ಕರ್ನಾಟಕ

karnataka

By

Published : Aug 2, 2023, 11:35 AM IST

ETV Bharat / state

ಅತಿಥಿ ಉಪನ್ಯಾಸಕರ ಗೌರವ ವೇತನ ಬಿಡುಗಡೆ ಮಾಡಿ: ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದ ಮಾಜಿ ಸಚಿವ ಸುರೇಶ್ ಕುಮಾರ್

ಕಳೆದ ಎರಡು ತಿಂಗಳಿನಿಂದ ಗೌರವ ವೇತನ ಇಲ್ಲದೇ ಅತಿಥಿ ಉಪನ್ಯಾಸಕರು ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಸುರೇಶ್​ ಕುಮಾರ್​ ಪತ್ರ ಬರೆದಿದ್ದಾರೆ.

Etv Bharat
Etv Bharat

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಳೆದ ಎರಡೂವರೆ ತಿಂಗಳಿನಿಂದ ಗೌರವ ವೇತನ ಬಿಡುಗಡೆಯಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬಾಕಿ ಉಳಿಸಿಕೊಂಡಿರುವ ಗೌರವ ವೇತನ ಬಿಡುಗಡೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್​ಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಮಾಜಿ ಸಚಿವರು ಬರೆದ ಪತ್ರ

ರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14 ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಬರುವ ಗೌರವ ವೇತನದ ಪ್ರಮಾಣ ಎಷ್ಟು ಕನಿಷ್ಠ ಎಂಬುದು ತಮಗೂ ಚೆನ್ನಾಗಿ ತಿಳಿದಿದೆ. ಇಷ್ಟು ಕಡಿಮೆ ವೇತನ ಪಡೆಯುತ್ತಿರುವ ಈ ಅತಿಥಿ ಉಪನ್ಯಾಸಕರಿಗೆ ಕಳೆದ ಮೇ ತಿಂಗಳು (16 ರಿಂದ), ಜೂನ್ ಹಾಗೂ ಜುಲೈ ಹೀಗೆ ಕಳೆದ ಎರಡೂವರೆ ತಿಂಗಳುಗಳಿಂದ ಗೌರವ ವೇತನ ದೊರೆತಿಲ್ಲ.

ಮಕ್ಕಳ ಶಾಲಾ ಶುಲ್ಕ, ದಿನನಿತ್ಯದ ಖರ್ಚು, ಮನೆ ಬಾಡಿಗೆ, ಒಂದೊಮ್ಮೆ ಮನೆಯಲ್ಲಿ ಯಾರಾದರೂ ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ತಗಲುವ ವೆಚ್ಚ. ಇವುಗಳನ್ನೆಲ್ಲಾ ಯಾವುದೇ ಒಂದು ಕುಟುಂಬ ಭರಿಸಲೇಬೇಕು. ಇವರುಗಳ ಕುಟುಂಬ ನಿರ್ವಹಣೆ ಯಾವ ರೀತಿ ಇರಬಹುದು ಎಂದು ಒಮ್ಮೆ ಯೋಚಿಸಿದರೆ ಬಹಳ ಬೇಸರವಾಗುತ್ತದೆ ಎಂದು ಪತ್ರದ ಮೂಲಕ ಅತಿಥಿ ಉಪನ್ಯಾಸಕರ ಕಷ್ಟವನ್ನು ವಿವರಿಸಿದ್ದಾರೆ.

ನಿಜಕ್ಕೂ ಸಂಕಷ್ಟದಲ್ಲಿರುವ ಈ ಅತಿಥಿ ಉಪನ್ಯಾಸಕರಿಗೆ ಕೂಡಲೇ ವೇತನ ದೊರೆಯುವಂತೆ ತಾವು ಕ್ರಮವಹಿಸಬೇಕೆಂದು ಕೋರುತ್ತೇನೆ ಎಂದು ಪತ್ರದ ಮೂಲಕ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್​ಗೆ ಮಾಜಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೇವಾ ಭದ್ರತೆ, ಕನಿಷ್ಠ ವೇತನ ನಿಗದಿ ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ಫ್ರೀಡಂ ಪಾರ್ಕ್​ನಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದರು. ಸರ್ಕಾರ ತಮಗೆ ಬೇಕಾದ ಸಂದರ್ಭದಲ್ಲಿ ನೇಮಕ ಮಾಡಿಕೊಂಡು ಆರ್ಥಿಕ ವರ್ಷ ಮುಗಿಯುತ್ತಿದ್ದಂತೆ ಕರ್ತವ್ಯದಿಂದ ಬಿಡುಗಡೆ ಮಾಡುತ್ತಿದೆ. ಕೇವಲ 8-10 ತಿಂಗಳ ಬಳಿಕ ಪುನಃ ಬೇರೆಡೆ ಕೆಲಸಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸರ್ಕಾರ ಈ ಧೋರಣೆ ಕೈಬಿಡಬೇಕು ಎಂದು ಅತಿಥಿ ಶಿಕ್ಷಕರು ಆಗ್ರಹಿಸಿದ್ದರು.

ರಾಜ್ಯದಲ್ಲಿ 33,159 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಸತತ 8-10 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದವರಿಗೂ ಸೇವಾ ಭದ್ರತೆ ಇಲ್ಲದಂತಾಗಿದೆ. ಕೇವಲ 10 ರಿಂದ 11 ಸಾವಿರ ವೇತನಕ್ಕಾಗಿ ದುಡಿಯುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಶಿಕ್ಷಕರು ಸಮಸ್ಯೆ ಬಗ್ಗೆ ತಿಳಿಸಿದ್ದರು.

ಇದನ್ನೂ ಓದಿ:ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲ : ಜೆಡಿಎಸ್‌ ಶಾಸಕ ಎಂ ಟಿ ಕೃಷ್ಣಪ್ಪ

ABOUT THE AUTHOR

...view details