ಕರ್ನಾಟಕ

karnataka

By

Published : Jul 12, 2023, 9:45 AM IST

ETV Bharat / state

ಚಿತ್ರರಂಗದ ಬೇಡಿಕೆ ಈಡೇರಿಸುವಂತೆ ಸಿಎಂ, ಡಿಸಿಎಂಗೆ ಫಿಲ್ಮ್ ಚೇಂಬರ್ ಮನವಿ

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಕರ್ನಾಟಕ ಫಿಲ್ಮ್ ಚೇಂಬರ್ ನಿಯೋಗ ಭೇಟಿ ಮಾಡಿ ಕೆಲವು ಬೇಡಿಕೆಗಳನ್ನು ಸಲ್ಲಿಸಿದೆ.

film-chamber-requests-the-cm-dcm-to-fulfill-the-demands-of-the-film-industry
ಚಿತ್ರರಂಗದ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ, ಡಿಸಿಎಂಗೆ ಫಿಲ್ಮ್ ಚೇಂಬರ್ ಮನವಿ

ಬೆಂಗಳೂರು: ನೂತನವಾಗಿ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಹಾಗೂ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಫಿಲ್ಮ್ ಚೇಂಬರ್ ವತಿಯಿಂದ ಅಧ್ಯಕ್ಷ ಭಾ.‌ಮಾ ಹರೀಶ್, ಉಪಾಧ್ಯಕ್ಷ ಸಿ. ಶ್ರೀನಿವಾಸ, ಗೌರವ ಕಾರ್ಯದರ್ಶಿ ಸುಂದರರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಅಭಿನಂದನೆ ಸಲ್ಲಿಸಿದರು.

ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕನ್ನಡ ಚಿತ್ರರಂಗದ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಅದೇ ರೀತಿ ಈ ಸರ್ಕಾರವೂ ಚಲನಚಿತ್ರೋದ್ಯಮಕ್ಕೆ ಮೊದಲಿನಿಂದಲೂ ಹಲವು ರೀತಿಯ ಉತ್ತೇಜನ, ಪ್ರೋತ್ಸಾಹ ನೀಡುತ್ತಿದೆ ಎಂದು ಮಂಡಳಿ ಹೇಳಿಕೊಂಡಿದೆ.

ಈ ಭೇಟಿಯ ಸಂದರ್ಭದಲ್ಲಿ ಚಲನಚಿತ್ರ ಮಂಡಳಿ ಕೆಲವು ಬೇಡಿಕೆಗಳನ್ನು ಸಿಎಂ ಮುಂದಿಟ್ಟಿದೆ. ಚಿತ್ರ ತಯಾರಿಸಿ ಪಕ್ಕದ ರಾಜ್ಯದಲ್ಲಿ ಪ್ರದರ್ಶನಕ್ಕೆ ಬೇಕಾಗುವಂತಹ ಡಿಜಿಟಲ್ ಡಿಸಿಪಿ ಪಡೆಯಬೇಕಾಗಿದ್ದು ನಿರ್ಮಾಪಕರಿಗೆ ಇಂದಿಗೂ ಕಷ್ಟಕರವಾಗಿದೆ. ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಈಗಾಗಲೇ ಪ್ರೊಜೆಕ್ಟರ್ ಥಿಯೇಟರ್ ಆಳವಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಯೋಗದೊಂದಿಗೆ 20 ಕೋಟಿ ರೂ ವೆಚ್ಚದಲ್ಲಿ ಡಿಜಿಟಲ್ ಯಂತ್ರೋಪಕರಣಗಳನ್ನು ಸ್ಥಾಪಿಸಲು ಆಯವ್ಯಯದಲ್ಲಿ ಹಣ ನಿಗದಿಪಡಿಸಿಕೊಡಬೇಕಾಗಿ ವಿನಂತಿಸಿದ್ದಾರೆ. ಒಂದು ಪ್ರೊಜೆಕ್ಟರ್ ಖರೀದಿಗೆ 10 ಲಕ್ಷದಿಂದ 15 ಲಕ್ಷ ಸಹಾಯಧನ ನೀಡುವಂತೆ ಮನವಿ ಮಾಡಿದ್ದಾರೆ.

ತಾತ್ಕಾಲಿಕ ಚಿತ್ರಮಂದಿರಗಳ ಅವಧಿ ವಿಸ್ತರಣೆ: ರಾಜ್ಯದಲ್ಲಿ ಸುಮಾರು 200 ತಾತ್ಕಾಲಿಕ ಮತ್ತು ಅರೆ ಖಾಯಂ ಚಿತ್ರಮಂದಿರಗಳನ್ನಾಗಿ ಪರಿವರ್ತಿಸಲು ಬಯಸಿರುವ ಕಾರಣ ನಿಯಮ 117 (2) (1)p ದಿನಾಂಕ 31-12-2030ರವರೆಗೆ ವಿಸ್ತರಿಸುವಂತೆ ತಿದ್ದುಪಡಿ ತರಲು ಗೃಹ ಇಲಾಖೆಗೆ ನಿರ್ದೇಶಿಸಬೇಕಾಗಿ ಮನವಿ ಮಾಡಿದ್ದಾರೆ. ಸರ್ಕಾರವು ಚಿತ್ರರಂಗವನ್ನು ಕೈಗಾರಿಕಾ ಉದ್ಯಮವೆಂದು ಘೋಷಣೆ ಮಾಡಿದ್ದು, ಪೂರಕ ಇಲಾಖೆಗಳು ಚಿತ್ರರಂಗವನ್ನು ಕೈಗಾರಿಕಾ ಉದ್ಯಮವೆಂದು ಪರಿಗಣಿಸಲು ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಬೇಕಾಗಿ ಕೇಳಿಕೊಂಡಿದ್ದಾರೆ.

ಸಿನಿಮಾ ಟಿಕೆಟ್​​ ದರ ನಿಗದಿಗೆ ಮನವಿ: ಮಲ್ಟಿಫ್ಲೆಕ್ಸ್​​ಗಳಲ್ಲಿ 250 ಮತ್ತು ಸಿಂಗಲ್​ ಸ್ಕ್ರೀನ್​​ ಚಿತ್ರಮಂದಿರಗಳಲ್ಲಿ150/-ಗೆ ಮೀರದಂತೆ ಟಿಕೆಟ್​ ದರವನ್ನು ನಿಗದಿಗೆ ಮನವಿ ಮಾಡಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ಪ್ರತ್ಯೇಕ ಮನವಿಯನ್ನು ನಿಯೋಗ ಸಲ್ಲಿಸಿದ್ದು, ಕರ್ನಾಟಕ ಚಿತ್ರ ಪ್ರದರ್ಶಕರ ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇದ್ದು, ಕಟ್ಟಡದಲ್ಲಿ ಆಡಳಿತ ಮತ್ತು ಸದಸ್ಯರು ತಂಗಲು ಕೊಠಡಿಗಳನ್ನು ನಿರ್ಮಿಸಬೇಕು ಎಂದು ಕೇಳಿಕೊಂಡಿದ್ದಾರೆ. ವಾಣಿಜ್ಯ ಮಂಡಳಿಯ ಸದಸ್ಯರುಗಳಿಗೆ ಕಲ್ಚರಲ್​ ಕ್ಲಬ್‌ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:50 ದಿನ ಪೂರೈಸಿದ 'ಡೇರ್​ ಡೆವಿಲ್​ ಮುಸ್ತಫಾ': ಚಿತ್ರ ತಂಡದಿಂದ ಬಿರಿಯಾನಿ, ಪುಳಿಯೋಗರೆ ಪಾರ್ಟಿ

ABOUT THE AUTHOR

...view details