ಕರ್ನಾಟಕ

karnataka

By

Published : Feb 28, 2021, 2:19 PM IST

ETV Bharat / state

ಅಲ್ಪಸಂಖ್ಯಾತರ ಮುನಿಸಿಗೆ ಕಾರಣವಾಗುತ್ತಿದೆ ಸಿದ್ದರಾಮಯ್ಯ ನಡೆ: ರೆಬಲ್ ಆದ್ರಾ ಮತ್ತೋರ್ವ ಆಪ್ತ?

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾಜಿ ಕೇಂದ್ರ ಸಚಿವ ಜಮೀರ್ ಅಹ್ಮದ್​ಗೆ ಹೆಚ್ಚಿನ ಬೆಂಬಲ ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲದೆ ತಾವು ತೆರಳಿದ ಕಡೆಯಲ್ಲ ಜೊತೆಯಲ್ಲೇ ಕರೆದೊಯ್ಯುತ್ತ ಅವರನ್ನು ಬೆಳೆಸುತ್ತಿದ್ದಾರೆ. ಸಿದ್ದರಾಮಯ್ಯನವರ ಈ ನಡೆ ಬಗ್ಗೆ ಕೆಲ ಕಾಂಗ್ರೆಸ್ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ನಾಯಕರು ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ.

ಸಿದ್ದರಾಮಯ್ಯ
Siddaramaiah

ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ರಾಜ್ಯ ನಾಯಕರಾಗಿ ಹೊರಹೊಮ್ಮಲು ಯತ್ನಿಸುತ್ತಿರುವ ಮಾಜಿ ಸಚಿವ ಜಮೀರ್ ಅಹ್ಮದ್​ಗೆ ಬೆಂಬಲವಾಗಿ ನಿಂತಿರುವ ಸಿದ್ದರಾಮಯ್ಯ ನಡೆ ರಾಜ್ಯದ ಇತರೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ.

ನಿರಂತರವಾಗಿ ಜಮೀರ್ ಅಹ್ಮದ್​ಗೆ ಹೆಚ್ಚಿನ ಬೆಂಬಲ ವ್ಯಕ್ತಪಡಿಸುತ್ತಾ ತಾವು ತೆರಳಿದ ಕಡೆಯಲ್ಲ ಜೊತೆಯಲ್ಲಿ ಕರೆದೊಯ್ಯುತ್ತ ಅವರನ್ನು ಬೆಳೆಸುತ್ತಿರುವ ಸಿದ್ದರಾಮಯ್ಯ ನಡೆ ಬಗ್ಗೆ ಕೆಲ ಕಾಂಗ್ರೆಸ್ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ನಾಯಕರು ಬೇಸರಗೊಂಡಿದ್ದಾರೆ. ಇದರ ಫಲವಾಗಿಯೇ ಒಬ್ಬೊಬ್ಬರೆ ನಾಯಕರು ಸಿದ್ದರಾಮಯ್ಯ ಆಪ್ತವಲಯದಿಂದ ದೂರ ಸರಿಯುವ ಕಾರ್ಯ ಮಾಡುತ್ತಿದ್ದಾರೆ. ಕೆಲವರು ತಮ್ಮಷ್ಟಕ್ಕೆ ತಾವೇ ದೂರ ಸರಿದರೆ, ಮತ್ತೆ ಕೆಲವರು ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

ಇಬ್ರಾಹಿಂ ಹಾದಿಯಲ್ಲಿ ತನ್ವೀರ್?

ಕಳೆದ ಕೆಲ ತಿಂಗಳಿಂದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಪಕ್ಷದ ಸಕ್ರಿಯ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ವಿಶೇಷವಾಗಿ ಸಿದ್ದರಾಮಯ್ಯ ವಿರುದ್ಧ ಬೇಸರ ಹೊಂದಿರುವ ಅವರು, ಸಾಕಷ್ಟು ವಾಗ್ದಾಳಿ ಕೂಡ ನಡೆಸುತ್ತಿದ್ದಾರೆ. ಇದೀಗ ಇವರ ಸಾಲಿಗೆ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತನ್ವೀರ್ ಸೇಠ್ ಸೇರ್ಪಡೆಯಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

ಒಂದೆಡೆ ಮೈಸೂರು ಮೇಯರ್ ಪಟ್ಟ ಕಳೆದುಕೊಳ್ಳುವಲ್ಲಿ ಪಕ್ಷದ ಆಂತರಿಕ ಕಿತ್ತಾಟವೇ ಕಾರಣ ಎಂಬ ಮಾತು ಕೇಳಿ ಬರುತ್ತಿದ್ದು, ಪಕ್ಷದ ರಾಜ್ಯ ನಾಯಕರ ಮೇಲಾಟದಿಂದಾಗಿ ಮೇಯರ್ ಸ್ಥಾನ ಕೈತಪ್ಪಿದೆ. ಈ ಮಧ್ಯೆ ತನ್ವೀರ್ ಸೇಠ್ ಸಹ ಸಿದ್ದರಾಮಯ್ಯ ವಿರುದ್ಧ ತಮ್ಮ ಮುನಿಸು ತೀರಿಸಿಕೊಳ್ಳಲು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸೇಠ್ ವಿರುದ್ಧ ಕ್ರಮಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರು ಒತ್ತಾಯ:

ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸೇಠ್, ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಆಪ್ತ ವಲಯದಿಂದ ದೂರ ಸರಿಯುತ್ತಿದ್ದಾರೆ. ಇದೀಗ ಸರಿಯಾದ ಸಮಯ ನೋಡಿ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯ ಮಾಡಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಇಂತಹ ತೀರ್ಮಾನ ಕೈಗೊಂಡಿದ್ದೇನೆ ಎಂದು ತನ್ವೀರ್ ಸೇಠ್ ಹೇಳಿಕೊಂಡಿದ್ದರು. ಇದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಅಸಮಾಧಾನ ಹಾಗೂ ಅವರು ಜಮೀರ್ ಅಹ್ಮದ್ ಖಾನ್​​ರನ್ನು ಬೆಳೆಸುತ್ತಿರುವ ಪ್ರಯತ್ನವನ್ನು ಹಲವು ಕಾಂಗ್ರೆಸ್ ನಾಯಕರು ಖಂಡಿಸುತ್ತಿದ್ದು, ಇದರ ಭಾಗವಾಗಿಯೇ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ. ತನ್ವೀರ್ ಸೇಠ್ ವಿರುದ್ಧ ಕ್ರಮಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹ ಸೇಠ್​​ರಿಂದ ಮಾಹಿತಿ ಕೇಳಿದ್ದಾರೆ ಎನ್ನಲಾಗುತ್ತಿದೆ.

ಓದಿ: ತನ್ವೀರ್ ಸೇಠ್​ ಜೆಡಿಎಸ್​ಗೆ ಬಂದರೆ ಸ್ವಾಗತ: ಶಾಸಕ ಸಾ.ರಾ. ಮಹೇಶ್ ಮುಕ್ತ ಆಹ್ವಾನ

ಒಟ್ಟಾರೆ ಪಕ್ಷದ ಆಂತರಿಕ ಅಸಮಾಧಾನ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಕಾಂಗ್ರೆಸ್ ನಾಯಕರು ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details