ಕರ್ನಾಟಕ

karnataka

ETV Bharat / state

ಅಗ್ರಿಗೋಲ್ಡ್ ಪ್ರಕರಣ: ಹೂಡಿಕೆದಾರರ ಹಿತರಕ್ಷಣೆಗೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ

ಕರ್ನಾಟಕವೂ ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಸಂಸ್ಥೆಯ ವಿರುದ್ಧ ವಂಚನೆ ಆರೋಪದಡಿ ದೂರುಗಳು ದಾಖಲಾಗಿವೆ. ಎಲ್ಲಾ ರಾಜ್ಯಗಳಲ್ಲಿನ ಪ್ರಕರಣಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ಒಂದೇ ನೋಡೆಲ್ ರಾಜ್ಯವಾಗಿ ಪರಿಗಣಿಸಿ ಒಂದೇ ನ್ಯಾಯಾಲಯ ಸ್ಥಾಪಿಸಲು ನಿರ್ದೇಶನ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

By

Published : Jul 6, 2021, 8:43 PM IST

High-court
ಹೈಕೋರ್ಟ್

ಬೆಂಗಳೂರು:ಹೂಡಿಕೆದಾರರಿಗೆ ವಂಚನೆ ಎಸಗಿರುವ ಆರೋಪ ಪ್ರಕರಣ ಸಂಬಂಧಿಸಿದಂತೆ ಅಗ್ರಿಗೋಲ್ಡ್ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ತಕ್ಷಣವೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ಅಗ್ರಿಗೋಲ್ಡ್ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರಾದ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಪೀಠಕ್ಕೆ ಮಾಹಿತಿ ನೀಡಿ, ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಸುಮಾರು 32 ಲಕ್ಷ ಹೂಡಿಕೆದಾರರಿದ್ದಾರೆ. ಇವರಲ್ಲಿ ರಾಜ್ಯದ 8.50 ಲಕ್ಷ ಹೂಡಿಕೆದಾರರು ಕಂಪನಿಯ ವಿವಿಧ ಶಾಖೆಗಳಲ್ಲಿ ಹಣ ತೊಡಗಿಸಿದ್ದಾರೆ. ತೆಲಂಗಾಣ ರಾಜ್ಯದಲ್ಲೂ ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆ ತೆಲಂಗಾಣ ಸರ್ಕಾರ ಸಂಸ್ಥೆಗೆ ಸೇರಿದ ಒಟ್ಟು 290 ಆಸ್ತಿಗಳನ್ನು ಜಪ್ತಿ ಮಾಡಿದೆ. ಇವುಗಳಲ್ಲಿ ಕರ್ನಾಟಕದ ಆಸ್ತಿಗಳೂ ಸೇರಿವೆ ಎಂದು ವಿವರಿಸಿದರು.

ಕರ್ನಾಟಕವೂ ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಸಂಸ್ಥೆಯ ವಿರುದ್ಧ ವಂಚನೆ ಆರೋಪದಡಿ ದೂರುಗಳು ದಾಖಲಾಗಿವೆ. ಅಲ್ಲಿಯೂ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಈ ಹಿನ್ನೆಲೆ, ಎಲ್ಲಾ ರಾಜ್ಯಗಳಲ್ಲಿನ ಪ್ರಕರಣಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ಒಂದೇ ನೋಡೆಲ್ ರಾಜ್ಯವಾಗಿ ಪರಿಗಣಿಸಿ ಒಂದೇ ನ್ಯಾಯಾಲಯ ಸ್ಥಾಪಿಸಲು ನಿರ್ದೇಶನ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಶೀಘ್ರದಲ್ಲೇ ಸುಪ್ರೀಂಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿವರಣೆ ಪರಿಗಣಿಸಿದ ಪೀಠ, ಕರ್ನಾಟಕದಲ್ಲಿ 8.50 ಲಕ್ಷಕ್ಕೂ ಅಧಿಕ ಹೂಡಿಕೆದಾರರಿದ್ದಾರೆ. ಆ ಹೂಡಿಕೆದಾರರ ಹಿತರಕ್ಷಣೆ ಮುಖ್ಯ. ಹೀಗಾಗಿ, ಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರ ಕೂಡಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಎಂದು ಆಗಸ್ಟ್ 2ನೇ ವಾರಕ್ಕೆ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ರಾಜ್ಯದಲ್ಲಿ SSLC ಪರೀಕ್ಷೆಗೆ ಸಕಲ ಸಿದ್ಧತೆ: ಶಿಕ್ಷಣ ಸಚಿವ ಸುರೇಶ್ ಕುಮಾರ್

ABOUT THE AUTHOR

...view details