲುಪಿದೆ. 8ರಿಂದ 12ನೇ ತರಗತಿಯ ತನಕದ ಮಕ್ಕಳಿಗೆ ವಿವಿಧ ಹಂತಗಳಲ್ಲಿ ನಡೆಸಲಾಗುವ ಈ ಸ್ಪರ್ಧೆಯು ಲಿಮ್ಕಾ ದಾಖಲೆಗೆ ಸೇರಿದೆ.

ಟಿಸಿಎಸ್‌ನ ಆಪರೇಶನ್ಸ್ ಮುಖ್ಯಸ್ಥ ಸುನಿಲ್ ದೇಶಪಾಂಡೆ ಅವರು ವರ್ಚುವಲ್ ಆಗಿ ಪ್ರಶಸ್ತಿ ವಿತರಣೆ ಮಾಡಿದರು. ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತ ಮಕ್ಕಳಿಗೆ ಶುಭ ಹಾರೈಸಿದರು. ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು.

ABOUT THE AUTHOR

...view details