ಕರ್ನಾಟಕ

karnataka

ETV Bharat / state

ಸಿರಿಧಾನ್ಯ ಉತ್ಪಾದನೆ ಹೆಚ್ಚಿಸಲು ಹೊಸ ಕಾರ್ಯಕ್ರಮ ರೂಪಿಸಲು ಸರ್ಕಾರ ಚಿಂತನೆ

ರಾಜ್ಯದಲ್ಲಿ ಸುಮಾರು 29 ಸಾವಿರ ಹೆಕ್ಟೇರ್​ನಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ರಾಜ್ಯ ಸರ್ಕಾರ ಹೆಕ್ಟೇರ್​ಗೆ 10 ಸಾವಿರ ರೂ.ಗಳಂತೆ 12,750 ಹೆಕ್ಟೇರ್​ಗೆ 12.50 ಕೋಟಿ ರೂ.ನೆರವು ನೀಡುತ್ತದೆ. ಕೊರೊನಾ ಸೋಂಕಿನಿಂದಾಗಿ ನೂರಾರು ಯುವಕರು ಕೃಷಿಯ ಕಡೆ ಮುಖಮಾಡಿದ್ದು, ಈ ಸಂದರ್ಭದಲ್ಲೇ ಇಡೀ ದೇಶದಲ್ಲೇ ಹೆಚ್ಚಿನ ಉತ್ಪಾದನೆಯಾಗುವ ಕರ್ನಾಟಕದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವ ಕಾಲ ಹತ್ತಿರವಾಗುತ್ತಿದೆ.

By

Published : Jun 17, 2021, 10:24 PM IST

government-is-thinking-of-setting-up-a-new-program-to-increase-millet
ಸಿರಿಧಾನ್ಯ ಉತ್ಪಾದನೆ ಹೆಚ್ಚಿಸಲು ಹೊಸ ಕಾರ್ಯಕ್ರಮ ರೂಪಿಸಲು ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗೆ ಹೆಚ್ಚು ಪ್ರಾಮುಖ್ಯತೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಸಿರಿಧಾನ್ಯ ವರ್ಷ ಘೋಷಣೆಯ ಲಾಭ ಪಡೆಯಲು ಅಣಿಯಾಗುತ್ತಿದೆ. ಬಜೆಟ್​ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡದಿದ್ದರೂ ವಿಶೇಷ ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯ ಉತ್ಪಾದನೆ ಹೆಚ್ಚಿಸುವ ಉದ್ದೇಶ ಸರ್ಕಾರ ಹೊಂದಿದೆ.

ಸಿರಿಧಾನ್ಯಕ್ಕೆ ಇತಿಹಾಸವೇ ಇದೆ. ಪೂರ್ವಜರ ಆಹಾರವೂ ಇದೇ ಆಗಿತ್ತು. ಸಿರಿಧಾನ್ಯಗಳೆಂದರೆ ನಮಗೆ ಗೊತ್ತಿರುವಂತೆ ಸಜ್ಜೆ, ರಾಗಿ, ನವಣೆ, ಸಾವೆ, ಬರಗು, ಊದಲು, ಕೊರಲೆ, ಹಾರಕ, ಜೋಳವಾಗಿದೆ. ಸಿರಿಧಾನ್ಯಗಳನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಗಳನ್ನು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿಯೂ ಬೆಳೆಯಬಹುದು.

ಈ ಸಿರಿಧಾನ್ಯಗಳಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇವು ಪ್ರಾಣಿಗಳಿಗೂ ಉತ್ತಮ ಆಹಾರವಾಗಿವೆ. ಜನರಲ್ಲಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್‌ನಂತ ರೋಗಗಳ ತಡೆಗೆ ಸಿರಿಧಾನ್ಯಗಳ ಬಳಕೆ ಉತ್ತಮವಾಗಿವೆ.

ರಾಜ್ಯದಲ್ಲಿ ಬೆಳೆಯುವುದೆಷ್ಟು?

ರಾಜ್ಯದಲ್ಲಿ ಸುಮಾರು 29 ಸಾವಿರ ಹೆಕ್ಟೇರ್​ನಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ರಾಜ್ಯ ಸರ್ಕಾರ ಹೆಕ್ಟೇರ್​ಗೆ 10 ಸಾವಿರ ರೂ.ಗಳಂತೆ 12,750 ಹೆಕ್ಟೇರ್​ಗೆ 12.50 ಕೋಟಿ ರೂ.ನೆರವು ನೀಡುತ್ತದೆ. ಕೊರೊನಾ ಸೋಂಕಿನಿಂದಾಗಿ ನೂರಾರು ಯುವಕರು ಕೃಷಿಯ ಕಡೆ ಮುಖಮಾಡಿದ್ದು, ಈ ಸಂದರ್ಭದಲ್ಲೇ ಇಡೀ ದೇಶದಲ್ಲೇ ಹೆಚ್ಚಿನ ಉತ್ಪಾದನೆಯಾಗುವ ಕರ್ನಾಟಕದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವ ಕಾಲ ಹತ್ತಿರವಾಗುತ್ತಿದೆ.

ರಾಜ್ಯ ಸರ್ಕಾರ 2017ರಿಂದ ನಡೆಸಿದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆ 2023ನ್ನು 'ಸಿರಿಧಾನ್ಯಗಳ ವರ್ಷ'ವೆಂದು ಘೋಷಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಸಾವಯವ, ಸಿರಿಧಾನ್ಯ ಉತ್ಪನ್ನ ಹಾಗೂ ಹೆಚ್ಚು ಪೌಷ್ಟಿಕಾಂಶ ಇರುವ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸಿಗುವಂತಾಗುತ್ತದೆ. ಆ ಮೂಲಕ ರೈತರ ಆದಾಯವೂ ಹೆಚ್ಚುತ್ತದೆ ಎಂಬ ವಿಶ್ವಾಸ ಮೂಡಿದೆ.

ಸಿರಿಧಾನ್ಯಗಳ ಮಹತ್ವವೇನು?

ದಿನನಿತ್ಯ ಬಳಸುವ ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಪ್ರೋಟಿನ್‌, ಕೊಬ್ಬು, ಸುಣ್ಣ, ನಾರು, ಖನಿಜ ಮತ್ತು ರಂಜಕ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಸಿರಿಧಾನ್ಯಗಳಲ್ಲಿ ನಾರಿನ ಅಂಶ ಶೇ.1ರಿಂದ 9ರಷ್ಟು ಇದ್ದು, ದೇಹದಲ್ಲಿರುವ ಕೊಲೆಸ್ಟಾಲ್‌, ಟ್ರೈಗ್ಲಿಸಾರಾಯ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯಕಾರಿಯಾಗಿದೆ.

ಹೃದಯ ರೋಗ, ಹೆಚ್ಚಿನ ತೂಕ ಸಮಸ್ಯೆಯನ್ನು ನಿವಾರಿಸುತ್ತದೆ. ಆದ್ದರಿಂದ ನವಣೆ ಉತ್ಪನ್ನಗಳು ಸಕ್ಕರೆ ರೋಗಿಗಳಿಗೆ ಅವಶ್ಯಕವಾಗಿವೆ. ರಾಗಿಯಲ್ಲಿ ಕೂಡ ಹೆಚ್ಚಿನ ಸುಣ್ಣದಂಶ, ರಂಜಕ ಇರುವುದರಿಂದ ಮೂಳೆ, ಹಲ್ಲು ಗಟ್ಟಿಯಾಗುತ್ತವೆ. ಅದೇ ರೀತಿ ಸಜ್ಜೆ, ಸಾಸುವೆಯಲ್ಲಿ ಹೆಚ್ಚಿನ ಕಬ್ಬಿಣ ಅಂಶವಿದ್ದು ರಕ್ತ ಹೀನತೆ ತಡೆಗಟ್ಟುತ್ತದೆ.

ಸಿರಿಧಾನ್ಯಕ್ಕೆ ಮನ್ನಣೆ ?

ಹಿಂದಿನ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಸಿರಿಧಾನ್ಯ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶ ದೊರಕಿಸುವ ಪ್ರಯತ್ನ ಆರಂಭಿಸಿದ್ದರು. ಹಾಗಾಗಿ 2017ರಲ್ಲಿ ಬೆಂಗಳೂರಿನಲ್ಲಿ ಸಿರಿಧಾನ್ಯ ಉತ್ಪನ್ನಗಳ ಅಂತಾರಾಷ್ಟ್ರೀಯ ಮೇಳ ನಡೆಸಿದರು. ಕೇಂದ್ರ ಸರ್ಕಾರದ ಮೂಲಕ ವಿಶ್ವಸಂಸ್ಥೆಯ ಗಮನ ಸೆಳೆದರು.

ಅಲ್ಲದೆ ವಿಶ್ವಸಂಸ್ಥೆಯ ಅಂಗವಾದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಿರಿಧಾನ್ಯಗಳ ಬಗ್ಗೆ ಚರ್ಚೆ ನಡೆಸಿದ್ದರು. ವಿಶ್ವಸಂಸ್ಥೆ ಇತ್ತೀಚಿಗೆ ನಡೆಸಿದ ಸಭೆಯಲ್ಲಿ ರಾಜ್ಯದ ಬೇಡಿಕೆಗೆ ಮನ್ನಣೆ ನೀಡಿದೆ. ಸುಮಾರು 70 ದೇಶಗಳು 2023ನ್ನು ಸಾವಯವ ಹಾಗೂ ಸಿರಿಧಾನ್ಯ ವರ್ಷವೆಂದು ಘೋಷಿಸುವುದಕ್ಕೆ ಸಮ್ಮತಿ ನೀಡಿವೆ. ಇನ್ನು ಮುಂದೆ ಸಿರಿಧಾನ್ಯಗಳು ಅಂತಾರಾಷ್ಟ್ರೀಯ ಸ್ಥಾನ ಪಡೆಯಲಿವೆ. ರಾಜ್ಯದಲ್ಲಿ ಸರಿಯಾದ ಮಾರುಕಟ್ಟೆ ಸೌಲಭ್ಯ ಇಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಾರುಕಟ್ಟೆ ಸೌಲಭ್ಯ ಸಿಗುವ ವಿಶ್ವಾಸ ಸರ್ಕಾರದ್ದಾಗಿದೆ.

ರಾಜ್ಯದ ಕೃಷಿ ಉತ್ಪನ್ನ ಮಾರಾಟ ಮಾಡಲು ಆನ್​​​ಲೈನ್​ ವ್ಯವಸ್ಥೆಯೊಂದರ ಅಗತ್ಯವಿದೆ. ರೈತರ ಗುಂಪುಗಳನ್ನು ಸೇರಿಸಿ ಆನ್​ಲೈನ್​ ವ್ಯವಸ್ಥೆ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ರಾಜ್ಯದಲ್ಲಿ ಶೇ.30 ರೈತರು ಮಾತ್ರ ಮುಖ್ಯ ಮಾರುಕಟ್ಟೆಯಲ್ಲಿ ವಹಿವಾಟು ಮಾಡುತ್ತಾರೆ. ಶೇ.43 ರೈತರು ಸಣ್ಣ ಮಾರುಕಟ್ಟೆ ಅವಲಂಬಿಸಿದ್ದಾರೆ. ಶೇ.17 ರೈತರಿಗೆ ಮಾರುಕಟ್ಟೆ ಸೌಲಭ್ಯವೇ ಸಿಗುತ್ತಿಲ್ಲ ಎಂಬ ಮಾಹಿತಿ ಇದೆ.

ಅನುಕೂಲ ಏನು?

ಹವಾಮಾನ ಬದಲಾವಣೆಯಿಂದ ಸಿರಿಧಾನ್ಯಗಳ ಬೆಳೆಯ ಪ್ರಮಾಣ ಹೆಚ್ಚಾಗುತ್ತದೆ. ಅತ್ಯಂತ ಕಡಿಮೆ ನೀರಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡಬಹುದು ಅಂತಾರಾಷ್ಟ್ರೀಯ ಮಾರುಕಟ್ಟೆ ಸಿಗುತ್ತದೆ. ಆಹಾರ ಭದ್ರತೆಯಲ್ಲಿಯೂ ಸಿರಿಧಾನ್ಯಗಳಿಗೆ ಅವಕಾಶ ಸಿಗುತ್ತದೆ‌. ಉತ್ತಮ ಬೆಲೆ ಸಿಕ್ಕಿದರೆ ರೈತರ ಆದಾಯ ಸಹ ದ್ವಿಗುಣಗೊಳ್ಳುತ್ತದೆ.

ಓದಿ:ಮಹಾಮಾರಿ ತೊಲಗಿಸಲು ನೆಲಮಂಗಲದ ಮಲ್ಲಾಪುರ ಗ್ರಾಮಸ್ಥರಿಂದ ದೇವರ ಉತ್ಸವ: ಎಲ್ಲಿದೆ ಕೋವಿಡ್​​ ನಿಯಮ?

ABOUT THE AUTHOR

...view details