ಕರ್ನಾಟಕ

karnataka

By

Published : Feb 14, 2022, 3:14 PM IST

ETV Bharat / state

ಏ.1ರಿಂದಲೇ ಒಂದು ಕೆಜಿ ಅಕ್ಕಿ ಉಚಿತ.. ರಾಜ್ಯ ಸರ್ಕಾರ ಘೋಷಣೆ.. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ

ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಪುನರ್ ನಾಮಕರಣ ಮಾಡಿ ಆದೇಶ ಹೊರಡಿಸಲಾಗಿದೆ..

Governer speech
ರಾಜ್ಯಪಾಲರ ಭಾಷಣ

ಬೆಂಗಳೂರು :ಏಪ್ರಿಲ್ ಒಂದರಿಂದ ರಾಜ್ಯದ ಎಲ್ಲ ಪಡಿತರ ಚೀಟಿದಾರರಿಗೆ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ಘೋಷಿಸಿದೆ.

ರಾಜ್ಯಪಾಲರಿಗೆ ಹೂಗುಚ್ಛ ನೀಡಿದ ಸಿಎಂ

ವಿಧಾನಸಭೆಗೆ ಇಂದು ಬೆಳಗ್ಗೆ 11 ಗಂಟೆಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಮೊದಲು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿ ನಂತರ ಉಭಯ ಸದನಗಳನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿ ಅಧಿವೇಶನಕ್ಕೆ ಚಾಲನೆ ನೀಡಿದರು.

ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆದ್ಯತಾ ಪಡಿತರ ಚೀಟಿಯನ್ನು ಹೊಂದಿದ ಪ್ರತಿ ಕುಟುಂಬಕ್ಕೆ 5 ಕೆಜಿ ಧಾನ್ಯವನ್ನು ಪ್ರತಿ ತಿಂಗಳು ಹಂಚಲಾಗುತ್ತಿದೆ. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಆದೇಶಿಸಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದರು.

ಸರ್ಕಾರವು ಸುಸ್ಥಿರ ಕೃಷಿ ಕಾರ್ಯಕ್ರಮವನ್ನು ಜಾರಿಗೊಳಿಸಲು, ಪ್ರಾಥಮಿಕ ಕೃಷಿ ಉತ್ಪನ್ನಗಳ ಗರಿಷ್ಠ ಬಳಕೆಯ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಮಾನವ ಸಂಪನ್ಮೂಲ ಮತ್ತು ಮೌಲ್ಯಾಧಾರಿತ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ದ್ವಿತೀಯ ಕೃಷಿ ನಿರ್ದೇಶನಾಲಯವನ್ನು ಸೃಜಿಸಿದೆ.

ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಪುನರ್ ನಾಮಕರಣ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಸಚಿವಾಲಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನದಲ್ಲಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧೀನಕ್ಕೊಳಪಡಿಸಿ ಕಲಬುರಗಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ನೀರಾವರಿ ಕ್ರಾಂತಿ ಮಾಡಲು 1500 ಕೋಟಿ ರೂ. ವೆಚ್ಚದಲ್ಲಿ 55 ಅಣೆಕಟ್ಟುಗಳನ್ನು ಪುನಶ್ವೇತನಗೊಳಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಎಲ್ಲ ಗ್ರಾಮಗಳ ಜನರಿಗೆ ನಲ್ಲಿ ನೀರು ಒದಗಿಸುವುದಾಗಿ ಘೋಷಿಸಿದೆ. ಕೊರೊನಾ ಸಂಕಟದ ನಡುವೆಯೂ ತಮ್ಮ ಸರ್ಕಾರ ಗುರುತರ ಸಾಧನೆ ಮಾಡಿದೆ ಎಂದು ಸಮರ್ಥಿಸಿಕೊಂಡರು.

ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಕಳೆದೊಂದು ವರ್ಷದಲ್ಲಿ ಕೊರೊನಾ ಸೋಂಕು ತಡೆಗಟ್ಟಲು 827.37 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದ್ದು, ಅದೇ ಕಾಲಕ್ಕೆ ಹಮಾಲರು, ಟೈಲರ್‌ಗಳು, ಮೆಕ್ಯಾನಿಕ್‍ಗಳು, ಅಗಸರು, ಚಿಂದಿ ಆಯುವವರು ಸೇರಿದಂತೆ ಒಟ್ಟು 2.26 ಲಕ್ಷ ಅಸಂಘಟಿತ ಕಾರ್ಮಿಕರಿಗೆ 237 ಕೋಟಿ ರೂ.ಗಳ ನೆರವು ನೀಡಲಾಗಿದೆ ಎಂದರು.

ಕೊರೊನಾ ಸಂಕಟದ ನಡುವೆಯೂ ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಭಾರತಕ್ಕೆ ಬಂದ ವಿದೇಶಿ ನೇರ ಬಂಡವಾಳ ಹೂಡಿಕೆಯ ಪೈಕಿ ಶೇ.48ರಷ್ಟು ಹಣ ಕರ್ನಾಟಕಕ್ಕೆ ಹರಿದು ಬಂದಿದೆ ಎಂದು ಹೇಳಿದರು.

ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ಗ್ರಾಮಗಳ ಜನರಿಗೆ ನಲ್ಲಿ ನೀರು ಒದಗಿಸಲು ತೀರ್ಮಾನಿಸಲಾಗಿದೆ. ಮೊದಲ ವರ್ಷ 27.14 ಲಕ್ಷ ಮತ್ತು ಎರಡನೇ ವರ್ಷ 17.45 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕವನ್ನು ಒದಗಿಸಲಾಗುವುದು ಎಂದರು.

ಸಮಗ್ರ ಅಭಿವೃದ್ದಿಗೆ ತೀರ್ಮಾನ

ಅಮೃತ ಗ್ರಾಮ ಪಂಚಾಯತ್‌ ಯೋಜನೆಯಡಿ 750 ಗ್ರಾಮಗಳನ್ನು ಆಯ್ಕೆ ಮಾಡಿ ಈ ಪಂಚಾಯತ್‌ಗಳ ಸಮಗ್ರ ಅಭಿವೃದ್ದಿ ಮಾಡಲು ತೀರ್ಮಾನಿಸಲಾಗಿದೆ. ಯೋಜನೆಯ ಸಮರ್ಪಕ ಅನುಷ್ಠಾನವಾದರೆ ಒಂದು ಗ್ರಾಮ ಪಂಚಾಯತ್‌ಗೆ ಪ್ರೋತ್ಸಾಹ ಧನದ ರೂಪದಲ್ಲಿ ತಲಾ 25 ಲಕ್ಷ ರೂಪಾಯಿಗಳನ್ನು ನೀಡಲು 187.50 ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ ಎಂದರು.

ಹಾಲಿನ ಉತ್ಪಾದನೆಯಲ್ಲಿ 11ನೇ ಸ್ಥಾನದಲ್ಲಿರುವ ರಾಜ್ಯ, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನದಲ್ಲಿದೆ ಮತ್ತು ಮಾಂಸ ಉತ್ಪಾದನೆಯಲ್ಲಿ 10ನೇ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ ಪೈಕಿ ಶೇ.3.58ರಷ್ಟಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸವಿದೆ ಎಂದರು.

ರಾಜ್ಯದ ಹದಿನಾಲ್ಕು ಜಿಲ್ಲೆಗಳ ಗ್ರಾಮವಾಸಿಗಳಿಗೆ ಅವರ ವಾಸಸ್ಥಳದ ಆಸ್ತಿ ಪತ್ರವನ್ನು ನೀಡುವ ಸ್ವಾಮಿತ್ವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

ವಿವಿಧ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಈಗ ಪಿಂಚಣಿಯನ್ನು ತಲುಪಿಸುವ ಕೆಲಸವಾಗುತ್ತಿದೆ. ಅದೇ ಕಾಲಕ್ಕೆ ಮೃತಪಟ್ಟ, ವಲಸೆ ಹೋದ ಮತ್ತು ಅನರ್ಹರಾದ 3.15 ಲಕ್ಷ ಮಂದಿಯನ್ನು ಗುರುತಿಸಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂದರು.

ಹೀಗೆ ಮೂರು ಲಕ್ಷಕ್ಕೂ ಅಧಿಕ ಮಂದಿಯನ್ನು ಪಟ್ಟಿಯಿಂದ ಹೊರಗಿಟ್ಟ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ ಮುನ್ನೂರಾ ಎಪ್ಪತ್ತೆಂಟು ಕೋಟಿ ರೂಪಾಯಿಗಳ ಉಳಿತಾಯವಾಗಿದೆ ಎಂದು ಅವರು ನುಡಿದರು.

2021-22ನೇ ಸಾಲಿನಲ್ಲಿ ಅಕಾಲಿಕ ಮಳೆ ಮತ್ತು ನೆರೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಕುಟುಂಬಗಳು ಹಾನಿಗೆ ಒಳಗಾದವು. ಹೀಗಾಗಿ, ಪ್ರತಿ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಒದಗಿಸಲು 85.86 ಕೋಟಿ ರೂಪಾಯಿ ವೆಚ್ಚ ಮಾಡಲಾಯಿತು ಎಂದರು.

ಇದೇ ರೀತಿ ಹಾನಿಗೊಳಗಾದ ಮನೆಗಳ ದುರಸ್ಥಿಗೆ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ನಿಗದಿ ಮಾಡಿ, ಒಟ್ಟು 400.52 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಒಂದು ಲಕ್ಷ ರೂಪಾಯಿಗಳವರೆಗೆ ಪರಿಹಾರ

ನೆರೆಯಿಂದ ಹಾನಿಗೊಳಗಾದ 18.02 ಲಕ್ಷ ರೈತರಿಗೆ 1252.80 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವವರು ಕೋವಿಡ್‍ನಿಂದ ಮೃತಪಟ್ಟರೆ ತಲಾ ಒಂದು ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಪೈಕಿ ತಲಾ ಐವತ್ತು ಸಾವಿರ ರೂಪಾಯಿಗಳನ್ನು ಈಗಾಗಲೇ ಪಾವತಿಸಲಾಗಿದೆ ಎಂದರು.

ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರು ಅಭ್ಯಸಿಸಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು 16.88 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳಿಗೆ 1469.26 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.

ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಅನುಷ್ಟಾನಗೊಳಿಸಿದ್ದು, ಇದಕ್ಕೆ ಪೂರಕವಾಗಿ ಪಠ್ಯ ಕ್ರಮವನ್ನು ಪರಿಷ್ಕರಿಸಲಾಗಿದೆ. ರೈತರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ 5.2 ಲಕ್ಷ ಮಕ್ಕಳ ಬ್ಯಾಂಕ್ ಖಾತೆಗಳಿಗೆ 126 ಕೋಟಿ ರೂಪಾಯಿಗಳನ್ನು ಹಾಕಲಾಗಿದೆ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ 18,569 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಪೈಕಿ 10,534 ಕೊಳವೆ ಬಾವಿಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು. ನವೀಕರಿಸಬಹುದಾದ ಇಂಧನ ಮೂಲಗಳಿಂದ ಒಟ್ಟು 244.55 ಮೆಗಾ ವ್ಯಾಟ್ ವಿದ್ಯುತ್‍ ಅನ್ನು ಉತ್ಪಾದಿಸಲಾಗಿದೆ ಎಂದ ಅವರು, ಈ ಪೈಕಿ 116.45 ಮೆಗಾವ್ಯಾಟ್ ಸೌರ ವಿದ್ಯುತ್, 128.10 ಮೆಗಾವ್ಯಾಟ್ ಪವನ ವಿದ್ಯುತ್‍ ಸೇರಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳನ್ನು ರೈಲಿನಲ್ಲಿ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡುವ ಕಿಸಾನ್ ರೈಲ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಅಣೆಕಟ್ಟು ಪುನಶ್ಚೇತನ

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನಯಡಿ 59.13 ಲಕ್ಷ ಜನರಿಗೆ ಕೆಲಸ ಒದಗಿಸಲಾಗಿದೆ. ಒಟ್ಟು 3769.95 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ರಾಜ್ಯಪಾಲರು ವಿವರ ನೀಡಿದರು. ಜಲಸಂಪನ್ಮೂಲ ಇಲಾಖೆಯು ವಿಶ್ವಬ್ಯಾಂಕ್ ನೆರವಿನ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಎರಡು ಮತ್ತು 3ನೇ ಹಂತದಡಿ 1500 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 55 ಅಣೆಕಟ್ಟುಗಳನ್ನು ಪುನಶ್ಚೇತನಗೊಳಿಸಲಿದೆ ಎಂದು ಅವರು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 526.256 ಮೀಟರ್‌ಗಳಿಗೆ ಹೆಚ್ಚಿಸುವುದರಿಂದ ಇಪ್ಪತ್ತು ಹಳ್ಳಿಗಳು ಮುಳುಗಡೆಯಾಗಲಿವೆ ಎಂದ ಅವರು, ಮುಳುಗಡೆಯಾಗುವ ಗ್ರಾಮಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕಾಗಿ 2500 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದರು.

ಕೊಪ್ಪಳ, ಯಲಬುರ್ಗ ತಾಲೂಕುಗಳ ಕೆರೆಗಳಿಗೆ ತುಂಗಭದ್ರಾ ಮತ್ತು ಕೃಷ್ಣಾ ನದಿಯಿಂದ ಕುಡಿಯುವ ನೀರು ತುಂಬಿಸುವ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು. ಉದ್ಯಮಿಯಾಗಿ, ಉದ್ಯೋಗದಾತರಾಗಿ ಯೋಜನೆಯಡಿ ರಾಜ್ಯಾದ್ಯಂತ ಉದ್ಯಮಿಗಳಿಗೆ ಉತ್ತೇಜನ ನೀಡಲು ಬೆಂಗಳೂರು-ಮುಂಬೈ ಹಾಗೂ ಬೆಂಗಳೂರು-ಚೆನ್ನೈ ಕಾರಿಡಾರ್​ಗಳಲ್ಲಿ ಟೌನ್ ಶಿಪ್​ಗಳನ್ನು ನಿರ್ಮಿಸಲಾಗುವುದು ಎಂದರು.

ಖನಿಜ ನೀತಿಯನ್ನು ಅಂತಿಮಗೊಳಿಸುವ ಸಲುವಾಗಿ ವಿಷಯ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ಸಮಿತಿಯನ್ನು ನನ್ನ ಸರ್ಕಾರ ರಚಿಸಿದೆ. ಗಣಿಬಾಧಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಮತ್ತು ಪ್ರದೇಶಗಳ ಅಭಿವೃದ್ದಿಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ಸಂಗ್ರಹವಾಗುವ ನಿಧಿಯನ್ನು ಬಳಸಲಾಗುತ್ತಿದೆ ಎಂದರು.

ಆರ್ಥಿಕ ಹೊರೆಯಿಂದ ರಕ್ಷಣೆ

ರೈತರ ಮೇಲೆ ಪರೋಕ್ಷವಾಗಿ ಆಗುತ್ತಿದ್ದ ಆರ್ಥಿಕ ಹೊರೆಯಿಂದ ರಕ್ಷಿಸಲು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ವಿಧಿಸಿದ್ದ ಶುಲ್ಕವನ್ನು 1.5 ರಿಂದ 0.6ಕ್ಕೆ ಇಳಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ನುಡಿದರು. ಏಪ್ರಿಲ್ 1ರಿಂದ ರಾಜ್ಯದ ಬಿಪಿಎ‍ಲ್ ಪಡಿತರ ಚೀಟಿದಾರರಿಗೆ ಈಗಾಗಲೇ ಒದಗಿಸಲಾಗುತ್ತಿರುವ ಐದು ಕೆಜಿ ಜತೆ ಒಂದು ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದ ಅವರು, ಇದು ಉಚಿತವಾಗಿ ಪೂರೈಕೆಯಾಗಲಿದೆ ಎಂದರು.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ 5500 ಕೋಟಿ ರೂ. ವೆಚ್ಚದ ಐದನೇ ಹಂತದ ಕಾವೇರಿ ಯೋಜನೆಯಿಂದ 775 ದಶಲಕ್ಷ ಲೀಟರ್ ಹೆಚ್ಚುವರಿ ನೀರು ದೊರೆಯಲಿದೆ ಎಂದು ಅವರು ನುಡಿದರು. ಸೇವಾ ಸಿಂಧು ಯೋಜನೆಯು ಕರ್ನಾಟಕ ಸರ್ಕಾರದ ಎಲ್ಲ ಸರ್ಕಾರಿ ಇಲಾಖೆಗಳ ಸೇವೆಯನ್ನು ಆನ್ ಲೈನ್ ಮುಖಾಂತರ ವಿವಿಧ ನಾಗರೀಕ ಸೇವಾ ಕೇಂದ್ರಗಳಾದ ಗ್ರಾಮ ಒನ್, ಬೆಂಗಳೂರು ಒನ್,ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಾಗರೀಕರಿಗೆ ನೀಡಲಿದೆ ಎಂದರು. ಸರ್ಕಾರಿ ಸೇವೆಗಳು ನಗದು ಮತ್ತು ಕಾಗದ ರಹಿತವಾಗಿ ಫಲಾನುಭವಿಗಳಿಗೆ ದೊರೆಯಲಿದೆ ಎಂದು ಅವರು ವಿವರ ನೀಡಿದರು.

ಪ್ರಸಕ್ತ ಸಾಲಿನಲ್ಲಿ ವಸತಿ ಯೋಜನೆಯಡಿ ಐದು ಲಕ್ಷ ಮನೆಗಳನ್ನು ನಿರ್ಮಿಸಿ ಹಂಚಲಾಗುವುದು. ಇದರಲ್ಲಿ ಗ್ರಾಮೀಣ ಪ್ರದೇಶಗಳಿಗೆ ನಾಲ್ಕು ಲಕ್ಷ ಮತ್ತು ನಗರ ಪ್ರದೇಶಗಳಿಗೆ ಒಂದು ಲಕ್ಷ ಮನೆಗಳನ್ನು ನೀಡಲಾಗುವುದು ಎಂದು ಹೇಳಿದರು. ಜನಪ್ರತಿನಿಧಿಗಳು ಮುಂಚೂಣಿಯಲ್ಲಿ ಪಾಲ್ಗೊಂಡು ಸರ್ಕಾರದ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ತಲುಪಿಸುವ ಕಾರ್ಯ ಮಾಡುವಂತೆ ರಾಜ್ಯಪಾಲರು ಮನವಿ ಮಾಡಿಕೊಂಡರು. ರಾಜ್ಯಪಾಲರು ಭಾಷಣದ ಪ್ರತಿಯನ್ನು 45 ನಿಮಿಷದಲ್ಲಿ ಓದಿ ಮುಗಿಸಿದರು.

ಓದಿ:ರಾಜ್ಯಪಾಲರದ್ದು ಕಟ್‌ ಅಂಡ್‌ ಪೇಸ್ಟ್‌ ಭಾಷಣ : ಶಾಸಕ ಹೆಚ್ ಕೆ ಪಾಟೀಲ್

ABOUT THE AUTHOR

...view details