ಬೆಂಗಳೂರು: ನೂತನವಾಗಿ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಹಾಗೂ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಫಿಲ್ಮ್ ಚೇಂಬರ್ ವತಿಯಿಂದ ಅಧ್ಯಕ್ಷ ಭಾ.ಮಾ ಹರೀಶ್, ಉಪಾಧ್ಯಕ್ಷ ಸಿ. ಶ್ರೀನಿವಾಸ, ಗೌರವ ಕಾರ್ಯದರ್ಶಿ ಸುಂದರರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಅಭಿನಂದನೆ ಸಲ್ಲಿಸಿದರು.
ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕನ್ನಡ ಚಿತ್ರರಂಗದ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಅದೇ ರೀತಿ ಈ ಸರ್ಕಾರವೂ ಚಲನಚಿತ್ರೋದ್ಯಮಕ್ಕೆ ಮೊದಲಿನಿಂದಲೂ ಹಲವು ರೀತಿಯ ಉತ್ತೇಜನ, ಪ್ರೋತ್ಸಾಹ ನೀಡುತ್ತಿದೆ ಎಂದು ಮಂಡಳಿ ಹೇಳಿಕೊಂಡಿದೆ.
ಈ ಭೇಟಿಯ ಸಂದರ್ಭದಲ್ಲಿ ಚಲನಚಿತ್ರ ಮಂಡಳಿ ಕೆಲವು ಬೇಡಿಕೆಗಳನ್ನು ಸಿಎಂ ಮುಂದಿಟ್ಟಿದೆ. ಚಿತ್ರ ತಯಾರಿಸಿ ಪಕ್ಕದ ರಾಜ್ಯದಲ್ಲಿ ಪ್ರದರ್ಶನಕ್ಕೆ ಬೇಕಾಗುವಂತಹ ಡಿಜಿಟಲ್ ಡಿಸಿಪಿ ಪಡೆಯಬೇಕಾಗಿದ್ದು ನಿರ್ಮಾಪಕರಿಗೆ ಇಂದಿಗೂ ಕಷ್ಟಕರವಾಗಿದೆ. ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಈಗಾಗಲೇ ಪ್ರೊಜೆಕ್ಟರ್ ಥಿಯೇಟರ್ ಆಳವಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಯೋಗದೊಂದಿಗೆ 20 ಕೋಟಿ ರೂ ವೆಚ್ಚದಲ್ಲಿ ಡಿಜಿಟಲ್ ಯಂತ್ರೋಪಕರಣಗಳನ್ನು ಸ್ಥಾಪಿಸಲು ಆಯವ್ಯಯದಲ್ಲಿ ಹಣ ನಿಗದಿಪಡಿಸಿಕೊಡಬೇಕಾಗಿ ವಿನಂತಿಸಿದ್ದಾರೆ. ಒಂದು ಪ್ರೊಜೆಕ್ಟರ್ ಖರೀದಿಗೆ 10 ಲಕ್ಷದಿಂದ 15 ಲಕ್ಷ ಸಹಾಯಧನ ನೀಡುವಂತೆ ಮನವಿ ಮಾಡಿದ್ದಾರೆ.