ಬೆಂಗಳೂರು:ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ, ರಾಜ್ಯದಲ್ಲಿ 14 ವರ್ಷದೊಳಗಿನ 25 ಸಾವಿರ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದು, 9.8 ಲಕ್ಷ ಮಕ್ಕಳು ಅಂಗನಾಡಿಗಳಿಂದ ದೂರ ಉಳಿದಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ಮಕ್ಕಳನ್ನು ಮರಳಿ ಅಂಗನವಾಡಿ, ಶಾಲೆಗಳಿಗೆ ಕರೆತರಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ತಂತ್ರಾಂಶ ಆಧಾರಿತ ಮಾಹಿತಿ ಸಂಗ್ರಹಣೆ ನಡೆಸುತ್ತಿದೆ.
ಕೋವಿಡ್ ನಂತರ ಶೈಕ್ಷಣಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ್ದರೂ ಅಂಗನವಾಡಿ ಮತ್ತು ಶಾಲೆಗಳಿಂದ ದೂರ ಉಳಿದ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಜಾಗೃತಿ ಮೂಡಿಸುತ್ತಿದ್ದರೂ ಶಾಲೆಗಳಿಂದ ದೂರ ಉಳಿದ ಮಕ್ಕಳು ಶಾಲೆಗಳತ್ತ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಶಿಕ್ಷಣ ಇಲಾಖೆ ಇದೀಗ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನ ಚುರುಕುಗೊಳಿಸಲು ಮುಂದಾಗಿದೆ.
ಶಾಲೆಯಿಂದ ದೂರ ಉಳಿದ ಮಕ್ಕಳ ಅಂಕಿ-ಅಂಶ:ಶಾಲೆಯಿಂದ ದೂರ ಉಳಿದ 6-14 ವರ್ಷದೊಳಗಿನ ಮಕ್ಕಳ ಸಂಖ್ಯೆ: 15,338. ಶಾಲೆಗೆ ದಾಖಲಾಗದೇ ಉಳಿದ 6-14 ವರ್ಷದೊಳಗಿನ ಮಕ್ಕಳ ಸಂಖ್ಯೆ: 10,018. ಅಂಗನವಾಡಿಯಿಂದ ದೂರ ಉಳದ 0-3 ವರ್ಷದೊಳಗಿನ ಮಕ್ಕಳ ಸಂಖ್ಯೆ: 4,54,238. ಅಂಗನವಾಡಿಗೆ ದಾಖಲಾಗಿಲ್ಲದ 4-6 ವರ್ಷದೊಳಗಿನ ಮಕ್ಕಳ ಸಂಖ್ಯೆ: 5,33,206.
ರಾಜ್ಯದಲ್ಲಿ 6-14 ವರ್ಷದೊಳಗಿನ 25 ಸಾವಿರ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದು, 9.8 ಲಕ್ಷ ಮಕ್ಕಳು ಅಂಗನಾಡಿಗಳಿಂದ ದೂರ ಉಳಿದಿದ್ದಾರೆ ಎನ್ನುವ ಮಾಹಿತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನೀಡಿದೆ. ಈ ಮಕ್ಕಳನ್ನು ಮರಳಿ ಶಾಲೆ ತರಲೆಂದೇ ವಸತಿರಹಿತ ಶಾಲಾಧಾರಿತ ತರಬೇತಿ, ವಸತಿ ಸಹಿತ ಶಾಲಾಧಾರಿತ ತರಬೇತಿ, ಟೆಂಟ್ ಶಾಲಾ ಕಾರ್ಯಕ್ರಮ, ಕೆಕೆಜಿಬಿವಿ ಮತ್ತು ಕೆಜಿಬಿವಿ ವಿದ್ಯಾರ್ಥಿಗಳ ವಸತಿ ಶಾಲೆಗಳ ಯೋಜನೆ, ಋತುಮಾನ ಶಾಲೆ, ಚಿಣ್ಣರ ಅಂಗಳ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಪೋಷಕರ ಸಭೆ, ಪಾಲಕರ ಮನೆಗೆ ಭೇಟಿಯಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಸರ್ಕಾರ ಪ್ರಯತ್ನ ನಡೆಸಿದೆ.
ವಿಶೇಷ ದಾಖಲಾತಿ ಆಂದೋಲನಾ, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಉಪಹಾರ ಯೋಜನೆ, ಕ್ಷೀರಭಾಗ್ಯ, ಶಿಷ್ಯವೇತನ ನೀಡುವ ಮೂಲಕ ಮಕ್ಕಳನ್ನು ಶಾಲೆಗಳ ಕಡೆ ಆಕರ್ಷಿಸಲು ಮುಂದಾಗಿದೆ.