ಕರ್ನಾಟಕ

karnataka

ETV Bharat / state

ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಹೇಬಿಯಸ್ ಕಾರ್ಪಸ್ ಹಾಕಿದ್ದವನಿಗೆ ದಂಡ: ಕಾರಣ?

ಅರ್ಜಿದಾರ ಗೌರವ್ ರಾಜ್ ಜೈನ್ ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರ್ವಕ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಮಗು ತಾಯಿಯ ಆರೈಕೆಯಲ್ಲಿ ಸುರಕ್ಷಿತವಾಗಿದೆ. ಈ ವಿಚಾರ ತಿಳಿದೂ ಪತಿ ಅರ್ಜಿ ಸಲ್ಲಿಸಿದ್ದಾನೆ. ಮಗು ನೋಡಬೇಕಿದ್ದಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಅದು ಬಿಟ್ಟು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಹೈಕೋರ್ಟ್ ಸಮಯ ಹಾಳು ಮಾಡಿದ್ದಾನೆ ಎಂದು ಉಚ್ಚ ನ್ಯಾಯಾಲಯ ದಂಡ ವಿಧಿಸಿದೆ.

By

Published : Jan 24, 2022, 5:22 PM IST

ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಹೇಬಿಯಸ್ ಕಾರ್ಪಸ್ ಹಾಕಿದ್ದ ವ್ಯಕ್ತಿ
ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಹೇಬಿಯಸ್ ಕಾರ್ಪಸ್ ಹಾಕಿದ್ದ ವ್ಯಕ್ತಿ

ಬೆಂಗಳೂರು: ಅನಾರೋಗ್ಯಕ್ಕೆ ತುತ್ತಾಗಿರುವ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಪತ್ನಿ ವಿರುದ್ಧ ಸುಳ್ಳು ಕೇಸ್ ಹಾಕಿದ್ದ ಪತಿಗೆ ಹೈಕೋರ್ಟ್ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ತನ್ನ ಮಗಳನ್ನು ಪತ್ನಿ ಬಂಧನದಲ್ಲಿಟ್ಟಿದ್ದಾಳೆ. ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಸುಳ್ಳು ಆರೋಪ ಮಾಡಿ ನಗರದ ಕಾಡುಬೀಸನಹಳ್ಳಿ ನಿವಾಸಿ ಗೌರವ್ ರಾಜ್ ಜೈನ್ ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಎಂ.ಜಿ ಉಮಾ ಅವರಿದ್ಧ ವಿಭಾಗೀಯ ಪೀಠ ಅರ್ಜಿದಾರನಿಗೆ ದಂಡ ವಿಧಿಸಿ ಆದೇಶಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಗೌರವ್ ರಾಜ್ ಜೈನ್ ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರ್ವಕ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಮಗು ತಾಯಿಯ ಆರೈಕೆಯಲ್ಲಿ ಸುರಕ್ಷಿತವಾಗಿದೆ. ಈ ವಿಚಾರ ತಿಳಿದೂ ಪತಿ ಅರ್ಜಿ ಸಲ್ಲಿಸಿದ್ದಾನೆ. ಮಗು ನೋಡಬೇಕಿದ್ದಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಅದು ಬಿಟ್ಟು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಹೈಕೋರ್ಟ್ ಸಮಯ ಹಾಳು ಮಾಡಿದ್ದಾನೆ ಎಂದು ಬೇಸರ ಹೊರಹಾಕಿತು.

ಅಲ್ಲದೇ, ಹೇಬಿಯಸ್ ಕಾರ್ಪಸ್ ನಂತಹ ಅರ್ಜಿಗಳನ್ನು ಯಾವುದೇ ವ್ಯಕ್ತಿ ಅಕ್ರಮ ಬಂಧನದಲ್ಲಿದ್ದಾಗ ಆತನ ಬಿಡುಗಡೆಗೆ ಕೋರಿ ಸಲ್ಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಮಗು ತಾಯಿಯ ಬಳಿ ಇದೆ ಎಂಬುದು ತಿಳಿದೂ ಅರ್ಜಿ ಸಲ್ಲಿಸಲಾಗಿದೆ. ತಾಯಿ-ಮಗು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರನ್ನು, ಆಡಳಿತವನ್ನು ಅನಗತ್ಯವಾಗಿ ಬಳಕೆ ಮಾಡಿಕೊಳ್ಳುವಂತಾಗಿದೆ. ಇಂತಹ ದುರುದ್ದೇಶಪೂರಿತ ಅರ್ಜಿಗಳನ್ನು ದಾಖಲಿಸುವ ಪ್ರವೃತ್ತಿಯನ್ನು ಹತ್ತಿಕ್ಕಬೇಕಿದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರ ಗೌರವ್ ರಾಜ್ ಜೈನ್ ಗೆ 50 ಸಾವಿರ ದಂಡ ವಿಧಿಸಿದೆ. ಅಲ್ಲದೇ, ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಪೊಲೀಸ್ ಕಲ್ಯಾಣ ನಿಧಿಗೆ ಪಾವತಿಸಬೇಕು. ದಂಡ ಪಾವತಿಸಲು ವಿಫಲವಾದರೆ ಜಿಲ್ಲಾಧಿಕಾರಿ ಆಸ್ತಿ ಜಪ್ತಿ ಮಾಡಬಹುದು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಗೌರವ್ ರಾಜ್ ದಂಪತಿ ನಡುವೆ ಮನಸ್ತಾಪ ಉಂಟಾಗಿ ಪತ್ನಿ ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಮಗಳಿಗೆ ಅನಾರೋಗ್ಯ ಇದ್ದುದರಿಂದ ತಾಯಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. ಪತಿಗೆ ಮಗಳನ್ನು ನೋಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಪತಿ ಹೈಕೋರ್ಟ್ ಗೆ ಸುಳ್ಳು ಆರೋಪಗಳನ್ನು ಮಾಡಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಅರ್ಜಿಯಲ್ಲಿ ಪತ್ನಿ ಮಗಳನ್ನು ಬಂಧಿಸಿಟ್ಟಿದ್ದಾಳೆ. ಮಗು ಜೀವಕ್ಕೆ ಅಪಾಯವಿದೆ. ಮಗು ಜೀವಂತ ಇದೆಯೋ ಇಲ್ಲವೋ ಎಂಬುದೂ ತಿಳಿಯುತ್ತಿಲ್ಲ. ಮಗಳ ರಕ್ಷಣೆಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಕೋರಿದ್ದ.

ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾದ ಪತ್ನಿ, ಮಗಳಿಗೆ ಅನಾರೋಗ್ಯವಿದೆ. ದೆಹಲಿ ಸಮೀಪದ ಕತೌಳಿ ಎಂಬಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಈ ವಿಚಾರ ತಿಳಿದೂ ಪತಿ ನ್ಯಾಯಾಲಯಕ್ಕೆ ದುರುದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ಪತಿ ದುರುದುದ್ದೇಶದಿಂದ ಅರ್ಜಿ ಸಲ್ಲಿಸಿದ್ದು ಬೆಳಕಿಗೆ ಬಂದಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details