ಕರ್ನಾಟಕ

karnataka

By

Published : Sep 2, 2020, 9:26 PM IST

Updated : Mar 13, 2022, 12:45 PM IST

ETV Bharat / state

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ ಆರೋಪ; ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್​

ಚಿಕ್ಕಬಳ್ಳಾಪುರದ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿ ಪಕ್ಕದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್​ ಜಾರಿ ಮಾಡಿದೆ.

ಬೆಂಗಳೂರು : ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೊಟೀಸ್​ ಜಾರಿ ಮಾಡಿದೆ.

ಚಿಕ್ಕಬಳ್ಳಾಪುರದ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿ ಪಕ್ಕದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳಾದ ಸ್ವಾಗತ್ ಹಾಗೂ ಲೋಕೇಶ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಗುರುರಾಜ್ ಜೋಷಿ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಹಾಗೂ ಗೌರಿಬಿದನೂರು ತಹಶೀಲ್ದಾರ್​ಗೆ ನೊಟೀಸ್​​ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ :

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿಯ ಸರ್ವೆ ನಂಬರ್ 106 ರಲ್ಲಿ 42.8 ಎಕರೆ ಭೂಮಿ ಸರ್ಕಾರದ ಗೋಮಾಳವಾಗಿದ್ದು, ದಾಖಲೆಗಳಲ್ಲಿ ಗೋಕಾಡು ಎಂದೇ ನಮೂದಿಸಲಾಗಿದೆ. ಆದರೆ ಇತ್ತೀಚೆಗೆ ಈ ಗುಡ್ಡದಲ್ಲಿ ಸ್ಥಳೀಯರಿಗೆ ತಿಳಿಯದಂತೆ ಸಣ್ಣ ತಿರುವುಗಳನ್ನು ಸೃಷ್ಟಿಸಲಾಗಿದೆ. ಅಲ್ಲದೇ, ಕೆಲ ಕ್ರಿಶ್ಚಿಯನ್ ವ್ಯಕ್ತಿಗಳು ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಆ ಜಾಗ ಕ್ರಿಶ್ಚಿಯನ್ನರಿಗೆ ಸೇರಿತ್ತು ಎಂಬಂತೆ ಕಟ್ಟು ಕಥೆಗಳನ್ನು ಹಬ್ಬಿಸುತ್ತಿದ್ದಾರೆ. ರಾತ್ರೋ ರಾತ್ರಿ ಚರ್ಚ್ ಕಟ್ಟುವ ಉದ್ದೇಶ ಹೊಂದಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಲ್ಲದೇ, ಗುಡ್ಡದ ಮೇಲೆ ಧಾರ್ಮಿಕ ಪ್ರವಚನಗಳನ್ನು ನಡೆಸಲು ಅತಿ ಹೆಚ್ಚು ಶಬ್ಧ ಹೊರಡಿಸುವ ಧ್ವನಿವರ್ಧಕಗಳನ್ನು ಬಳಸುತ್ತಿದ್ದಾರೆ. ಕಾರ್ಯಕ್ರಮದ ಬಳಿಕ ಊಟೋಪಚಾರಕ್ಕೆ ಬಳಸಿದ ಪ್ಲಾಸ್ಟಿಕ್ ತಟ್ಟೆ-ಲೋಟ ಮತ್ತಿತರ ತ್ಯಾಜ್ಯ ರಾಶಿಯಾಗಿ ಬಿದ್ದಿದ್ದು ಗುಡ್ಡವನ್ನು ಕಲುಷಿತಗೊಳಿಸುತ್ತಿದೆ. ಈ ತ್ಯಾಜ್ಯವನ್ನು ತೆರವು ಮಾಡಲು ವಾಹನಗಳು ಸಂಚರಿಸುವಷ್ಟು ರಸ್ತೆ ಇಲ್ಲವಾದ್ದರಿಂದ ಕಸದ ರಾಶಿ ಕೊಳೆಯುತ್ತಾ ಬಿದ್ದಿದೆ. ತ್ಯಾಜ್ಯ ಹಾಗೂ ಧ್ವನಿವರ್ಧಕಗಳಿಂದ ವನ್ಯ ಜೀವಿಗಳಿಗೂ ತೊಂದರೆಯಾಗುತ್ತಿದೆ. ಇದೇ ವಿಚಾರವಾಗಿ ಸ್ಥಳೀಯ ಹಿಂದೂಗಳೊಂದಿಗೆ ಅಸಮಾಧಾನವೂ ಉಂಟಾಗಿದೆ.

ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ, ಉಪವಿಭಾಗಾಧಿಕಾರಿಗೆ, ಗೌರಿಬಿದನೂರು ತಹಶೀಲ್ದಾರ್ ಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ 2020ರ ಜೂನ್ 3ರಂದು ಲಿಖಿತ ದೂರು ನೀಡಿ, ಕ್ರಮ ಜರುಗಿಸುವಂತೆ ಕೋರಿದ್ದೇವೆ. ಆದರೆ, ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಸರ್ಕಾರಿ ಗೋಮಾಳವಾಗಿರುವ ಗುಡ್ಡವನ್ನು ರಕ್ಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Last Updated : Mar 13, 2022, 12:45 PM IST

ABOUT THE AUTHOR

...view details